Dharwad News: ಧಾರವಾಡ: ಧಾರವಾಡ ಜಿಲ್ಲೆ ನವಲಗುಂದದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದ ಜೊತೆ ಮಾತನಾಡಿದ್ದು, ಇವತ್ತು ಶಾಸಕ ಕೋನರಡ್ಡಿ ಬರ್ತಡೇ ಇದೆ. ಬರ್ತಡೇ ಹೊತ್ತೆ ವಿವಿಧ ಇಲಾಖೆಗಳ ಯೋಜನೆಗಳ ಪೂಜೆ ಆಗಿದೆ. ಇವತ್ತಿನಿಂದ ಅನೇಕ ಕಾಮಗಾರಿ ಪ್ರಾರಂಭಿಸುತ್ತಿದ್ದಾರೆ. ನಮ್ಮ ಇಲಾಖೆ ಕಾಮಗಾರಿಗಳೂ ಇವೆ. ಒಳ್ಳೆ ಕೆಲಸ ಇದು. ಈ ಭಾಗದ ಜನರ ಬಹು ದಿನಗಳ ರಸ್ತೆ ಬೇಡಿಕೆ ಇದ್ದವು. ಅದೆಲ್ಲವೂ ಈಡೇರುತ್ತಿವೆ. ಸರ್ಕಾರದ ಎಲ್ಲ ಯೋಜನೆ ಈ ಭಾಗಕ್ಕೆ ತರುವ ಪ್ರಯತ್ನ ಕೋನರಡ್ಡಿ ಮಾಡುತ್ತಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಲು ನಾನೂ ಬಂದಿದ್ದೇನೆ. ಈಗಾಗಲೇ 47 ಕೋಟಿ ನವಲಗುಂದ ಕ್ಷೇತ್ರಕ್ಕೆ ಕೊಟ್ಟಿದ್ದೇವೆ. ಈ ಕ್ಷೇತ್ರಕ್ಕೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಇಷ್ಟಕ್ಕೆ ಸಮಸ್ಯೆ ಪರಿಹಾರ ಆಗಿಲ್ಲ. ಇನ್ನೂ ಬಹಳಷ್ಟು ಬೇಡಿಕೆ ಇವೆ. ಮುಂದಿನ ಮೂರು ವರ್ಷದಲ್ಲಿ ಹಂತ ಹಂತವಾಗಿ ಈಡೇರಿಸುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ..
ಸಿದ್ದರಾಮಯ್ಯ ನಾಯಕತ್ವದಲ್ಲೇ ಮುಂದಿನ ಚುನಾವಣೆಗಳನ್ನು ಎದುರಿಸುವ ವಿಚಾರದ ಬಗ್ಗೆ ಮಾತನಾಡಿರುವ ಸಚಿವರು, ಆ ತೀರ್ಮಾನ ದೆಹಲಿಯವರು ಮಾಡುತ್ತಾರೆ. ಯಾರ ನೇತೃತ್ವ, ಯಾರು ಸಾರಥಿ ಅಂತಾ ನಿರ್ಣಯ ದೆಹಲಿಯವರು ಮಾಡುತ್ತಾರೆ. ಬಿಜೆಪಿ ಗ್ಯಾರಂಟಿ ಯೋಜನೆ ಟೀಕಿಸಿದ್ದರು. ದೆಹಲಿಯಲ್ಲಿ ಅವರೇ ಈಗ ಕೊಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಕೊಟ್ಟಿದಾರೆ. ಈ ಬಗ್ಗೆ ಪ್ರಹ್ಲಾದ ಜೋಶಿಯವರನ್ನೇ ಕೇಳಬೇಕು. ದೆಹಲಿಯಲ್ಲಿ ನಮಗಿಂತ 500 ಜಾಸ್ತಿ ಮಾಡಿದ್ದಾರೆ. ರಾಜಕೀಯಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಆದರೆ ಇದು ಒಳ್ಳೆಯ ಯೋಜನೆ. ಅದಕ್ಕಾಗಿ ಅವರೂ ಕೊಡುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಡಿಕೆಶಿ ಮುಂದಿನ ಹತ್ತು ವರ್ಷ ನಾನೇ ನಾಯಕ ಎಂದಿರೋ ವಿಚಾರದ ಬಗ್ಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ಅದನ್ನು ಹೈಕಮಾಂಡ ನಿರ್ಣಯ ಮಾಡುತ್ತದೆ. ನಿರ್ಧಾರ ಮಾಡುವ ಮಾಲೀಕರು ಯಾರು? ನಮ್ಮ ಮಾಲೀಕರು ದೆಹಲಿಯಲ್ಲಿ ಇದಾರೆ.
ಎರಡೂವರೆ ವರ್ಷ ಬಳಿಕ ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅದು ನಮಗೆ ಗೊತ್ತಿಲ್ಲ. ಅದನ್ನು ದೆಹಲಿಯವರನ್ನೇ ಕೇಳಬೇಕು. ಸದ್ಯ ದಲಿತ ಸಿಎಂ ಪ್ರಶ್ನೆ ಇಲ್ಲ ಎಂದಿದ್ದಾರೆ.
ಜಾರಕಿಹೊಳಿ ಸಿಎಂ ಎಂಬ ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಜಾರಕಿಹೊಳಿ, ಅದು ನಮ್ಮ ಅಭಿಮಾನಿಗಳು ಹೇಳ್ತಾರೆ. ನಮ್ಮ ಅಭಿಮಾನಿಗಳಿಗೆ ನಾನು ಸಿಎಂ ಆಗಬೇಕೆಂಬ ಆಸೆ ಇದೆ. ಎಲ್ಲರಿಗೂ ಅಭಿಮಾನಿ ಇದಾರೆ. ಅವರವರ ಅಭಿಮಾನಿ ತನ್ನ ನಾಯಕರೇ ಸಿಎಂ ಆಗಲಿ ಅಂತಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಆಕಾಂಕ್ಷಿ ಬಹಳ ಜನ ಇದಾರೆ. ಆದರೆ ಸಂಪುಟ ವಿಸ್ತರಣೆ ಯಾವಾಗ ಅನ್ನೋದು ಗೊತ್ತಿಲ್ಲ ಎಂದು ಸಚಿವರು ಹೇಳಿದ್ದಾರೆ.
ಧಾರವಾಡ ಕೈಗಾರಿಕೆಗೆ ಹಿಡಕಲ್ ಡ್ಯಾಮ್ ನೀರು ತರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅದರ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಅದು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ವಿಚಾರ ಇದೆ. ಬೆಂಗಳೂರಿನಲ್ಲಿ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡುತ್ತದೆ. ನೀರಿನ ಮಾರ್ಗ ಡೈವರ್ಟ್ ಮಾಡುತ್ತಿದ್ದಾರಾ ಗೊತ್ತಿಲ್ಲ. ಆದರೆ ನೀರು ಒಯ್ಯುವ ವಿಚಾರ ಮಾತ್ರ ಗೊತ್ತು. ಈಗಾಗಲೇ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಶುರುವಾಗಿವೆ. ಸರ್ಕಾರವೇ ಈ ಬಗ್ಗೆಬೆಳಕು ಚೆಲ್ಲಬೇಕು ಎಂದಿದ್ದಾರೆ.
ಬಸ್ ನಿರ್ವಾಹಕನ ಮೇಲೆ ಮರಾಠಿಗರ ಹಲ್ಲೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ತನಿಖೆ ನಡೀತಾ ಇದೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅದು ಏನಾಗುತ್ತೆ ಕಾದು ನೋಡೋಣ ಎಂದಿದ್ದಾರೆ.