ಜಲಾವೃತ ಕೇಂದ್ರೀಯ ವಿಹಾರದಲ್ಲಿ ಸಿಎಂ ಬೊಮ್ಮಾಯಿ ಪರಿಶೀಲನೆ

ಬೆಂಗಳೂರು: ಭಾನುವಾರ ಸುರಿದ ಭಾರಿ ಮಳೆಯಿಂದ ನೀರು ತುಂಬಿಕೊಂಡಿರುವ ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.

ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರೊಂದಿಗೆ ಜೀಪ್‌ನಲ್ಲಿ ತೆರಳಿದ ಬೊಮ್ಮಾಯಿ, ಉಂಟಾದ ಹಾನಿ, ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಳೆದ ಮೂರು ದಿನಗಳಿಂದ ಯಲಹಂಕ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ಯಲಹಂಕ ಕೆರೆ ಕೋಡಿ ಒಡೆದು ಯಲಹಂಕ ಭಾಗದ ಮತ್ತು ಕೆಳಗೆ ಇರುವ ಪ್ರದೇಶಗಳ ಹಲವಾರು ಮನೆಗಳಿಗೆ ನೀರು ನುಗ್ಗಿ ಬಹಳ ಸಮಸ್ಯೆಯಾಗಿದೆ. 603 ಫ್ಲ್ಯಾಟ್ ಇರುವ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ನಾಲ್ಕೈದು ಅಡಿ ನೀರು ನಿಂತು ಜನ ಓಡಾಡಲೂ ಕಷ್ಟವಾಗಿದೆ. ಶಾಸಕ ವಿಶ್ವನಾಥ್ ಅವರು ಜನರಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್, ವಾಹನಗಳ ಮೂಲಕ ಮನೆಗೆ-ಹೊರಗೆ ಸಾಗಿಸಿದ್ದಾರೆ, ನೀರು ಸೇರಿದಂತೆ ಅಗತ್ಯ ಎಲ್ಲ ವಸ್ತುಗಳನ್ನೂ ಪೂರೈಕೆ ಮಾಡಿದ್ದಾರೆ ಎಂದು ತಿಳಿಸಿದರು.

About The Author