Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಆಮ್ ಆದ್ಮಿ ಪಕ್ಷದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರ ಸಿಎಂ, ಡಿಸಿಎಂ ಎಲ್ಲರೂ ಜೈಲಿಗೆ ಹೋಗಿ ಬಂದವರು. ಆಪ್ ಪಕ್ಷದ ಎಂಟತ್ತು ಜನ ಸಚಿವರೂ ಸಹ ಜೈಲಿಗೆ ಹೋಗಿ ಬಂದಿದ್ದಾರೆ. ಈಗಲೂ ಸಹ ಕೆಲವೊಬ್ಬರು ಜೈಲಿನಲ್ಲಿದ್ದಾರೆ. ಬೇರೆಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡೋಕೆ ಆಮ್ ಆದ್ಮಿಯವರಿಗೆ ಯಾವುದೇ ನೈತಿಕತೆ ಇಲ್ಲ. ರಾಹುಲ್ ಗಾಂಧಿ ಭ್ರಷ್ಟ ಅಂತಾ ಹೇಳ್ತಾರೆ. ಇಲ್ಲಿಯವರೆಗೂ ಇಂಡಿ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದರು..?
ಭ್ರಷ್ಟಾಚಾರದ ಬಗ್ಗೆ ಮಾತನಾಡುವವರು ಇಂಡಿ ಮೈತ್ರಿಕೂಟಕ್ಕೆ ಹೋಗಬಾರದಿತ್ತು. ಈಗ ಚುನಾವಣೆ ಹಿನ್ನೆಲೆ ಈ ರೀತಿ ಮಾತನಾಡುತ್ತಿದ್ದಾರೆ. ಇಡೀ ದೇಶವನ್ನ ಲೂಟು ಮಾಡಿದ ನಂಬರ್ ಒನ್ ಪಕ್ಷ ಕಾಂಗ್ರೆಸ್. ರಾಹುಲ್ ಗಾಂಧಿ ಕುಟುಂಬ ಭ್ರಷ್ಟಾಚಾರದಲ್ಲಿ ಸಂಪೂರ್ಣ ಮುಳುಗಿದೆ. ರಾಹುಲ್ ಗಾಂಧಿ ಬಗ್ಗೆ ಈಗ ಕೇಜ್ರೀವಾಲ್ ಅವರಿಗೆ ಜ್ಞಾನೋದಯವಾಗಿದೆ ಎಂದು ಶೆಟ್ಟರ್ ಹೇಳಿದರು.
ಬಿಜೆಪಿ ಆಂತರಿಕ ಒಳಜಗಳ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಶೆಟ್ಟರ್, ಪಕ್ಷದಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ವರಿಷ್ಠರು ಎಲ್ಲವನ್ನೂ ಸರಿಪಡಿಸಲಿದ್ದಾರೆ. ಪಕ್ಷ ಬಹುದೊಡ್ಡದಾಗಿ ಬೆಳದಾಗ ಆಂತರಿಕ ವೈಮನಸ್ಸು ಸಹಜ. ಶೀಘ್ರವೇ ಎಲ್ಲವೂ ಸರಿಹೋಗುತ್ತೆ. ಬಣ ರಾಜಕೀಯಕ್ಕೆ ಪಕ್ಷದ ವರಿಷ್ಠರು ಶೀಘ್ರದಲ್ಲೇ ತಿಲಾಂಜಲಿ ಹಾಡಲಿದ್ದಾರೆ ಎಂದಿದ್ದಾರೆ.
ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರದ ಬಗ್ಗೆ ಮಾತನಾಡಿರುವ ಶೆಟ್ಟರ್, ಈ ವಿಚಾರವಾಗಿ ಕಾಂಗ್ರೆಸ್ ಗೆ ಹೋಗಲ್ಲ ಅಂತಾ ಶ್ರೀರಾಮುಲು ಈಗಾಗಲೇ ಹೇಳಿದ್ದಾರೆ. ಆದ್ರೂ ಸಹ ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ ಅನ್ನೋ ಕಾಂಗ್ರೆಸ್ ನವರದ್ದು ಬೆಂಕಿ ಹಚ್ಚುವ ಕೆಲಸ. ಕಾಂಗ್ರೆಸ್ ಕೇವಲ ಬೆಂಕಿ ಹಚ್ಚುವ ಕೆಲಸ ಮಾಡುತ್ತೆ ಎಂದು ಶೆಟ್ಟರ್ ಹೇಳಿದರು.
ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಹಾವಳಿ ವಿಚಾರದ ಬಗ್ಗೆ ಮಾತನಾಡಿರುವ ಶೆಟ್ಟರ್, ಬಡ ಮತ್ತು ಮದ್ಯಮವರ್ಗದ ಜನರು ತುರ್ತು ಸಂದರ್ಭದಲ್ಲಿ ಸಾಲ ತೆಗೆದುಕೊಂಡಿರುತ್ತಾರೆ. ಮೈಕ್ರೋಫೈನಾನ್ಸ್ ನಿಂದ ಜನಸಾಮಾನ್ಯರಿಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದೆ. ನಿನ್ನೆ ಸಿಎಂ ಸಿದ್ಧರಾಮಯ್ಯ ಕಠಿಣ ಕಾನೂನುಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದ್ದ ಕಾನೂನಿನಲ್ಲೇ ಕ್ರಮಕೈಗೊಳ್ಳಬಹುದಿತ್ತು.
ಹೊಸ ಕಾನೂನು ತರುವ ಅವಶ್ಯಕತೆಯೇ ಇಲ್ಲ. ಸಿಎಂ ಸುಮ್ಮನೇ ತೋರಿಕೆಗೆ ಸಭೆ ನಡೆಸಿದ್ದಾರೆ. ಈ ರೀತಿ ತೋರಿಕೆಗೆ ಸಭೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡುವುದು ಸಮಂಜಸವಲ್ಲ. ಈಗಾಗಲೇ ಇರುವಂತಹ ಕಾನೂನಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಸರ್ಕಾರದಿಂದಲೇ ಜನಸಾಮಾನ್ಯರಿಗೆ ಸಾಲ ನೀಡುವ ಕೆಲಸಗಳಾಗಬೇಕು ಎಂದು ಶೆಟ್ಟರ್ ಹೇಳಿದ್ದಾರೆ.

