ಕೋಲಾರ: ರಾಮನಗರದಲ್ಲಿ ನಿನ್ನ ನಡೆದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಎದುರೇ ರೌಡಿಸಂ ಪ್ರದರ್ಶನ ಮಾಡಿದ ಸಂಸದ ಡಿಕೆ ಸುರೇಶ್ (DK Suresh) ರವರದ್ದು ನೀಚತನದ ರಾಜಕಾರಣವಾಗಿದ್ದು, ಈ ಕೂಡಲೇ ಅವರು ರಾಜ್ಯದ ಜನತೆಯ ಕ್ಷಮೆ ಯಾಚಿಸಿ ಮುಂದೆ ಆ ರೀತಿ ನಡೆದುಕೊಳ್ಳದ ಹಾಗೆ ತನ್ನ ವರ್ತನೆ ಬದಲಿಸಿಕೊಳ್ಳಬೇಕು ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಗೂಂಡಾಗಿರಿಯ ಸಂಸ್ಕೃತಿಯಲ್ಲಿ ಬೆಳೆದಿದೆ. ಇದು ರಾಜ್ಯಕ್ಕೆ ಅಪಾಯದ ಸಂಕೇತವಾಗಿದೆ. ಒಬ್ಬ ಜವಾಬ್ದಾರಿಯುತ ಸಂಸದರಾಗಿ ಮುಖ್ಯಮಂತ್ರಿ ಎದುರು ಹೇಗೆ ವರ್ತಿಸಬೇಕು ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ರಾಜ್ಯದ ಮಂತ್ರಿಯೊಬ್ಬರು ಮಾತನಾಡುತ್ತಿರುವಾಗ ಮೈಕ್ ಕಸಿದು ಹಲ್ಲೆಗೆ ಮುಂದಾಗಿದ್ದಾರೆ. ಇಂತಹ ಗೂಂಡಾ ಸಂಸ್ಕೃತಿಯ ವ್ಯಕ್ತಿಯ ನಡೆ ನಿಜಕ್ಕೂ ಖಂಡನಿಯವಾಗಿದೆ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಂವಿಧಾನದ ಆಶಯಗಳಲ್ಲಿ ಮಾತನಾಡುವ ಅವಕಾಶವಿದೆ. ಆದರೆ, ಸಂಸದ ಡಿಕೆ ಸುರೇಶ್ (DK Suresh) ರವರು ಸಂವಿಧಾನ ಶಿಲ್ಫಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣದ ಕಾರ್ಯಕ್ರಮದಲ್ಲಿ ಈ ರೀತಿ ನಡೆದುಕೊಂಡಿರುವುದು ಮಹಾನ್ ವ್ಯಕ್ತಿಗಳಿಗೆ ಮಾಡಿದ ಅವಮಾನವಾಗಿದೆ. ಕಾರ್ಯಕ್ರಮವನ್ನು ಹಾಳುಗೆಡಿಸುವ ಉದ್ದೇಶದಿಂದಲೇ ಇಂತಹ ವರ್ತನೆಯನ್ನು ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಬಿಜೆಪಿ ಪಕ್ಷಕ್ಕೆ ಶಿಸ್ತು ಸಂಯಮ ಇದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಗೂಂಡಾಗಿರಿ ಸಂಸ್ಕೃತಿ ಇದೆ. ಗಲಭೆಗಳು ಗಲಾಟೆಗಳನ್ನು ಸೃಷ್ಟಿ ಮಾಡಿ ಅಧಿಕಾರಕ್ಕೆ ಬರುತ್ತೇವೆ ಎಂಬುವುದು ಅವರ ಉದ್ದೇಶವಾಗಿದೆ ರಾಜ್ಯದಲ್ಲಿ ಗಲಭೆಗಳಿಗೆ ಬಿಜೆಪಿ ಪಕ್ಷ ಅವಕಾಶಗಳನ್ನು ನೀಡುವುದಿಲ್ಲ. ಇಂತಹ ವರ್ತನೆಗಳನ್ನು ಬಿಜೆಪಿ ಸಹಿಸುವುದಿಲ್ಲ. ಬದಲಿಗೆ ತಕ್ಕ ಪಾಠ ಕಲಿಸಲಿದೆ. ಮುಂದೆ ಯಾರೇ ಆಗಲಿ ಜಾಗ್ರತೆಯಿಂದ ಮಾತನಾಡಬೇಕು ಎಂದು ಓಂಶಕ್ತಿ ಚಲಪತಿ ಎಚ್ಚರಿಸಿದರು.

