ಬೆಂಗಳೂರು: ವಿಶ್ವಾಸಮತ ಯಾಚನೆ ಇಂದೂ ನಡೆಯೋದಿಲ್ಲ ಅನ್ನೋ ಸಂಶಯದ ಕುರಿತು ಮಾಜಿ ಸಿಎಂ, ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ವಿಧಾನಸಭೆ ಕುರಿತಾದ 2 ಅರ್ಜಿಗಳು ಇತ್ಯರ್ಥವಾಗಬೇಕಿದ್ದು, ಅದರ ಮಧ್ಯೆ ವಿಶ್ವಾಸಮತ ಯಾಚನೆ ಮಾಡುವುದು ಅಸಂವಿಧಾನಿಕ ಅಂತ ಹೇಳಿದ್ದಾರೆ.ಅಲ್ಲದೆ ಅತೃಪ್ತರನ್ನು ಕೂಡಿಹಾಕಿದ್ದರಿಂದ ಅವರು ಅಲ್ಲೇ ಇದ್ದಾರೆ ಇಲ್ಲಿದ್ದರೆ ಅವರಿಗೆ ಮುಳ್ಳು ಚುಚ್ಚುತ್ತಿತ್ತಾ ಅಂತ ವ್ಯಂಗ್ಯ ಮಾಡಿದ್ದಾರೆ.
ಸದನದಲ್ಲೇ ನಾನು ಸಿಎಂ ಸೋಮವಾರ ವಿಶ್ವಾಸಮತ ಯಾಚನೆ ಮುಗಿಸೋಣ ಅಂತ ಹೇಳಿದ್ದೆವು. ಆದರೆ ಇದರ ಮಧ್ಯೆ ಸುಪ್ರೀಂ ಕೋರ್ಟ್ ಗೆ ಪಕ್ಷೇತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುವುದರಿಂದ ಅದು ನಾಳೆ ಇತ್ಯರ್ಥವಾಗುತ್ತೆ. ನಾವೂ ಕೂಡ ಶಾಸಕರ ವಿಪ್ ಬಗ್ಗೆ ಸ್ಪಷ್ಟನೆ ನೀಡಿ ಅಂತ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ಆ ಕುರಿತು ಸುಪ್ರೀಂನಲ್ಲಿ ನಾಳೆ ಹೊರಬೀಳುವ ನಿರೀಕ್ಷೆಯಿದೆ ಅಂತ ಸಿದ್ದರಾಮಯ್ಯ ಹೇಳಿದ್ರು.
ಇನ್ನು ಅತೃಪ್ತ ಶಾಸಕರು ತಮ್ಮ ನಿಲುವು ಬದಲಾಯಿಸಲು ಸಾಧ್ಯವೇ ಇಲ್ಲ ಎಂದಿರೋ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅತೃಪ್ತರು ಅನರ್ಹತೆ ಭೀತಿಯಿಂದಾಗಿ ಮುಂಬೈನಿಂದ ಒಂದು ವೇಳೆ ಬಂದರೆ ನಮ್ಮ ಪರವಾಗಿಯೇ ಇರುತ್ತಾರೆ. ಆದರೆ ಅವರನ್ನು ಹೊರಗಡೆ ಬಿಟ್ಟಿಲ್ಲ, ಗನ್ ಪಾಯಿಂಟ್ ನಲ್ಲಿಟ್ಟಿದ್ದಾರೆ. ಅವರನ್ನು ಕಾವಲು ಕಾಯಲು 500 ಜನ ಪೊಲೀಸರನ್ನೂ ನಿಯೋಜಿಸಲಾಗಿದೆ. ಅವರನ್ನು ಗನ್ ಪಾಯಿಂಟ್ ನಲ್ಲಿಟ್ಟಿಲ್ಲ ಎನ್ನುವುದಾದರೆ ಅವರು ಇಲ್ಲೇ ಇರಬಹುದಿತ್ತಲ್ಲ, ಮುಂಬೈಗೆ ಯಾಕೆ ಹೋದರು. ಅವರಿಗೆ ಇಲ್ಲಿ ಮುಳ್ಳು ಚುಚ್ಚುತ್ತಿತ್ತಾ ಅಂತ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ರು.