Political News: ಬೆಂಗಳೂರಿನಲ್ಲಿ ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆದಿದ್ದು, ಪ್ರಮುಖರ ಸಮ್ಮುಖದಲ್ಲಿ ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ. ಎಸ್, ಯಡಿಯೂರಪ್ಪ, ಡಿವಿ ಸದಾನಂದ ಗೌಡ, ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್, ಸಿಟಿ ರವಿ ಆರ್ ಅಶೋಕ್, ಬಿವೈ ವಿಜಯೇಂದ್ರ ಉಪಸ್ಥಿತರಿದ್ದರು. ಇನ್ನು ಸುಮಲತಾ ಜೊತೆ ಮಾಜಿ ಬಿಗ್ಬಾಸ್ ಸ್ಪರ್ಧಿ ದೊಡ್ಡಗಣೇಶ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ಸುಮಲತಾ ಅಂಬರೀಷ್, ಈಗ ಬಿಜೆಪಿ ಸೇರಿ ಮೊದಲ ಹೆಜ್ಜೆ ಹಾಕಿದ್ದೇನೆ. ಮುಂದೆ ವರಿಷ್ಠರು, ನಾಯಕರ ಜತೆ ಚರ್ಚೆ ಮಾಡಿ, ಸಲಹೆ ಪಡೆದು ಮುಂದುವರೆಯುತ್ತೇನೆ. ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೇ. ನನಗೆ ಯಾವ ಪಾತ್ರ ಕೊಟ್ಟಿದ್ದಾರೆ, ಕೊಡ್ತಾರೆ ಎಂಬ ಪ್ರಶ್ನೆ ಬರಲ್ಲ. ನಾಯಕರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ಬದ್ಧ. ನಾನು ಬಿಜೆಪಿಯಿಂದ ಮೋಸ ಹೋಗಿಲ್ಲ. ಮೋಸ ಹೋಗಿದ್ದೇನೆ ಅಂತಿದ್ರೆ ಅದೇ ಪಕ್ಷ ಯಾಕೆ ಸೇರುತ್ತಿದ್ದೆ? ಬಿಜೆಪಿಗೆ ಸಂಪೂರ್ಣ ಮನಸ್ಸಿಂದ, ಸಂತೋಷದಿಂದ ಸೇರಿದ್ದೇನೆ. ಕುಮಾರಸ್ವಾಮಿ ಅವರು ಸಹಕಾರ ಕೊಡಿ ಅಂತ ಕೇಳಿದ್ದಾರೆ. ಅವರ ಪರ ಪ್ರಚಾರಕ್ಕೆ ಬನ್ನಿ ಅಂತ ಇನ್ನೂ ಕರೆದಿಲ್ಲ. ಪಕ್ಷದಿಂದ ಏನು ಸೂಚನೆ ಬರುತ್ತದೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಅಂತಹ ಪಾತ್ರ, ಇಂತಹ ಪಾತ್ರ ಅಂತೇನಿಲ್ಲ. ಮಂಡ್ಯದಲ್ಲಿ ಮಾತ್ರ ನಡೆಯುತ್ತಿರುವ ಚುನಾವಣೆ ಅಲ್ಲ. ನನ್ನನ್ನು ಮಾಜಿ ಸಂಸದೆ ಅಂತ ಮಂಡ್ಯ ಇನ್ನು ಮುಂದೆ ನೋಡಲಿದೆ. ಖಂಡಿತ ಮಂಡ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬುವ ಅವಶ್ಯಕತೆ ಇದೆ. ಮಂಡ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಗುರಿ ಇದೆ. ಮೋದಿ ಜೊತೆ ಕೈ ಜೋಡಿಸಬೇಕು ಅಂತ ಬಂದಿದ್ದೇನೆ. ಅಭಿಷೇಕ್ ಸದ್ಯಕ್ಕೆ ರಾಜಕಾರಣಕ್ಕೆ ಬರಲ್ಲ, ಸಿನಿಮಾದಲ್ಲಿ ಮಾತ್ರ ಇರುತ್ತಾರೆ. ದರ್ಶನ್, ಯಶ್ ಬೆಂಬಲ ಸದ್ಯಕ್ಕೆ ಅಪ್ರಸ್ತುತ. ಮೊನ್ನೆ ನಡೆದ ಸಭೆಯಲ್ಲಿ ದರ್ಶನ್ ಬಂದಿದ್ದರು.ಎಲ್ಲದಕ್ಕಿಂತ ಮುಖ್ಯ ನಾನು ಮಂಡ್ಯದ ಸೊಸೆ. ಮುಂದೆ ವರಿಷ್ಠರು ನನಗೆ ಏನು ಜವಾಬ್ದಾರಿ ಕೊಡ್ತಾರೆ ಅಂತಾ ಗೊತ್ತಿಲ್ಲ. ಸದ್ಯ ನಾನು ಬಿಜೆಪಿ ಸದಸ್ಯೆಯಾಗಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.