ರಾಯಚೂರು : ಮಂತ್ರಾಲಯದ ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ (Guru Raghavendra Swamy) 401 ನೇ ಪಟ್ಟಾಭಿಷೇಕ (Coronation) ಹಾಗೂ 427 ನೇ ವರ್ಧಂತಿ ಉತ್ಸವ ಅಂಗವಾಗಿ ಗುರುವೈಭವೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ದೇಶದ ಮೂಲೆ ಮೂಲೆಯಿಂದ ಭಕ್ತ ಸಾಗರ ಹರಿದು ಬರುತ್ತಿದ್ದು, ಮಂತ್ರಾಲಯದಲ್ಲಿ ಸಂಭ್ರಮ ಮನೆಮಾಡಿದೆ. ಮಾರ್ಚ್ 04 ರಿಂದ 09 ರ ವರೆಗೆ ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಗುರುವೈಭವೋತ್ಸವ ಹಿನ್ನೆಲೆ ಸಂಭ್ರಮ ಮನೆಮಾಡಿದೆ. ಇಂದು ರಾಯರ 401ನೇ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತಿದ್ದು, ಬೆಳಗ್ಗೆಯಿಂದಲ್ಲೇ ಶ್ರೀ ಮಠದಲ್ಲಿ ವಿಶೇಷ ಪೂಜೆಗಳು ಆರಂಭಗೊಂಡಿವೆ. ರಾಯರ ಪಾದುಕೆಗಳಿಗೆ ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ನೆರವೇರಿಸಿದರು. ಶ್ರೀ ಮಠದ ಪ್ರಾಂಗಣದಲ್ಲಿ ಪ್ರಹ್ಲಾದ್ ರಾಜರಿಗೆ ಮುತ್ತು, ರನ್ನ ಮತ್ತು ಕನಕಗಳಿಂದ ಅಭಿಷೇಕ ನೆರವೇರಿಸಲಾಯಿತು. ಗುರು ವೈಭವೋತ್ಸವ ಹಿನ್ನೆಲೆ ಮಂತ್ರಾಲಯ ಮಠದಲ್ಲಿ ವಿಶೇಷ ಸ್ವರ್ಣ ರಥೋತ್ಸವ ನಡೆಯಿತು.ರಾಯರ ಪಾದುಕೆಗಳನ್ನ ರಥೋತ್ಸವದಲ್ಲಿಟ್ಟು ಪ್ರಾಂಗಣದಲ್ಲಿ ನಡೆದ ರಥೋತ್ಸವ ನಡೆದಿದ್ದು, ರಥೋತ್ಸವಕ್ಕೆ ಸಹಸ್ರಾರು ರಾಯರ ಭಕ್ತರು ಸಾಕ್ಷಿಯಾಗಿದ್ರು. ರಥೋತ್ಸವದ ನಂತರ ಮಾತನಾಡಿದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು (Sri Subhudendra Tirtha) ಶೀಘ್ರವೇ ವಿಶ್ವಕ್ಕೆ ಹಿಡಿದಿರುವ ಯುದ್ದದ ಭೀತಿ ತೊಲಗಲಿ ಎಂದು ಆಶೀರ್ವಚನ ನೀಡಿದ್ರು. ಈಗಾಗಲೇ ದೇಶದ ಪ್ರಧಾನಿಗಳು ಉತ್ತಮ ಕೆಲಸ ಮಾಡ್ತಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆ ತರುವ ಮೂಲಕ ದೇಶದ ವಿದ್ಯಾರ್ಥಿಗಳು ನಮ್ಮಲ್ಲಿಯೇ ಶಿಕ್ಷಣ ಪಡೆಯವಂತೆ ಮಾಡಬೇಕಿದೆ ಎಂದ್ರು. ಇನ್ನೂ ಈ ವರ್ಷದ ಗುರು ವೈಭವೋತ್ಸವದ ರಾಯರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು (Dr. Virender Hegde) ಭಾಗವಹಿಸಿದ್ದು ವಿಶೇಷವಾಗಿತ್ತು. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠವು ಸದಾ ಜಾಗೃತ ತಾಣವಾಗಿದೆ ಎಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಹೇಳಿದರು. ಮಂತ್ರಾಲಯದಲ್ಲಿ ಶುಕ್ರವಾರದಿಂದ ಆರಂಭವಾದ ಗುರು ವೈಭವೋತ್ಸವದಲ್ಲಿ ಮೊದಲ ದಿನ ನಡೆದ ರಾಯರ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇವರ ಕಣ್ಣು ತಪ್ಪಿಸಿ ಮನುಷ್ಯ ಯಾವುದೇ ಕಾರ್ಯ ಮಾಡುವುದಕ್ಕೆ ಆಗುವುದಿಲ್ಲ. ಕಣ್ಣಿಗೆ ಕಾಣದ ಶಕ್ತಿ ಸದಾ ಜಾಗೃತವಾಗಿಯೇ ಇರುತ್ತದೆ ಎಂದ್ರು. ಇಂದಿನಿಂದ ಐದು ದಿನಗಳ ಕಾಲ ನಡೆಯುವ ಗುರು ವೈಭವೋತ್ಸವ ಸಂಭ್ರಮದಲ್ಲಿ ಭಾಗವಹಿಸಲು ದೇಶದ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರ ದಂಡು ಮಂತ್ರಾಲಯಕ್ಕೆ ಹರಿದು ಬರುತ್ತಿದ್ದು, ರಾಯರ ದರ್ಶನ ಪಡೆದು ಪುನೀತರಾಗ್ತಿದ್ದಾರೆ. ಮಂತ್ರಾಲಯದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿರುವ ರಾಯರ ಶಾಖಾ ಮಠಗಳಲ್ಲೂ 6 ದಿನಗಳ ಕಾಲ ಗುರುವೈಭವೋತ್ಸವ ಹಿನ್ನೆಲೆ ವಿಶೇಷ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಗುರು ರಾಯರ ಪಟ್ಟಾಭಿಷೇಕದ ಮೊದಲ ದಿನವಾದ ಇಂದು ಭಕ್ತರು ಶ್ರೀಮಠಕ್ಕೆ ಆಗಮಿಸಿ, ರಾಯರ ವೃಂದಾವನದ ದರ್ಶನ ಪಡೆದು ಪುನೀತರಾದ್ರು.