Political News: ರಾಮನಗರದಲ್ಲಿ ಮೈತ್ರಿ ಸಮಾವೇಶ ನಡೆದಿದ್ದು, ಸಮಾವೇಶದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ವಿಜಯಪುರದಲ್ಲಿ ಕೊಳವೆಬಾವಿಯಿಂದ ಸಾತ್ವಿಕ್ ನನ್ನು ಜೀವಂತವಾಗಿ ಹೊರತಂದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.
ಡಾ. ಮಂಜುನಾಥ್ ಜಯದೇವ ಆಸ್ಪತ್ರೆಯಲ್ಲಿ ಮಾಡಿದ ಸೇವೆಯನ್ನು ಒಂದು ಕ್ಷಣ ಯೋಚನೆ ಮಾಡಿ. ಮಂಜುನಾಥ್ ಸರ್ವಾನುಮತದಿಂದ ಆಯ್ಕೆಯಾಗಿ ಹೋಗಬೇಕಾಗಿತ್ತು. ಶಿವಕುಮಾರ್ ತಮ್ಮನಿಗೆ ಬೇಕಾದಷ್ಟು ಅವಕಾಶಗಳಿವೆ. ನೀವು ಚುನಾವಣೆಯಿಂದ ಹಿಂದೆ ಸರಿದು ಮಂಜುನಾಥ್ ಅವರನ್ನು ಸರ್ವಾನುಮತದಿಂದ ಕಳುಹಿಸಿಕೊಡಬೇಕು. ನಾನು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತೇನೆ. ಮಂಜುನಾಥ್ ಅವರಿಗೆ ಮುಂದೆ ಯಾವ ಅವಕಾಶ ಸಿಗುತ್ತದೆ ಎಂದು ನಾನು ಹೇಳಲು ಇಚ್ಛೆ ಪಡಲ್ಲ. ಡಾ. ಮಂಜುನಾಥ್ ಅಂತಹವರನ್ನು ಚುನಾವಣೆಗೆ ನಿಲ್ಲಿಸಿ ಅವರ ಶ್ರೀಮತಿ ಜೊತೆಗೆ ಪ್ರಚಾರ ಮಾಡುವಂತಹದ್ದು ಯಾರಿಗೂ ಸಮಾಧಾನ ತರುವಂತಹದ್ದಲ್ಲ, ನನಗೆ ಒಂದು ರೀತಿ ದು:ಖ ಆಗುತ್ತಿದೆ. ಮಂಜುನಾಥ್ ಅವರನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸಿದರೆ ಕೇಂದ್ರದಲ್ಲಿ ಅವರಿಗೆ ದೊಡ್ಡ ಹುದ್ದೆ ಅವರಿಗೆ ಸಿಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್, ಈ ಕ್ಷೇತ್ರದಲ್ಲಿ ಇಂದು ಬೇರೆ ಬೇರೆ ತಂತ್ರಗಳು ಆಗುತ್ತಿವೆ. ಆರೋಗ್ಯಕರ ಮತದಾನ ಆದರೆ ಪ್ರಜಾತಂತ್ರ ವ್ಯವಸ್ಥೆಗೆ ಅರ್ಥ ಬರುವುದು. ಮತ ಮೊದಲು, ಸೇವೆ ನಿರಂತರ ಎಂದು ನಾನು ಕೇಳುತ್ತಿದ್ದೇನೆ. ಟೀಕೆಗಳಿಗೆ ನಾನು ಉತ್ತರ ಕೊಡಲು ಹೋಗುವುದಿಲ್ಲ. ಟೀಕೆಗಳು ಸಾಯುತ್ತವೆ, ಸಾಧನೆಗಳು ಮಾತನಾಡುತ್ತವೆ. ಮೋದಿ ಸರ್ಕಾರ, ದೇವೇಗೌಡರ ಸರ್ಕಾರ ನನಗೆ ಶ್ರೀರಕ್ಷೆ ಎಂದು ಡಾ.ಮಂಜುನಾಥ್ ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಮೋದಿ ಸರ್ಕಾರ ಲಸಿಕೆ ಕೊಡದೇ ಇರುತ್ತಿದ್ದರೆ ವೇದಿಕೆ ಮೇಲೆ ಇರುವವರಲ್ಲಿ ಎಷ್ಟು ಜನ ಇರುತ್ತಿದ್ದರೋ ಗೊತ್ತಿಲ್ಲ. ಮನುಷ್ಯರಾದರೆ ಪ್ರಯೋಜನ ಇಲ್ಲ, ಮನುಷ್ಯತ್ವ ಇಟ್ಟುಕೊಂಡು ಜೀವನ ಮಾಡಬೇಕು. ನಮ್ಮ ನೋವು ನಮಗೆ ಗೊತ್ತಾದರೆ ಜೀವಂತ ಇದ್ದೇವೆ ಎಂದು ಅರ್ಥ, ಬೇರೆಯವರ ನೋವು ಗೊತ್ತಾದರೆ ಮನುಷ್ಯತ್ವ ಇದೆ ಅಂತಾ ಅರ್ಥ. ಜಯದೇವ ಆಸ್ಪತ್ರೆಯಲ್ಲಿ ಒಬ್ಬನೇ ಒಬ್ಬ ರೋಗಿಯನ್ನು ಹಣಕ್ಕೋಸ್ಕರ ಚಿಕಿತ್ಸೆ ಕೊಡದೇ ವಾಪಸ್ ಕಳುಹಿಸಿಲ್ಲ.
ಜನರ ಹೃದಯ ಗೆದ್ದು ಪ್ರೀತಿ, ಸಂತೋಷ ಹಂಚಬೇಕು. ಮನೆ ಕಟ್ಟಲು ಹಣ ಬೇಕು, ಮನಸ್ಸು ಗೆಲ್ಲಲು ಗುಣ ಬೇಕು. ಹಿಂದೆ ಮಂತ್ರ ಕೆಲಸ ಮಾಡುತ್ತವೆ ಅಂತಾ ಹೇಳುತ್ತಿದ್ದರು, ಆಮೇಲೆ ಯಂತ್ರ ಕೆಲಸ ಮಾಡುತ್ತದೆ ಅಂತಾ ಹೇಳುತ್ತಿದ್ದರು, ಈಗ ತಂತ್ರ ಕೆಲಸ ಮಾಡುತ್ತಿದೆ. ನನ್ನ ಹೆಸರಿನ ನಾಲ್ಕೈದು ಜನರನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಅವರು ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ ಎಂದು ಅರ್ಥ. ನನಗೆ ಒಂದು ಬಾರಿ ಅವಕಾಶ ಕೊಡಿ, ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಡಾ.ಮಂಜುನಾಥ್ ಹೇಳಿದ್ದಾರೆ.
H. D. Kumaraswamy : ಮಂಡ್ಯ : ನಾಮಪತ್ರ ಸಲ್ಲಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ: ವಿಜಯೇಂದ್ರ ಆಹ್ವಾನದ ಬಳಿಕವೂ ಗೈರಾದ ಪ್ರೀತಂಗೌಡ
ನಾಮಪತ್ರ ಸಲ್ಲಿಕೆ ಬಳಿಕ ಡಿ.ಕೆ.ಸುರೇಶ್ ಕಾರಿಗೆ ಮೈತ್ರಿ ಕಾರ್ಯಕರ್ತರಿಂದ ಮುತ್ತಿಗೆ..