Political News: ಬೆಂಗಳೂರಿನಲ್ಲಿ ಆರ್ಸಿಬಿ ವಿಜಯೋತ್ಸವದ ವೇಳೆ ಭೀಕರ ಕಾಲ್ತುಳಿತ ಸಂಭವಿಸಿ 11 ಜನರು ದಾರುಣವಾಗಿ ಸಾವನ್ನಪ್ಪಿದ್ದರು. ಅಲ್ಲದೆ 47ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಘಟನೆಯು ಇಡೀ ರಾಜ್ಯ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ವಿಪಕ್ಷಗಳೂ ಸಹ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದು ಘಟನೆಯನ್ನು ಖಂಡಿಸಿದ್ದವು.
ನಾನು ಖಾತೆ ಬದಲಾವಣೆಯ ಬಗ್ಗೆ ಮಾತೇ ಆಡಿಲ್ಲ..
ಇನ್ನೂ ಪ್ರಮುಖವಾಗಿ ಈ ದುರ್ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒತ್ತಾಯಿಸುತ್ತಿದ್ದಾರೆ. ಈ ನಡುವೆಯೇ ಘಟನೆಯಿಂದ ನೊಂದು ತಮ್ಮ ಖಾತೆಯನ್ನು ಬದಲಾವಣೆ ಮಾಡಬೇಕೆಂದು ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಅವರ ಬಳಿ ಕೇಳಿಕೊಂಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಅಲ್ಲದೆ ಇದಕ್ಕೂ ಮುನ್ನ ಮಂಗಳೂರಿನಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳಿಗಾಗಿ ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಆದರೆ ಈ ಬಗ್ಗೆ ಖುದ್ದು ಸ್ಪಷ್ಟನೆ ನೀಡಿರುವ ಪರಮೇಶ್ವರ್ ಅವರು, ನಾನು ಗೃಹ ಇಲಾಖೆ ಖಾತೆ ಬದಲಾವಣೆ ಮಾಡಿ ಎಂದು ಸಿಎಂ ಬಳಿ ಕೇಳಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ನನ್ನ ಕೊಲೆ ಮಾಡೋ ಬದಲು ನೇರವಾಗಿಯೇ ಕೇಳಬಹುದಿತ್ತಲ್ಲ..!
ಈ ಕುರಿತು ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮಾಧ್ಯಮಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ. ಯಾರು ನಿಮಗೆ ಹೇಳಿದ್ದಾರೆ ನನಗೆ ಹೇಳಿ. ನಿಮ್ಮ ಮೂಲದ ಬಗ್ಗೆ ಹೇಳಿ. ತಿಮ್ಮೇಗೌಡನೂ ಹೇಳೋದೆ ಬೊಮ್ಮೇಗೌಡನೂ ಹೇಳೋದೆ. ಯಾರು ಹೇಳಿದ್ರು ನಿಮಗೆ? ನಿಮಗೆ ಮಾಹಿತಿ ಬಂದರೆ ನನ್ನ ಬಳಿಯೇ ಕೇಳಬಹುದಿತ್ತು. ಮಾಧ್ಯಮಗಳಲ್ಲಿ ಸುದ್ದಿ ಹಾಕಿ ನಮ್ಮ ಕೊಲೆ ಮಾಡೋ ಬದಲು ನನ್ನನ್ನೇ ನೇರವಾಗಿ ಕೇಳಬಹುದಿತ್ತು ಅಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಹೆಂಡತಿಯ ಬಳಿಯೇ ನಾನು ರಾಜಕೀಯದ ಬಗ್ಗೆ ಮಾತನಾಡಲ್ಲ..
ಮಾಧ್ಯಮಗಳ ಜೊತೆ ನಾನು 30 ವರ್ಷಗಳಿಂದ ಸಂಯಮದಿಂದ ನಡೆದುಕೊಂಡಿದ್ದೇನೆ. ಒಬ್ಬರ ವ್ಯಕ್ತಿತ್ವವನ್ನು ಕೊಲೆ ಮಾಡೋದು ನಿಮಗೆ ಶೋಭೆ ತರುವುದಿಲ್ಲ, ನನ್ನ ಹೆಂಡತಿ ಬಳಿಯೇ ನಾನು ರಾಜಕೀಯದ ಬಗ್ಗೆ ಮಾತನಾಡಲ್ಲ. ನೀವು ಹೇಳಿರುವಂತೆ ಆಪ್ತರು ಬಳಿ ಹೇಳಿ ಖಾತೆ ಬದಲಾವಣೆ ಮಾಡಿ ಅಂತ ಸಿಎಂಗೆ ಕೇಳಿದ್ರು, ಸಿಎಂ ಆಗುವುದಿಲ್ಲ ಎಂದು ಹೇಳಿದ್ರು ಎನ್ನುವುದೆಲ್ಲ ಸುಳ್ಳು. ಇದೆಲ್ಲ ಯಾರು ನಿಮಗೆ ಹೇಳಿದ್ದು? ಮಾಧ್ಯಮಗಳಲ್ಲಿ ವಿಷಯ ಹಾಕಿ ಅದ್ವಾನ ಮಾಡಿದ ಮೇಲೆ ಈಗ ಯಾಕೆ ಸ್ಪಷ್ಟನೆ ಕೇಳುತ್ತೀರಿ ಎಂದು ಗರಂ ಆಗಿದ್ದಾರೆ.
ನಿಮ್ಮ ಕೈ ಮುಗಿದು ಕೇಳ್ತೀನಿ ಹೀಗೆಲ್ಲ ಮಾಡಬೇಡಿ, ಅದೆಲ್ಲ ಶುದ್ಧ ಸುಳ್ಳು..
ನಿಮಗೆ ಕೈ ಮುಗಿದು ಕೇಳಿಕೊಳ್ತೀನಿ, ಹೀಗೆ ಮಾಡಬೇಡಿ. ನಮ್ಮನ್ನು ಫಾಲೋ ಮಾಡೋರು, ಜನರು, ಮತದಾರರು ಇದ್ದಾರೆ. ಅವರೆಲ್ಲ ಏನು ಭಾವಿಸಿಕೊಳ್ಳುತ್ತಾರೋ ಏನೋ.. ಇನ್ನು ಮುಂದಾದರೂ ನನ್ನನ್ನು ಕೇಳಿ, ನಾನು ಯಾವತ್ತೂ ಸಿಎಂ ಅವರಿಗೆ ಇಂತಹ ಖಾತೆ ಬೇಕು ಅಂತ ಕೇಳಿಲ್ಲ. ಬೆಂಗಳೂರಿನಲ್ಲಿ ಘಟನೆ ಆಗಿದೆ, ಅದು ಆಗಬಾರದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇಂತಹ ಘಟನೆ ಆಗಬಾರದು. ನಾವು ನೋವು ಉಣ್ಣುತ್ತಿದ್ದೇವೆ. ಈ ಸಮಯದಲ್ಲಿ ಖಾತೆ ಬದಲಾವಣೆ ಆಗಲಿ ಅಂತ ಕೇಳಿದ್ದೆ ಎಂದು ಹೇಳುವುದು ಸರಿಯಲ್ಲ. ಇದು ಸವಾಲು, ಇದನ್ನ ಎದುರಿಸಬೇಕು. ಖಾತೆ ಬದಲಾವಣೆ ಕೇಳಿದ್ದೀನಿ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತು. ಇದು ಸುಳ್ಳು ಎಂದು ಪರಮೇಶ್ವರ್ ಹೇಳಿದ್ದಾರೆ.