Movie News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅವರಿಂದಾಗಿ ಅಲ್ಲಿನ ಜೈಲಿನಲ್ಲಿ ಈ ಬಾರಿ ಗಣೇಶ ಹಬ್ಬದ ಸಡಗರವಿಲ್ಲ. ದರ್ಶನ್ ಅವರಿದ್ದ ಸೆಲ್ಗೆ ಗಣೇಶ್ ಪೂಜೆ ನೆರವೇರಿಸಿ, ಪ್ರಸಾದ ಕಳುಹಿಸಲಾಗಿದೆ. ಈ ವೇಳೆ ಗಣೇಶನ ದರ್ಶನಕ್ಕೆ ಅವಕಾಶ ಇಲ್ಲವಾ? ಎಂಬ ಪ್ರಶ್ನೆ ಕೇಳಿದ್ದಾರೆ ದರ್ಶನ್. ಪ್ರಸಾದ ಕೊಟ್ಟ ಸಿಬ್ಬಂದಿ ಮೇಲಾಧಿಕಾರಿಗಳನ್ನು ಕೇಳಿ ಎಂದಷ್ಟೇ ಹೇಳಿದ್ದಾರೆ. ಹೈ ಸೆಕ್ಯೂರಿಟಿ ಇರುವ ಹಿನ್ನೆಲೆಯಲ್ಲಿ ಈ ಬಾರಿ ಜೈಲಿನಲ್ಲಿ ಸಿಬ್ಬಂದಿ ಮಾತ್ರ ಗಣೇಶ ಮಂಟಪವನ್ನು ಅಲಂಕರಿಸಿ ಪೂಜೆ ನೆರವೇರಿಸಿದ್ದಾರೆ.
ಪ್ರತಿ ವರ್ಷ ಜೈಲಿನಲ್ಲಿರುವ ಕೈದಿಗಳು ಸೇರಿಕೊಂಡು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಅಷ್ಟೇ ಅಲ್ಲ, ಕೈದಿಗಳು ಮಂಟಪ ಅಲಂಕರಿಸುತ್ತಿದ್ದರು. ಈಗ ದರ್ಶನ್ ಜೈಲಿನಲ್ಲಿರುವ ಕಾರಣವೋ ಏನೋ, ಅಲ್ಲಿನ ಅಧಿಕಾರಿಗಳು ಕೇವಲ ಸಿಬ್ಬಂದಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದಾರೆ.
ಈಡೇರಿದ ಮೂರು ಬೇಡಿಕೆ
ಕಳೆದ ಒಂಬತ್ತು ದಿನಗಳಿಂದ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ಅವರಿಗೆ ಸಾಮಾನ್ಯ ಕೈದಿಯಂತೆಯೇ ನೋಡಿಕೊಳ್ಳಲಾಗುತ್ತಿದೆ. ಆದರೆ, ದರ್ಶನ್ ಕೆಲವು ಬೇಡಿಕೆ ಇಟ್ಟಿದ್ದರು, ಆ ಪೈಕಿ ಇದೀಗ ಜೈಲಿನ ಅಧಿಕಾರಿಗಳು ದರ್ಶನ್ ಅವರ ಮೂರು ಬೇಡಿಕೆಗಳನ್ನು ಈಡೇರಿಸಿದ್ದಾರೆ.
ಮೊದಲನೆಯರು ಅವರು ತಮಗೆ ಬೆನ್ನು ನೋವು ಇದೆ. ಹಾಗಾಗಿ ಇಂಡಿಯನ್ ಟಾಯ್ಲೆಟ್ ಉಪಯೋಗಿಸಲು ಕಷ್ಟ ಆಗುತ್ತಿದೆ ಎಂದಿದ್ದರು. ತಮಗೆ ಸರ್ಜಿಕಲ್ ಚೇರ್ ವ್ಯವಸ್ಥೆ ಮಾಡಿಕೊಡಿ ಅಂದಿದ್ದರು. ಅದಕ್ಕೆ ಅವಕಾಶ ಮಾಡಿಕೊಡಲಾಗಿತ್ತು ಅದಾದ ಬಳಿಕ ಅವರು ಎರಡನೇ ಬೇಡಿಕೆ ಇಟ್ಟಿದ್ದರು. ತಮಗೆ ಫೋನ್ ವ್ಯವಸ್ಥೆ ಮಾಡಿಕೊಡಿ. ಪತ್ನಿ ಜೊತೆಗೆ ಮಾತನಾಡಲು ಮಾತ್ರ ಅವಕಾಶ ಕೊಡಿ ಎಂದು ಬೇಡಿಕೆ ಇಟ್ಟಿದ್ದರು. ಅದಕ್ಕೂ ಜೈಲು ಅಧಿಕಾರಿಗಳು ಅಸ್ತು ಎಂದಿದ್ದರು. ಕೇವಲ ಅವರ ಪತ್ನಿ ಜೊತೆಗೆ ಜಾಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಅವಕಾಶ ಕೊಟ್ಟಿದ್ದರು.
ಇನ್ನು, ಮೂರನೇ ಬೇಡಿಕೆ ಬಗ್ಗೆಯೂ ದರ್ಶನ್ ಮನವಿ ಮಾಡಿದ್ದರು. ಸೆಲ್ಗೆ ಟಿವಿ ವ್ಯವಸ್ಥೆ ಮಾಡಿಕೊಡಿ ಎಂಬ ಮನವಿ ಅವರದ್ದಾಗಿತ್ತು. ಕಾರಣ, ಚಾರ್ಜ್ ಶೀಟ್ ಬಗ್ಗ ತಿಳಿಯೋಕೆ ವ್ಯವಸ್ಥೆ ಮಾಡಿಕೊಡಿ ಅಂದಿದ್ದರು. ವಿಚಾರಣಾಧೀನ ಕೈದಿಗೆ ಈ ಸವಲತ್ತು ನೀಡಬಹುದಾಗಿದ್ದರಿಂದ ಜೈಲು ನಿಯಮದಡಿ ಈ ವ್ಯವಸ್ಥೆ ಮಾಡಲಾಗಿದೆ ಎಂಬುದು ಜೈಲು ಅಧಿಕಾರಿಗಳ ಮಾತು.
ಅದೇನೆ ಇರಲಿ, ಸದ್ಯ ದರ್ಶನ್ ಸೇರಿದಂತೆ ಹದಿನೇಳು ಆರೋಪಿಗಳು ಜೈಲು ಶಿಕ್ಷೆ ಅನುಭವಿಸುತ್ತಿರೋದು ಗೊತ್ತೇ ಇದೆ. ಇತ್ತೀಚೆಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ರೇಣುಕಾಸ್ವಾಮಿ ಅವರ ಹತ್ಯೆಯ ಭೀಕರ ಸತ್ಯ ಹೊರಬಂದಿತ್ತು. ಈಗ ದರ್ಶನ್ ಸೋಮವಾರ ಜಾಮೀನು ಸಲ್ಲಿಸುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.