Bengaluru News: ಬೆಂಗಳೂರಿನಲ್ಲಿರುವ ಕೆಲವು ಅಂಗಡಿ ಮುಂಗಟ್ಟು, ಮಾಲ್ಗಳ ನಾಮಫಲಕಗಳು ಕನ್ನಡದಲ್ಲಿ ಇರದ ಕಾರಣ, ಹೋರಾಟ ನಡೆಸಿ, ಅಂಗಡಿ ನಾಮಫಲಕವನ್ನು ತೆರವುಗೊಳಿಸಿದ್ದ, ಕನ್ನಡಪರ ಹೋರಾಟಗಾರರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಕರವೇ ನಾರಾಯಣಗೌಡ ಸೇರಿ 29 ಜನ ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನದಲ್ಲಿರಿಸಲು ಆದೇಶಿಲಾಗಿದೆ. ಇವರನ್ನೆಲ್ಲ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದ್ದು, ಜನವರಿ 10ನೇ ತಾರೀಖಿನವರೆಗೂ ಇವರನ್ನು ನ್ಯಾಯಂಗ ಬಂಧನದಲ್ಲಿರಿಸಲು, ನ್ಯಾಯಾಧೀಶರು ಆದೇಶಿಸಿದ್ದಾರೆ.
ಬೇರೆ ರಾಜ್ಯದಿಂದ ಬಂದು, ಬೆಂಗಳೂರಿನಲ್ಲಿ ಅಂಗಡಿ ಮುಂಗಟ್ಟು ಹಾಕಿಕೊಂಡಿದ್ದ ಕೆಲವು ವ್ಯಾಪಾರಿಗಳು, ತಮ್ಮ ಅಂಗಡಿಯ ನಾಮಫಲಕವನ್ನು ಇಂಗ್ಲಿಷಿನಲ್ಲಿ ಹಾಕಿಕೊಂಡಿದ್ದರು. ಇಂಥವರ ಅಂಗಡಿಗೆ ನುಗ್ಗಿದ್ದ ಕರವೇ ಕಾರ್ಯಕರ್ತರು, ನಾಮಫಲಕವನ್ನು ತೆರವುಗೊಳಿಸಿ, ಆಕ್ರೋಶ ಹೊರಹಾಕಿದ್ದರು. ಕೆಲವೆಡೆ ಕಲ್ಲು ತೂರಾಾಟ ಕೂಡ ಮಾಡಿದ್ದರು. ತಿನ್ನುವುದು ಕನ್ನಡಿಗರ ಅನ್ನ, ಕುಡಿಯುವುದು ಕಾವೇರಿ ನೀರು. ಆದರೆ ಕನ್ನಡ ಮಾತ್ರ ಬೇಡವೆಂದು ಆಕ್ರೋಶ ಹೊರಹಾಕಿದ್ದರು.
ಯಾವಾಗ ಕರವೇ ಕಾರ್ಯಕರ್ತರು ಕಾನೂನು ನಿಯಮವನ್ನು ಗಾಳಿಗೆ ತೂರಿ, ಕಲ್ಲು ತೂರಾಟ ನಡೆಸಿ, ಗಲಾಟೆ ಮಾಡಿದರೋ, ಆಗ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಇನ್ನು ಬಂಧಿತರನ್ನು ಬಿಡುಗಡೆಗೊಳಿಸದಿದ್ದಲ್ಲಿ, ಹೋರಾಟ ಮಾಡಲಾಗುವುದು ಎಂದು ಹಲವು ಕನ್ನಡಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.