Navaratri Special: Temple: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಶೇಷತೆಗಳು

Navaratri Special: Temple: ನವರಾತ್ರಿಯ ವಿಶೇಷವಾಗಿ ಒಂದೊಂದು ದಿನ ಒಂದೊದು ಶಕ್ತಿಪೀಠಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಪೊಳಲಿ ದೇವಸ್ಥಾನ, ಕಟೀಲು ದೇವಸ್ಥಾನದ ವಿಶೇಷತೆಗಳನ್ನು ಹೇಳಿದ್ದು, ಇದೀಗ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಶೇಷತೆ ಬಗ್ಗೆ ಹೇಳಲಿದ್ದೇವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸಿಗಂದೂರು ಕ್ಷೇತ್ರವಿದೆ. ದಟ್ಟ ಕಾಡಿನ ಮಧ್ಯೆ ಇರುವ ನದಿ ತೀರದಲ್ಲಿ ಸಿಗಂದೂರು ಚೌಡೇಶ್ವರಿ ಲೋಕ ರಕ್ಷಣೆಗಾಗಿ ನೆಲೆ ನಿಂತಿದ್ದಾಳೆ. ಮನೆಯಲ್ಲಿ ದೊಡ್ಡ ಮಟ್ಟದ ಕಳ್ಳತನವಾಗಿದ್ದಲ್ಲಿ, ದೇವಿಗೆ ಹರಕೆ ಸಲ್ಲಿಸಿದ್ದಲ್ಲಿ, ದೇವಿ ಕಳೆದುಹೋದ ವಸ್ತುವನ್ನು ಮರಳಿ ನಿಮಗೆ ಕೊಡಿಸುತ್ತಾಳೆ ಅನ್ನೋ ನಂಬಿಕೆ ಇದೆ. ಕಳೆದು ಹೋದ ವಸ್ತುಗಳು ಸಿಕ್ಕ ಹಲವು ಉದಾಹರಣೆಗಳೂ ಇದೆ. ಅಲ್ಲದೇ, ಕಳ್ಳರಿಗೆ ಭಯಂಕರ ಶಿಕ್ಷೆಯಾಗಿದ್ದೂ ಇದೆ.

ಇನ್ನು ಈ ದೇವಸ್ಥಾನಕ್ಕೆ ಹೋಗಲು, ಶರಾವತಿ ಹಿನ್ನೀರಿನ ಮೂಲಕ ಲಾಂಜ್ ಮುಖಾಂತರರ ಕರೆದುಕೊಂಡು ಹೋಗಲಾಗುತ್ತದೆ. ನಿಮ್ಮ ವಾಾಹನವಿದ್ದಲ್ಲಿ, ಲಾಂಜ್‌ನಲ್ಲಿ ಅದನ್ನೂ ಕೂಡ ನೀವು ಸಾಗಿಸಬಹುದು.

ಈ ಕ್ಷೇತ್ರದ ಹಿನ್ನೆಲೆಯ ಬಗ್ಗೆ ಹೇಳುವುದಾದರೆ, ಶೇಷಪ್ಪ ನಾಯಕ ಎಂಬುವವರು ಸಂಗಡಿಗರೊಂದಿಗೆ ಈ ಕಾಡಿಗೆ ಬೇಟೆಗೆ ಬರುತ್ತಾರೆ. ಆದರೆ ಬೇಟೆಯಾಡುವ ಭರದಲ್ಲಿ ಬಂದವರೆಲ್ಲ ಬೇರೆ ಬೇರೆ ದಿಕ್ಕಿಗೆ ಹೋಗಿ ಬಿಡುತ್ತಾರೆ. ಶೇಷಪ್ಪನವರು ಕೂಡ ಕಾಡಿನಲ್ಲಿ ಒಂಟಿಯಾಗಿ ಬಿಡುತ್ತಾರೆ. ರಾತ್ರಿಯಾಗುತ್ತಿದ್ದಂತೆ, ಒಂದು ಮರದಡಿ ಕುಳಿತು ನಿದ್ರೆ ಮಾಡುತ್ತಾರೆ.

ಇವರ ಕನಸಿನಲ್ಲಿ ಬಂದ ಚೌಡೇಶ್ವರಿ, ನಾನು ಈ ಸ್ಥಳದಲ್ಲೇ ನೆಲೆಗೊಳ್ಳಬೇಕೆಂದಿದ್ದೇನೆ. ನನಗೆ ನೆಲೆ ನಿಲ್ಲಲೊಂದು ಆಲಯ ಬೇಕು. ಅದು ನಿನ್ನಿಂದಲೇ ನಿರ್ಮಾಣವಾಗಬೇಕು ಎಂದು ಆದೇಶಿಸುತ್ತಾಳೆ. ಮರುದಿನ ಬೆಳಿಗ್ಗೆ ಶೇಷಪ್ಪ ದೇವರ ದಯೆಯಿಂದ ತಮ್ಮವರನ್ನು ತಲುಪಿ, ಕನಸಿನ ಬಗ್ಗೆ ವಿವರಿಸುತ್ತಾರೆ. ಬಳಿಕ ಆ ಕಾಡಿನ ಮಧ್ಯೆ ಹುಡುಕಾಟ ನಡೆಸಿದಾಗ, ತಾಯಿಯ ಮೂರ್ತಿ ಸಿಗುತ್ತದೆ.

ಬಳಿಕ ಸ್ಥಳೀಯ ಬ್ರಾಹ್ಮಣ ಅರ್ಚಕರ ಸಹಾಯದಿಂದ ದೇವರ ಗುಡಿಯನ್ನು ನಿರ್ಮಿಸಿ, ದೇವಿಯ ಪ್ರತಿಷ್ಠಾಪನೆ ಮಾಡುತ್ತಾರೆ. ದೇವಿಯು ಈ ಮೊದಲು ಉಗ್ರಸ್ವರೂಪಿಣಿಯಾಗಿದ್ದು, ಶ್ರೀಧರ ಶ್ರೀಗಳು ಬಂದು ಪ್ರಾರ್ಥಿಸಿ, ಎಲ್ಲರನ್ನೂ ರಕ್ಷಣೆ ಮಾಡುವ ಶಾಂತಸ್ವರೂಪ ದೇವಿಯಾಗು ಎಂದು ಪ್ರಾರ್ಥಿಸಿದ ಬಳಿಕ, ಚೌಡೇಶ್ವರಿ ಸೌಮ್ಯ ಸ್ವರೂಪಿಣಿಯಾದಳು ಎನ್ನಲಾಗಿದೆ.

About The Author