ಹಾಸನ: ನಾನು ಹೊಸ ಶಾಸಕನಾಗಿದ್ದು, ನನ್ನ ೫ ವರ್ಷದ ಅವಧಿಯಲ್ಲಿ ಆನೆ ಸಮಸ್ಯೆಗೆ ನಿವಾರಣೆ ಮಾಡಲು ಪ್ರಾಮಾಣಿಕವಾಗಿ ಅಗತ್ಯಕ್ರಮ ಕೈಗೊಳ್ಳಲಾಗುವುದು. ಇನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡುತ್ತಾ, ಸಕಲೇಶಪುರ ಮತ್ತು ಸುತ್ತ ಮುತ್ತ ಭಾಗದ ಪ್ರಮುಖ ಸಮಸ್ಯೆಯಾದ ಕಾಡಾನೆ ಹಾವಳಿ ನಿಯಂತ್ರಣಕ್ಕೂ ಎಲ್ಲರ ಸಹಕಾರದಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಜೂನ್ ೧ ರಿಂದ ಮಳೆಗಾಲ ಆರಂಭವಾಗುವುದರಿಂದ ಸಕಲೇಶಪುರ ತಾಲೂಕಿನಲ್ಲಿರುವ ದೋಣಿಗಲ್ ಸಮೀಪ ಮುಖ್ಯ ಹೆದ್ದಾರಿ ಆಗಾಗ್ಗೆ ಕುಸಿದು ಸಮಸ್ಯೆ ಆಗುತ್ತಿದೆ. ಇನ್ನು ೧೫ ದಿನಗಳಲ್ಲಿ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಭೂ ಕುಸಿತದ ಬಗ್ಗೆ ಅತೀ ಶೀಘ್ರವಾಗಿ ಕೇಂದ್ರ ಸಚಿವ ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು.
ಸಂಸದ ಪ್ರತಾಪ್ ಸಿಂಹ ಅವರ ಸಹಾಯದೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಚಿವರು ಹಾಗೂ ಅಧಿಕಾರಿಗಳನ್ನು ಈಗಾಗಲೇ ಸಂಪರ್ಕಿಸಲಾಗಿದೆ, ಅತೀ ಶೀಘ್ರವಾಗಿ ಭೇಟಿ ನೀಡುವುದಾಗಿ ಕೇಂದ್ರ ನಾಯಕರು ತಿಳಿಸಿದ್ದಾರೆ ಎಂದರು. ಹಾಸನ ಮಂಗಳೂರು ಸಂಪರ್ಕಿಸುವ ಪ್ರಮುಖ ರಸ್ಥೆಯಾಗಿರುವ ಸಕಲೇಶಪುರ, ಗುಂಡ್ಯ ರಸ್ತೆಯನ್ನು ಬಂದ್ ಮಾಡಲು ಬಿಡುವುದಿಲ್ಲ, ಒಂದು ಬದಿಯ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಮತ್ತೊಂದು ಬದಿಯ ರಸ್ತೆ ಕಾಮಗಾರಿಗೆ ಕ್ರಮವಹಿಸಲಾಗುವುದು.
ಮಳೆಗಾಲದಲ್ಲಿ ಮತ್ತೆ ಭೂ ಕುಸಿತ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಲಿದ್ದು, ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಶೀಘ್ರವೇ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಕ್ಷೇತ್ರದ ಆಸ್ಪತ್ರೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಅಗತ್ಯ ಇರುವ ಸಿಬ್ಬಂದಿಗಳ ನೇಮಕ ಮಾಡಲು ಯೋಜನೆ ರೂಪಿಸಲಾಗಿದೆ, ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಕ್ಷೇಮಾಭಿವೃದ್ಧಿಗೆ ಶ್ರಮವಹಿಸಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೊಸ ಸರ್ಕಾರ ಯಾವುದೇ ತನಿಖೆ ನಡೆಸಲಿ; ಎದುರಿಸಲು ನಾವು ಸಿದ್ದ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
ಸಿಎಂ ಸಿದ್ದರಾಮಯ್ಯರನ್ನ ಮಗನ ಮದುವೆ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಸುಮಲತಾ ಅಂಬರೀಷ್..