Political News: ಬೀದರ್ನಲ್ಲಿ ಎಸ್ಬಿಐ ಸಿಬ್ಬಂದಿ, ಎಟಿಎಂಗೆ ಹಣ ಹಾಕುವ ವೇಳೆ ಗುಂಡಿನ ದಾಳಿಗೆ ಒಳಗಾಗಿದ್ದು, ಓರ್ವ ಮೃತಪಟ್ಟಿದ್ದಾನೆ ಮತ್ತೊರ್ವ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಆಕ್ರೋಶ ಹೊರಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬೀದರ್ ನ ಎಟಿಎಂ ಸಿಬ್ಬಂದಿಯ ಮೇಲಿನ ಮಾರಣಾಂತಿಕ ಗುಂಡಿನ ದಾಳಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು ಹಾಡು ಹಗಲಲ್ಲೇ ಗುಂಡಿನ ದಾಳಿ ನಡೆಸುವಷ್ಟು ಕಿರಾತಕರು ಧೈರ್ಯ ಪ್ರದರ್ಶಿಸಿರುವುದನ್ನು ಕೇವಲ ದರೋಡೆ ಎಂದು ಪರಿಗಣಿಸದೆ ಇದರ ಹಿಂದೆ ಭಯೋತ್ಪಾದಕ ಶಕ್ತಿಗಳು ಇಲ್ಲದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಅತ್ಯಂತ ಗಂಭೀರವಾಗಿ ಈ ಪ್ರಕರಣವನ್ನು ಸರ್ಕಾರ ಪರಿಗಣಿಸಬೇಕಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತಳಪಾಯ ಕಚ್ಚಿದೆ ರಾಜ್ಯವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ದುಷ್ಟ ಶಕ್ತಿಗಳಿಗೆ ಈ ಸರ್ಕಾರ ಉತ್ತೇಜನ ನೀಡುತ್ತಿರುವ ಕಾರಣದಿಂದಾಗಿಯೇ ಮೇಲಿಂದ ಮೇಲೆ ಕ್ರಿಮಿನಲ್ ಅಪರಾಧಗಳು, ಮಾಫಿಯಾಗಳು, ಅಟ್ಟಹಾಸ ಮೆರೆಯುತ್ತಿವೆ. ಈ ದುರ್ಘಟನೆಯನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಈ ಕೂಡಲೇ ದರೋಡೆಕೋರರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಆಗ್ರಹಿಸುವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಈ ಬಗ್ಗೆ ಮಾತನಾಡಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಬೀದರ್ ನಲ್ಲಾದ ATM ದರೋಡೆ, ಚಾಮರಾಜಪೇಟೆ; ನಂಜನಗೂಡಿನಲ್ಲಿ ಹಸುವಿನ ಮೇಲೆ ದುಷ್ಕರ್ಮಿಗಳಿಂದ ದಾಳಿ ಸೇರಿದಂತೆ ಸಾಲು, ಸಾಲು ದರೋಡೆ, ಕಳ್ಳತನ ನಡೆಯುತ್ತಿದ್ದರೂ ಸಹ ಗೃಹ ಸಚಿವರು ಅಪರಾಧಿಗಳು ‘ಮಾನಸಿಕ ಅಸ್ವಸ್ಥರು’, ‘ಘಟನೆ ಆಗಬಾರದಿತ್ತು’ ಹೀಗೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಖಂಡನಾರ್ಹ.
ಮೂಕ ಪ್ರಾಣಿಗಳ ಮೇಲೆ, ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ವಿಚ್ಛಿದ್ರಕಾರಿ ಮನಸ್ಥಿತಿಯ ವ್ಯಕ್ತಿ, ಸಂಘಟನೆಗಳ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಉಡಾಫೆ ಹೇಳಿಕೆಗಳಿಗೆ ಸೀಮಿತವಾಗಿರುವುದು ಗೃಹ ಇಲಾಖೆಯಲ್ಲಿ ಸಮರ್ಥನೀಯ ನಾಯಕತ್ವದ ಕೊರತೆ ಎದ್ದು ಕಾಣುತ್ತದೆ. ಸಂಪುಟದ ಹಿರಿಯ ಸಚಿವರುಗಳು ಸಿ.ಎಂ. ಖುರ್ಚಿಗೆ ಪೈಪೋಟಿ ಮಾಡುವುದನ್ನು ಬಿಟ್ಟು ಕಾನೂನು ಸುವ್ಯವಸ್ಥೆ ಸರಿ ಪಡಿಸಲಿ. ಪೊಲೀಸರಿಗೆ ಕೊಟ್ಟಿರುವ ಆಯುಧಗಳನ್ನು ಉಪಯೋಗಿಸಿ ದುರುಳರನ್ನು ಹೆಡೆಮುರಿಕಟ್ಟಲಿ ಎಂದು ಬಸನಗೌಡ ಪಾಟೀಲ್ ಆಗ್ರಹಿಸಿದ್ದಾರೆ.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಬೀದರನಲ್ಲಿ ಹಾಡ ಹಗಲೇ ಎಟಿಎಂಗೆ ಹಣ ತುಂಬಲು ಬಂದವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವುದು ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ. ರಾಜ್ಯದಲ್ಲಿ ದಿನನಿತ್ಯ ಹಗಲು ದರೋಡೆ, ಪುಟ್ಟ ಮಕ್ಕಳ ಮೇಲೆ ಅತ್ಯಾಚಾರದಂತ ಅಪರಾಧ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿದ್ದು, ಆಡಳಿತ ನಡೆಸುವವರು ಕುರ್ಚಿಗಾಗಿ ಕಿತ್ತಾಟ ನಡೆಸುವುದರಲ್ಲಿ ನಿರತರಾಗಿದ್ದು, ಸರ್ಕಾರಕ್ಕೆ ಪೊಲೀಸರ ಮೇಲೆ ನಿಯಂತ್ರಣ ಇಲ್ಲದಂತಾಗಿದೆ. ಪೊಲಿಸರಿಗೆ ಕ್ರಿಮಿನಲ್ ಗಳ ಮೇಲೆ ನಿಯಂತ್ರಣ ಇಲ್ಲದಂತಾಗಿದ್ದು, ಅಪರಾಧ ಮಾಡುವವರಿಗೆ ಯಾರದೇ ಭಯವಿಲ್ಲದಂತಾಗಿದೆ. ಇದರಿಂದ ಕರ್ನಾಟಕ ಜಂಗಲ್ ರಾಜ್ಯ ಆಗಿದೆ. ಈ ಸರ್ಕಾರದ ಅವಧಿಯಲ್ಲಿ ಮೂಕ ಪ್ರಾಣಿಗಳು, ಮನುಷ್ಯರು ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಜನರು ದಂಗೆ ಏಳುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.