Wednesday, June 18, 2025

Latest Posts

Political News: ಕೆಟ್ಟ ಮೇಲೆ ಬುದ್ದಿ ಕಲಿತ ಸರ್ಕಾರ: ಎಸ್ಒಪಿ ಬಗ್ಗೆ ಪರಮೇಶ್ವರ್ ಏನಂದ್ರು..?

- Advertisement -

Political News: ಐಪಿಎಲ್ ಚೊಚ್ಚಲ ಟ್ರೋಫಿ ಗೆದ್ದ ಖುಷಿಯಲ್ಲಿ ಆರ್​ಸಿಬಿ ಸಂಭ್ರಮಾಚರಣೆಗೆ ಬಂದಿದ್ದ ಅಭಿಮಾನಿಗಳು ಕಾಲ್ತುಳಿತ ಸಂಭವಿಸಿ ದುರಂತ ಅಂತ್ಯಕಂಡಿದ್ದು, ಘಟನೆಯಿಂದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ವಿಪಕ್ಷಗಳೂ ಈ ಘಟನೆಯನ್ನು ಖಂಡಿಸಿ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಪ್ರಕರಣ ದಿನಕಳೆದಂತೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

ಇನ್ನೂ ಈ ದುರ್ಘಟನೆಯಿಂದ ಎಚ್ಚೆತ್ತ ಸರ್ಕಾರವು ಇದೀಗ ರಾಜ್ಯದಲ್ಲಿ ಬೃಹತ್ ಕಾರ್ಯಕ್ರಮ, ಸಭೆ ಹಾಗೂ ಸಮಾರಂಭಗಳಿಗೆ ಎಸ್​​ಒಪಿ ನಿಯಮಾವಳಿಗಳನ್ನು ಜಾರಿಗೆ ತರಲು ಸಿದ್ಧವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಇನ್ನು ಮುಂದೆ ರಾಜ್ಯದಲ್ಲಿ ದೊಡ್ಡಮಟ್ಟದ ಸಭೆ, ಸಮಾರಂಭ ಮತ್ತು ವಿಜಯೋತ್ಸವ ಕಾರ್ಯಕ್ರಮಗಳಿಗೆ ಹೊಸ ಎಸ್‌ಒಪಿ ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್ ಅನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ದುರ್ಘಟನೆಯಿಂದ ಎಚ್ಚೆತ್ತ ಸರ್ಕಾರ, ಸಭೆ, ಸಮಾರಂಭಗಳಿಗೆ ಎಸ್​ಒಪಿ ಜಾರಿ..

ನಿನ್ನೆ ನಡೆದ ಘಟನೆ ರಾಜ್ಯದ ಕ್ರಿಕೆಟ್ ಇತಿಹಾಸದಲ್ಲೇ ಯಾವತ್ತೂ ಸಂಭವಿಸಿರಲಿಲ್ಲ. ಈ ದುರ್ಘಟನೆಯಲ್ಲಿ ಸಾವನ್ನಪ್ಪಿರುವವರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಇನ್ನೂ ಸಿಎಂ ಅ‌ವರು ನಿನ್ನೆ ಸಭೆ ನಡೆಸಿ, ಅನೇಕ ಮಾಹಿತಿ ಪಡೆದು ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಯಾಗಬೇಕೆಂದು ಆದೇಶಿಸಲಾಗಿದೆ. ಅವರು ಯಾರೇ ಆಗಿರಲಿ, ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ಈಗ ವಿವರಣೆ ಮಾಡಲು ಹೋಗುವುದಿಲ್ಲ. ತನಿಖೆಯ ವರದಿ ಬರುವವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ

ಈ ದುರ್ಘಟನೆಯಲ್ಲಿ 11 ಜನ ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. 46 ಜನ ಚಿಕಿತ್ಸೆ ಪಡೆದು ಮನೆಗಳಿಗೆ ಹೋಗಿದ್ದಾರೆ. 10 ಜನ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದು, ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ದುರಂತಗಳು ನಡೆಯಬಾರದೆಂಬ ಕಾರಣಕ್ಕಾಗಿಯೇ ಗೃಹ ಇಲಾಖೆಯಿಂದ ಒಂದು ಹೊಸ ಎಸ್‌ಒಪಿ ಸ್ಟ್ಯಾಂಡರ್ಡ್ ಆಪರೇಟಿವ್ ಪ್ರೊಸಿಜರ್ ಮಾಡುತ್ತೇವೆ.‌ ಇನ್ನು ಮುಂದೆ ಯಾವುದೇ ದೊಡ್ಡ ಸಮಾರಂಭ, ಸಭೆ, ವಿಜಯೋತ್ಸವ ನಡೆಯುವಾಗ ಪೊಲೀಸ್ ಇಲಾಖೆಯ ನಿರ್ದೇಶನ ಏನು ಬರುತ್ತದೆ, ಅದರ ಚೌಕಟ್ಟಿನಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಸಾವುಗಳನ್ನು ನೋಡಿದಾಗ ನನಗೆ ನೋವಾಗುತ್ತಿದೆ, ಅವರೆಲ್ಲ ಅಮಾಯಕರು..

ಇನ್ನು ಮುಂದೆ ನಾವು ಕೆಲವು ಸೂಚನೆಗಳನ್ನು ಕೊಡುತ್ತೇವೆ. ಯಾವತ್ತು ಕೂಡ ಇಂತಹ ದುರಂತಗಳು ಸಂಭವಿಸಬಾರದು, ಅಮಾಯಕರ ಸಾವುಗಳು ಆಗಬಾರದು. ಇದೆಲ್ಲವನ್ನು ನೋಡಿದಾಗ ನೋವಾಗುತ್ತದೆ. ನಿನ್ನೆ ಶವಗಾರದಲ್ಲಿ ನೋಡಿದಾಗ ದುಃಖವಾಯಿತು. 20-25 ವರ್ಷ ವಯಸ್ಸಿನವರು ಸಂತೋಷದಿಂದ ಆಚರಣೆಗೆ ಬಂದಾಗ ಜೀವವನ್ನೇ‌ ಕಳೆದುಕೊಂಡಿದ್ದಾರೆ. ಇದೆಲ್ಲವನ್ನು ಯಾರು ಊಹೆ ಮಾಡಿರಲಿಲ್ಲ ಎಂದು ಘಟನೆಯ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲಿ ಲೋಪವಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ. ಒಬ್ಬ ವ್ಯಕ್ತಿ ತನಗಿದ್ದ ಒಬ್ಬ ಮಗನನ್ನು ಕಳೆದಕೊಂಡ ಬಗ್ಗೆ ವೈದೇಹಿ ಆಸ್ಪತ್ರೆಯಲ್ಲಿ ಹೇಳಿಕೊಂಡರು. ಮಗ ಕಾಲೇಜಿಗೆ ಹೋಗುವುದಾಗಿ ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟಿದ್ದ, ಆದರೆ ಈ ರೀತಿಯಾಗಿ ಜೀವ ಕಳೆದುಕೊಂಡಿದ್ದಾನೆ. ಇದನ್ನು ಯಾರೂ ಕೂಡ ಊಹಿಸಿರಲಿಲ್ಲ. 34 ಸಾವಿರ ಸೀಟುಗಳ ಸಾಮರ್ಥ್ಯ ಇರುವ ಸ್ಟೇಡಿಯಂಗೆ 3 ಲಕ್ಷ‌ ಜನ ಬಂದಿದ್ದರು ಎಂದು ಪರಮೇಶ್ವರ್ ವಿವರಿಸಿದ್ದಾರೆ.

ಒಂದೇ ದಿನಕ್ಕೆ ಬರೊಬ್ಬರಿ 8.7 ಲಕ್ಷ ಜನರಿಂದ ಮೆಟ್ರೊ ಪ್ರಯಾಣ..

ಅಲ್ಲದೆ ಒಂದೇ ದಿನ ಮೆಟ್ರೋ ಸಂಸ್ಥೆಯವರು ನೀಡಿರುವ ಮಾಹಿತಿ ಪ್ರಕಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೆ 8.7 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ‌ ಮಾಡಿದ್ದಾರೆ. ತನಿಖೆಯ ವರದಿ ಬರುವವರೆಗೂ ಏನನ್ನು ಹೇಳುವುದಿಲ್ಲ‌. ಘಟನೆ ಬಗ್ಗೆ ಆರ್‌ಸಿಬಿ, ಕೆಎಸ್‌ಸಿಎ ಅವರೊಂದಿಗೆ ಸಭೆ ಮಾಡುತ್ತೇನೆ. ತಾಂತ್ರಿಕವಾಗಿ ಏನೇ ಇದ್ದರು ಸಹ ಡಿಜಿಪಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ನೋಡಿಕೊಳ್ಳುತ್ತಾರೆ ಎಂದ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಅಮಾಯಕ ಜೀವಗಳ ಸಾವಿಗೆ ಯಾರು ಹೊಣೆ..?

ಇನ್ನೂ ಈ ದುರ್ಘಟನೆಗೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್​ಸಿಬಿ ಫ್ರಾಂಚೈಸಿ, ಕೆಎಸ್​ಸಿಎ ವಿರುದ್ಧ ನಿರ್ಲಕ್ಷ್ಯದ ಆರೋಪದ ಮೇಲೆ ಬಿಎನ್​ಎಸ್​​ ಕಾಯ್ದೆ 195ರ ಅಡಿಯಲ್ಲಿ ದೂರು ದಾಖಲಾಗಿದೆ. ಆದರೆ ಈ ರೀತಿಯ ದೂರು ದಾಖಲಿಸಿಕೊಳ್ಳಲು ಘಟನೆ ನಡೆದು 24 ಗಂಟೆಗಳೇ ಕಳೆಯಬೇಕಿತ್ತಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಅಲ್ಲದೆ ಈ ದುರ್ಘಟನೆಯ ಹೊಣೆಯನ್ನು ಹೊರುವುದಕ್ಕೆ ಇತ್ತ ಸರ್ಕಾರವೂ ತಯಾರಿಲ್ಲ, ಅತ್ತ ರಾಜ್ಯ ಕ್ರಿಕೆಟ್ ಮಂಡಳಿಯೂ ಸಿದ್ಧವಿಲ್ಲ. ಒಬ್ಬರನ್ನೊಬ್ಬರು ದೂಷಿಸುವ ಕೆಲಸವೇ ನಡೆಯುತ್ತಿರುವುದರಿಂದ ನಿಜವಾಗಿಯೂ ಈ ಅಮಾಯಕ ಜೀವಗಳ ಸಾವಿಗೆ ಕಾರಣ ಯಾರೆಂಬುದು ಇದುವರೆಗೂ ಸ್ಪಷ್ಟವಾಗುತ್ತಿಲ್ಲ.

- Advertisement -

Latest Posts

Don't Miss