Political News: ಕುಡುಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರು ಅವರ ಮಗನಿಗೆ ಶಿವಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಈ ನಾಮಕರಣ ಮಾಡಿದವರು ಡಿಸಿಎಂ ಡಿ.ಕೆ.ಶಿವಕುಮಾರ್. ತಮ್ಮ ಮಗನಿಗೆ ಉಪಮುಖ್ಯಮಂತ್ರಿಗಳ ಹೆಸರನ್ನೇ ಇಡಬೇಕು ಎಂದು ನಿರ್ಧರಿಸಿದ್ದ ಕಾರಣ, ಡಿಕೆಶಿ ನಿವಾಸಕ್ಕೆ ಬಂದಿದ್ದ ಮಹೇಂದ್ರ ಅವರು, ಶಿವಕುಮಾರ್ ಅವರ ಬಳಿಯೇ ಮಗನಿಗೆ ನಾಮಕರಣ ಮಾಡಲು ಮನವಿ ಮಾಡಿದ್ದಾರೆ. ಡಿಸಿಎಂ ಕೂಡ ಖುಷಿಯಿಂದಲೇ ತಮ್ಮ ಹೆಸರನ್ನು ಮಗುವಿಗೆ ನಾಮಕರಣ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದಿರುವ ಡಿಕೆಶಿ, ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ! ನನ್ನ ಗೃಹಕಚೇರಿಯಲ್ಲಿಂದು ಕುಡಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರ ಮಗನಿಗೆ “ಶಿವಕುಮಾರ್” ಎಂದು ನಾಮಕರಣ ಮಾಡುವ ಭಾಗ್ಯ ನನ್ನದಾಯಿತು. ನನ್ನ ಹೆಸರನ್ನು ಮಗುವಿಗೆ ಇಡಲು ನಿರ್ಧರಿಸಿದ ಶಾಸಕರ ಈ ನಡೆಗೆ ನಾನು ಧನ್ಯ! ಎಂದಿದ್ದಾರೆ.
ಅಲ್ಲದೇ, ಮುಂದಿನ ದಿನಗಳಲ್ಲಿ ಈ ಮುದ್ದಾದ ಮಗು ನನಗಿಂತಲೂ ಎತ್ತರಕ್ಕೆ ಬೆಳೆಯಲಿ, ತಂದೆ-ತಾಯಿಗಳಿಗೆ ಒಳ್ಳೆಯ ಹೆಸರು ತರುವಂತಾಗಲಿ ಎಂದು ಶುಭಹಾರೈಸಿದ್ದಾರೆ. ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಈ “ಶಿವಕುಮಾರ” ಕರುನಾಡ ಬೆಳಗುವ ಕುವರನಾಗಲಿ ಎಂದು ಮನತುಂಬಿ ಹಾರೈಸುವೆ ಎಂದು ಡಿಕೆಶಿ ಶುಭ ಹಾರೈಸಿದ್ದಾರೆ.

