Political News: ಯುಗಾದಿಯ ಬಳಿಕ ಬಿಜೆಪಿ ಪಕ್ಷದ ಹುದ್ದೆಗಳಲ್ಲಿ ಬದಲಾವಣೆಯಾಗುವ ಚರ್ಚೆಗಳು ಜೋರಾಗಿದ್ದವು. ಆದರೆ ಅದಕ್ಕೆ ಅಂತಿಮ ತೆರೆ ಎಳೆಯಲು ಹೈಕಮಾಂಡ್ ಮುಂದಾಗಿದ್ದು, ಏಪ್ರಿಲ್ 12ರ ಬಳಿಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಬದಲಾವಣೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಈ ಕುರಿತು ದೆಹಲಿಯ ಬಿಜೆಪಿ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಆಗಮಿಸಿ ಪಕ್ಷದಲ್ಲಿನ ಮುಖಂಡರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈ ಬೆಳವಣಿಗೆಯಿಂದ ರೆಬಲ್ ನಾಯಕರ ಬೇಡಿಕೆಗೆ ಹೈಕಮಾಂಡ್ ಮಣೆ ಹಾಕಿತಾ..? ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜ್ಯಕ್ಕೆ ಶಿವರಾಜ್ ಸಿಂಗ್ ಚೌಹಾಣ್..?
ಇನ್ನೂ ಕೇಂದ್ರ ಬಿಜೆಪಿ ಚುನಾವಣಾ ಉಸ್ತುವಾರಿ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಕ್ಕೆ ಆಗಮಿಸುವ ಕುರಿತು ಪಕ್ಷದ ವಲಯದಲ್ಲಿ ಮಾಹಿತಿ ಹರಿದಾಡುತ್ತಿದೆ. ಪ್ರಮುಖವಾಗಿ ರಾಜ್ಯಕ್ಕೆ ಆಗಮಿಸಿದ ಬಳಿಕ ಸ್ಥಳೀಯ ಬಿಜೆಪಿ ನಾಯಕರ ಜೊತೆ ಅವರು ಸಮಾಲೋಚನೆ ನಡೆಸಲಿದ್ದಾರೆ. ಅದರಲ್ಲೂ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಳಿಕ ಮುಂದೆ ಆ ಸ್ಥಾನಕ್ಕೆ ಯಾರನ್ನು ಪರಿಗಣಿಸಬೇಕು..? ನೂತನ ಅಧ್ಯಕ್ಷರ ನೇಮಕದಿಂದ ಪಕ್ಷಕ್ಕೆ ಯಾವ ರೀತಿಯ ಲಾಭವಾಗಲಿದೆ..? ಮತ್ತೆ ಯುವನಾಯಕತ್ವಕ್ಕೆ ಮಣೆ ಹಾಕಬೇಕೆಂಬ ಎಲ್ಲ ವಿಚಾರಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಚೌಹಾಣ್ ಅವರು ಕ್ರೋಢೀಕರಿಸಲಿದ್ದಾರೆ ಎನ್ನಲಾಗುತ್ತಿದೆ.
ಅಲ್ಲದೆ ರಾಜ್ಯದಲ್ಲಿ ತಾವು ಸಂಗ್ರಹಿಸಿದ ಮಾಹಿತಿ ಹಾಗೂ ರಾಜ್ಯ ನಾಯಕರ ಜೊತೆಗಿನ ಅಭಿಪ್ರಾಯದ ಕುರಿತು ಎಲ್ಲ ವಿವರಗಳ ವರದಿಯನ್ನು ಚೌಹಾಣ್ ದೆಹಲಿಗೆ ವಾಪಸ್ ಆದ ಬಳಿಕ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ. ಬಳಿಕ ಅಂತಿಮವಾಗಿ ಹೈಕಮಾಂಡ್ ನಾಯಕರು ಈ ವಿಚಾರದ ಮೇಲೆ ಗಂಭೀರವಾಗಿ ಚರ್ಚೆನಡೆಸಿ ಅಳೆದು-ತೂಗಿ ಲೆಕ್ಕಾಚಾರ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಜಯೇಂದ್ರ ಮುಂದುವರೆಸುವ ಒಲವು..!
ಅಂದಹಾಗೆ ಸದ್ಯದ ಸ್ಥಿತಿಯಲ್ಲಿ ವಿಜಯೇಂದ್ರ ಅವರನ್ನೇ ಮುಂದುವರೆಸುವ ಇರಾದೆಯಲ್ಲಿ ಪಕ್ಷದ ನಾಯಕರಿದ್ದಾರೆ. ಆದರೆ ರಾಜ್ಯಕ್ಕೆ ಶಿವರಾಜ್ ಸಿಂಗ್ ಚೌಹಾಣ್ ಆಗಮಿಸಿ ಅಭಿಪ್ರಾಯ ಪಡೆದ ಬಳಿಕ ಪರಿಸ್ಥಿತಿ ಬದಲಾಗಲಿದೆ ಎನ್ನುವುದು ಪಕ್ಷದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ. ಇನ್ನೂ ಮುಖ್ಯವಾಗಿ ರಾಜ್ಯದ ಬಿಜೆಪಿಯಲ್ಲಿನ ಆಂತರಿಕ ಕಲಹ ಹಾಗೂ ಬಣ ಬಡಿದಾಟದ ಕುರಿತು ಹೈಕಮಾಂಡ್ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಬಳಿಕ ವಿಜಯೇಂದ್ರ ಸಕ್ರಿಯರಾಗಿದ್ದಾರೆ. ಅಲ್ಲದೆ ಬೀದಿಯಲ್ಲೇ ನಿಂತು ಯಾವುದೇ ಹಿಂಜರಿಕೆ ಇಲ್ಲದೆ ನೇರವಾಗಿ ತಮ್ಮ ಹಾಗೂ ಕುಟುಂಬದ ವಿರುದ್ಧ ಬೆಂಕಿಯುಗುಳುತ್ತಿರುವ ಯತ್ನಾಳ್ರ ಎಲ್ಲ ಆರೋಪಗಳನ್ನು ಹುಸಿಯಾಗಿಸಲು ವಿಜಯೇಂದ್ರ ಸಿದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಬಗ್ಗೆ ದಿಲ್ಲಿ ನಾಯಕರಿಗೆ ತಪ್ಪು ಸಂದೇಶ ರವಾನೆಯಾಗುವ ಮುನ್ನವೇ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಯತ್ನಾಳ್ ಆರೋಪಗಳಿಗೆ ಕೌಂಟರ್ ಕೊಡುವ ಪ್ರಯತ್ನ ಅವರು ಮಾಡುತ್ತಿದ್ದಾರೆ.
ದಿಲ್ಲಿ ನಾಯಕರ ಎಚ್ಚರಿಕೆಯ ನಡೆ..
ಇನ್ನೂ ಯತ್ನಾಳ್ ಹಾಗೂ ವಿಜಯೇಂದ್ರ ಬಣದ ಎಲ್ಲ ಚಟುವಟಿಕೆಗಳನ್ನು ಗಮನಿಸಿದಾಗ, ಉಚ್ಚಾಟಿತ ಯತ್ನಾಳ್ ಒಬ್ಬರನ್ನು ಹೊರತುಪಡಿಸಿ ಉಳಿದವರು ಪಕ್ಷ ಹಿತದ ವಿರುದ್ಧ ನಡೆದುಕೊಂಡಿಲ್ಲ ಎನ್ನುವುದು ಹೈಕಮಾಂಡ್ ಅಭಿಪ್ರಾಯವಾಗಿದೆ. ಹೀಗಾಗಿ ಈ ಬಾರಿ ರಾಜ್ಯಾಧ್ಯಕ್ಷರ ಆಯ್ಕೆಯ ಬಗ್ಗೆ ದೆಹಲಿ ನಾಯಕರು ಎಚ್ಚರಿಕೆಯ ನಡೆಯನ್ನು ಅನುಸರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಒಂದು ವೇಳೆ ವಿಜಯೇಂದ್ರ ಕೆಳಗಿಳಿಸಿದರೆ ಅದರ ಪರಿಣಾಮದ ಬಗ್ಗೆಯೂ, ಅದರಲ್ಲೂ ಮುಖ್ಯವಾಗಿ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಕುರಿತು ಆತಂಕವೂ ಅವರಿಗೆ ಇದೆ. ಇನ್ನೂ ರೆಬಲ್ ನಾಯಕರನ್ನು ವಿಶ್ವಾಸಕ್ಕೆ ಪಡೆದು ನೂತನ ರಾಜ್ಯಾಧ್ಯಕ್ಷರ ಆಯ್ಕೆ ಮಾಡಿದರೆ ಅರ್ಧ ಸಮಸ್ಯೆ ಪರಿಹರಿಸಿದಂತಾಗುತ್ತದೆ ಎನ್ನುವುದು ದಿಲ್ಲಿ ನಾಯಕರ ಮುಂದಿನ ಹೆಜ್ಜೆಯಾಗಿದೆ ಎನ್ನುವುದು ಪಕ್ಷದ ಮೂಲಗಳ ಮಾಹಿತಿಯಾಗಿದೆ.