ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು ಕೊಲೆಯ ಪ್ರಮುಖ ಆರೋಪಿಯನ್ನ ತಲೆಮರೆಸಿಕೊಂಡಿದ್ದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯಕಾರಿಣಿ ಸದಸ್ಯನನ್ನು ಎನ್ಐಎ ಬಂಧಿಸಿದೆ.
ಲುಕ್ಔಟ್ ಸುತ್ತೋಲೆಯನ್ನು ಹೊಂದಿದ್ದ ಕೊಡಾಜೆ ಮೊಹಮ್ಮದ್ ಶೆರೀಫ್ನನ್ನು ಬಹ್ರೇನ್ನಿಂದ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಆರೋಪಿಯನ್ನ ಬಂಧಿಸಲಾಗಿದೆ.
ಇನ್ನು ಶರೀಫ್ ಪಿಎಫ್ ಐ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದು, ಸಜ್ಜು ಸೇವಾ ತಂಡದ ಮುಖ್ಯಸ್ಥನಾಗಿದ್ದನು. ಸಹ ಆರೋಪಿಗಳೊಂದಿಗೆ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ನಲ್ಲಿ ಸೇವಾ ತಂಡದ ಸದಸ್ಯರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವಲ್ಲಿ ತೊಡಗಿಸಿಕೊಂಡಿದ್ದನು. ಪಿಎಫ್ಐನ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಉದ್ದೇಶಿತ ಹತ್ಯೆಗಳಿಗೆ ಸೂಚನೆಗಳನ್ನು ರವಾನಿಸುವ ಜವಾಬ್ದಾರಿಯನ್ನು ಕೊಡಾಜೆ ಕೂಡ ವಹಿಸಿದ್ದನು.
ಅಂದಹಾಗೆ ಇದೇ ಸೂಚನೆಗಳ ಮೇರೆಗೆ ಆರೋಪಿ ಮುಸ್ತಫಾ ಪೈಚಾರ್ ಮತ್ತು ಆತನ ತಂಡ ಪ್ರವೀಣ್ ನೆಟ್ಟಾರು ರನ್ನು ಬರ್ಬರವಾಗಿ ಹತ್ಯೆಗೈದಿತ್ತು. ಅಲ್ಲದೇ ಸಮಾಜದಲ್ಲಿ ಭಯೋತ್ಪಾದನೆ, ಕೋಮು ದ್ವೇಷ ಮತ್ತು ಅಶಾಂತಿಯನ್ನು ಹರಡುವ ಗುರಿಯನ್ನು ಈ ಪಿತೂರಿಯು ಹೊಂದಿತ್ತು.
ಪ್ರವೀಣ್ ನೆಟ್ಟಾರು ಯುವ ಬಿಜೆಪಿಯ ಮೋರ್ಚಾ ಸದಸ್ಯರಾಗಿದ್ದರು. ಜುಲೈ 26, 2022 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಅವರನ್ನು ಪಿಎಫ್ಐ ಕಾರ್ಯಕರ್ತರು ಮತ್ತು ಸದಸ್ಯರು ಕೊಲೆ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ. ಇನ್ನು ಆಗಸ್ಟ್ 4, 2022 ರಂದು ತನಿಖೆಯನ್ನು ಕೈಗೆತ್ತಿಕೊಂಡ NIA, ಇದುವರೆಗೆ 20 ವ್ಯಕ್ತಿಗಳನ್ನು ಬಂಧಿಸಿದೆ . ಅಲ್ಲದೇ ಈ ಪ್ರಕರಣದಲ್ಲಿ ಮೂವರು ತಲೆಮರೆಸಿಕೊಂಡಿರುವವರು ಸೇರಿದಂತೆ 23 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಕೂಡ ಸಲ್ಲಿಸಿದೆ.