ಚಾಮರಾಜನಗರ : ನಿನ್ನೆ ಸಾಯಂಕಾಲ ಸುರಿದ ಮಳೆಗೆ ಕೊಳ್ಳೇಗಾಲದ ಬಸ್ ನಿಲ್ದಾಣ ಕೆಸರುಗದ್ದೆಯಂತೆ ಆಗಿದ್ದು ಚರಂಡಿ ನೀರಲ್ಲ ರಸ್ತೆ ಮೇಲೆ ಹರಿದಾಡುತ್ತಿದ್ದು, ಹಾಗೂ ಮ್ಯಾನ್ ಹೋಲ್ಗಳು ತುಂಬಿ ರಸ್ತೆ ಮೇಲೆ ಹರಿದು ಬರುತ್ತಿದ್ದು ದುರ್ವಾಸನೆಗೆ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿದ್ದಾರೆ. ರಾಜ್ಯದ ತಾಲೂಕುಗಳಲ್ಲಿ ಕೊಳ್ಳೇಗಾಲ ತಾಲೂಕು ಅತಿ ದೊಡ್ಡ ತಾಲೂಕು. ಕೊಳ್ಳೇಗಾಲ ತಾಲೂಕು ಗಗನಚುಕ್ಕಿ, ಬರಚುಕ್ಕಿ ಜಲಪಾತ, ಮಲೆ ಮಹದೇಶ್ವರನ ಬೆಟ್ಟ, ಚಿಕ್ಕಲೂರು ಶ್ರೀ ಸಿದ್ದಪ್ಪಾಜಿ ದೇವಾಲಯ, ಶಿವನಸಮುದ್ರ, ಬಿಳಿಗಿರಿರಂಗನಬೆಟ್ಟ ದಂತಹ ಪ್ರಸಿದ್ಧ ಧಾರ್ಮಿಕ ತಾಣಗಳನ್ನು ಹೊಂದಿದ್ದು ಅತಿ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಇಂತಹ ತಾಲೂಕಿನಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಇರುವ ಕಾರಣ ಇಲ್ಲಿನ ಜನರು ಹಾಗೂ ಪ್ರವಾಸಿಗರು ಚುನಾಯಿತ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೊಳ್ಳೇಗಾಲದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ 22 ಕೋಟಿ ಬಿಡುಗಡೆ ಮಾಡಿದ್ದು ಮೂರ್ನಾಲ್ಕು ವರ್ಷಗಳಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇಲ್ಲಿನ ಪ್ರಯಾಣಿಕರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಚುನಾಯಿತ ಪ್ರತಿನಿಧಿಗಳು ಇದರ ಕಡೆ ಗಮನ ಕೊಡದೆ ಇರುವುದು ವಿಷಾದಕರ ಸಂಗತಿಯಾಗಿದೆ.