Sandalwood News: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಾಮೀನು ಪಡೆದು ಹೊರಗಿರುವ 17 ಆರೋಪಿಗಳ ವಿಚಾರಣೆ ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ. ರೇಣುಕಾಸ್ವಾಮಿ ಹತ್ಯೆ ಮಾಡಿದ್ದ ಎಲ್ಲಾ ಆರೋಪಿಗಳಿಗೂ ಫೆಬ್ರವರಿ 25 ರಂದು ವಿಚಾರಣೆಗೆ ಹಾಜರಾಗಿದ್ದರು. ಎ1 ಆರೋಪಿ ಪವಿತ್ರಾಗೌಡ ಮತ್ತು ಎ2 ಆರೋಪಿ ದರ್ಶನ್ ಸೇರಿದಂತೆ ಆ ಎಲ್ಲಾ ಆರೋಪಿಗಳಿಗೂ ನ್ಯಾಯಾಲಯ ವಿಚಾರಣೆ ನಡೆಸಿದ ನಂತರ ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಮಾಡಿದ್ದ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಅದರಲ್ಲೂ ಮುಖ್ಯವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಲೇಬೇಕು ಎಂದು ಹೈಕೋರ್ಟ್ ಸೂಚನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಎಲ್ಲಾ 17 ಜನ ಆರೋಪಿಗಳು ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಎಲ್ಲರ ಹಾಜರಾತಿಯನ್ನು ಕೋರ್ಟ್ ಸಿಬ್ಬಂದಿ ದಾಖಲಿಸಿಕೊಂಡರು. ಆ ಬಳಿಕ ಹಾಜರಿದ್ದ ದರ್ಶನ್ ಹಾಗೂ ಪವಿತ್ರಾ ಗೌಡ ತುಸು ದೂರವೇ ನಿಂತಿದ್ದರು. ಪರಸ್ಪರ ಮಾತನಾಡಲು ಇಲ್ಲ, ಅವರಿಬ್ಬರೂ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ.
ನಾಲ್ಕು ಜನ ಆರೋಪಿಗಳಿಗೆ ಮಾಫಿ ಸಾಕ್ಷಿಗೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ದರ್ಶನ್ ಪರ ವಕೀಲರಾದ ಸುನಿಲ್ ಆರೋಪಿಸಿದ್ದಾರೆ. ಇತರೆ ಆರೋಪಿಗಳಿಗೂ ಅಪ್ರೂವರ್ ಆಗುವಂತೆ ಪೊಲೀಸರು ಹೇಳುತ್ತಿದ್ದಾರೆ ಎಂದು ವಕೀಲರು ವಾದ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಧೀಶರು, “ನೀವು ಈ ಬಗ್ಗೆ ಅರ್ಜಿ ಹಾಕಿದರೆ ವಿಚಾರಣೆ ನಡೆಸಬಹುದು” ಎಂದು ಹೇಳಿದ್ದಾರೆ. ಅರ್ಜಿ ಹಾಕಲು ಸೂಚಿಸಿರುವ ಕೋರ್ಟ್ ವಿಚಾರಣೆ ಮುಂದೂಡಿದೆ.
ವಿಚಾರಣೆ ಮುಗಿಸಿ ಪವಿತ್ರಾ ಗೌಡ ಕಣ್ಣೀರು ಹಾಕುತ್ತಾ ಕೋರ್ಟ್ನಿಂದ ಹೊರ ಬಂದಿದ್ದಾರೆ. ಬಳಿಕ ಕೋರ್ಟ್ನಿಂದ ನೇರವಾಗಿ ಆರ್ಆರ್ ನಗರದ ಮನೆಯತ್ತ ಪವಿತ್ರಾ ಗೌಡ ಹೊರಟಿದ್ದಾರೆ. ಜನವರಿ 10ರಂದು ನಡೆದಿದ್ದ ಕೋರ್ಟ್ ವಿಚಾರಣೆ ವೇಳೆಯೂ ದರ್ಶನ್- ಪವಿತ್ರಾ ಮುಖಾಮುಖಿ ಆಗಿದ್ದರು. ಈ ವೇಳೆ ಇಬ್ಬರೂ ಮಾತನಾಡಿದ್ದರು. ಆದರೆ, ಈ ಬಾರಿ ಮಾತನಾಡಿಲ್ಲ. ಆರ್ಆರ್ ನಗರದ ಮನೆಯಿಂದ ದರ್ಶನ್ ಕೋರ್ಟ್ಗೆ ಹೊರಟಾಗ ಕೆಲ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿದ್ದರು. ದರ್ಶನ್ ಕೈ ಕುಲುಕಿ ಅಭಿಮಾನಿಗಳು ವಿಶ್ ಮಾಡಿದ್ದರು. ಕೆಲವರು ನೆಚ್ಚಿನ ನಟನ ಕಾಲಿಗೆ ನಮಸ್ಕರಿಸಿದ್ದರು. ಆ ಬಳಿಕ ಕಾರ್ ಏರಿ ನೇರ ನ್ಯಾಯಾಲಯಕ್ಕೆ ಆಗಮಿಸಿದ್ದರು.