Sandalwood News: ಮಾಡುವ ಮುನ್ನ ಅದು ತಪ್ಪು ಅನ್ನೋದು ಗೊತ್ತಾಗಲ್ಲ. ಒಂದು ವೇಳೆ ಇದು ಸರಿನಾ ತಪ್ಪಾ ಅಂತ ಗೊಂದಲದಲ್ಲಿದ್ದರೂ, ಒಂದೊಮ್ಮೆ ಟ್ರೈ ಮಾಡೋಣ. ಬಂದಿದ್ದು ಆಮೇಲೆ ನೋಡಿಕೊಳ್ಳೋಣ ಅನ್ನೋ ಜಾಯಮಾನ ಕೆಲವರದು. ಈ ಮಾತು ಹೇಳ್ತಾ ಇರೋದು, ಇತ್ತೀಚೆಗೆ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿ ಹೊರಬಂದ ರಜತ್ ಹಾಗು ವಿನಯ್ ಗೌಡ ಅವರಿಗೆ. ವಿಷಯ ಏನಪ್ಪಾ ಅಂದ್ರೆ, ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲಿಗೆ ಹೋಗಿ ಸದ್ಯ ಜೈಲಿಂದ ರಿಲೀಸ್ ಆಗಿರುವ ರಜತ್ ಮತ್ತು ವಿನಯ್ ಗೌಡ ಅವರಿಗೆ ತಮ್ಮ ತಪ್ಪಿನ ಅರಿವಾದಂತಿದೆ. ಈ ಕುರಿತು ಸ್ವತಃ ವಿನಯ್ ಗೌಡ ಅವರು, ರಿಲೀಸ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ಗೆ ಕ್ಷಮೆಯಾಚಿಸಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ನನ್ನಿಂದ ತಪ್ಪಾಗಿದೆ ಎಂದು ತಮ್ಮ ತಪ್ಪಿನ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ವಿನಯ್ ಗೌಡ, ಕರ್ನಾಟಕದ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಕ್ಷಮೆ ಕೇಳ್ತೀನಿ. ಕಳೆದ ನಾಲ್ಕು ದಿನದಿಂದ ನೀವು ಟಿವಿಯಲ್ಲಿ ನೋಡಿರಬಹುದು. ಒಂದು ಮಚ್ಚಿನ ಕಥೆ ನಡೆಯುತ್ತಿದೆ. ಪ್ರತಿ ಒಬ್ಬರಿಗೂ ನನ್ನ ಫ್ಯಾಮಿಲಿ ಹಾಗೂ ಫ್ಯಾನ್ಸ್ಗೆ ಕ್ಷಮೆ ಕೇಳಬೇಕು ಅಂತಾನೇ ವಿಡಿಯೋ ಮಾಡ್ತಿದ್ದೀನಿ. ನನ್ನಿಂದ ನನ್ನ ಹೆಂಡತಿ, ಮಗ, ಸ್ನೇಹಿತರಿಗೆ ತೊಂದರೆ ಆಗಿದೆ. ದಯವಿಟ್ಟು ಕ್ಷಮಿಸಿ ಬಿಡಿ ಎಂದಿರುವ ವಿನಯ್, ಸಂಕಷ್ಟದ ಸಮಯದಲ್ಲಿ ನಿಂತವರಿಗೆ ಅವರು ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ. ನನ್ನಿಂದ ತಪ್ಪಾಗಿದೆ ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಾಗಿತ್ತು. ನಾನು ಈ ರೀತಿ ಮೆಸೇಜ್ ನನ್ನ ಫಾಲೋವರ್ಸ್ಗೆ ಕೊಡಬಾರದಿತ್ತು ಕ್ಷಮಿಸಿ ಎಂದಿದ್ದಾರೆ.
ಪೊಲೀಸ್ ಇಲಾಖೆ ಅವರು ಸರಿಯಾಗಿ ತನಿಖೆ ಮಾಡಿದ್ದಾರೆ. ಕಾಮನ್ ಮ್ಯಾನ್ ಸೆಲೆಬ್ರೇಟಿ ಅಂತ ನೋಡದೆ, ತನಿಖೆ ಮಾಡಿದ್ದಾರೆ. ನಮ್ಮನ್ನು ಚೆನ್ನಾಗಿ ಟ್ರೀಟ್ ಮಾಡಿದ್ದಾರೆ. ದಯವಿಟ್ಟು ಪೊಲೀಸ್ ಅವರ ಮೇಲೆ ಯಾವುದೇ ಆರೋಪ ಮಾಡಬೇಡಿ. ಕಾಮನ್ ಮ್ಯಾನ್ ಹಾಗೆಯೇ ನಮ್ಮನ್ನ ಟ್ರೀಟ್ ಮಾಡಿದ್ದಾರೆ. ಇನ್ನೂ ಪೊಲೀಸ್ ಅವರು ನಮ್ಮಿಂದ ಹಣ ಪಡೆದ್ದಿದ್ದಾರೆ ಅನ್ನೋದೆಲ್ಲ ಸುಳ್ಳು ವದಂತಿ ಎಂದಿದ್ದಾರೆ. ಪೊಲೀಸರು ನಮಗೆ ಹಾಗೆ ಮಾಡಿಲ್ಲ. ಕಾನೂನು ಬದ್ಧವಾಗಿ ತನಿಖೆ ಮಾಡಿದ್ದಾರೆ ಎಂದಿರುವ ಅವರು, ಪೊಲೀಸ್ ಅಧಿಕಾರಿ ಎಸಿಪಿ ಚಂದನ್ ಸರ್ ಅವರ ತಂಡಕ್ಕೆ ವಿನಯ್ ಧನ್ಯವಾದವನ್ನೂ ಹೇಳಿದ್ದಾರೆ.
ನಮ್ಮಿಂದ ಗೊತ್ತಿಲ್ಲದೆ ಆಗಿರುವ ತಪ್ಪಿಗೆ ತಿದ್ದಿ ಬುದ್ಧಿ ಹೇಳಿದ್ದೀರಾ. ಇನ್ನೊಂದು ಸಲ ಈ ಥರ ತಪ್ಪು ನಾನೆಂದೂ ಮಾಡಲ್ಲ. ಸಾಮಾನ್ಯರೊಂದಿಗೆ ಪೊಲೀಸರು ಹೇಗೆ ನಡೆದುಕೊಳ್ತಾರೋ, ಹಾಗೆ ನಮ್ಮೊಂದಿಗೂ ನಡೆದುಕೊಳ್ತಾರೆ. ಎಲ್ಲೂ ನಮ್ಮೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ ಎಂದಿದ್ದಾರೆ. ಮತ್ತೊಮ್ಮೆ ಅಭಿಮಾನಿಗಳಿಗೆ ನಟ ಕ್ಷಮೆಯಾಚಿಸುತ್ತೇನೆ. ರೀಲ್ಸ್ ಮಾಡುವಾಗ ನಾನು ಫೈಬರ್ ಮಚ್ಚು ಬಳಿಸಿದ್ದೆ, ಆ ಪ್ರಾಪರ್ಟಿ ನನ್ನದಲ್ಲ. ಅದು ರಜತ್ ಅವರದಾಗಿತ್ತು. ನನಗೆ ಕೊಟ್ಟಿದ್ದು ಪುಷ್ಪರಾಜ್ ಕ್ಯಾರೆಕ್ಟರ್, ಅದಕ್ಕೆ ನಾನು ಬೀಡಾ ಬಳಸಿ ರೀಲ್ಸ್ ಮಾಡಿದ್ದೆ ಎಂದು ತಿಳಿಸಿದ್ದಾರೆ.
ಒಂದಂತೂ ನಿಜ. ವೀವ್ಸ್ ಗೆ ಶೋಕಿಗೆ ಈ ರೀತಿ ಮಚ್ಚು, ಲಾಂಗು ಗನ್ನು ಹಿಡಿದು ರೀಲ್ಸ್ ಮಾಡೋರಿಗೆ ಇದೊಂದು ಪಾಠ. ಹಾಗೇನಾದರೂ ಮರೆತು ಮಾಡೋಕೆ ಹೊರಟ್ರೆ ಶಸ್ತ್ರಾಸ್ತ್ರ ಕಾಯ್ದೆಯಡಿ ಅರೆಸ್ಟ್ ಆಗಬೇಕಾಗುತ್ತೆ. ಸದ್ಯ ಇಬ್ಬರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇನ್ಮುಂದೆಯಾದರೂ, ಹುಚ್ಚು ಶೋಕಿಗಾಗಿ ಈ ರೀತಿ ರೀಲ್ಸ್ ಮಾಡೋದನ್ನು ಬಿಟ್ಟು, ತಮ್ಮನ್ನು ಫಾಲೋ ಮಾಡುವ ಫ್ಯಾನ್ಸ್ ಗೆ ಒಳ್ಳೇ ಸಂದೇಶ ಕೊಡಲು ಮುಂದಾಗಿ, ಮತ್ತೇನಾದರೂ ಯಾಮಾರಿ ಈ ರೀತಿಯ ಹುಚ್ಚಾಟ ನಡೆಸಿದರೆ, ಖಂಡಿತವಾಗಿ ತಮ್ಮ ಫ್ಯಾನ್ಸ್ ಗಳೇ ಕ್ಷಮಿಸೋದಿಲ್ಲ.