Bengaluru: ನನಗೆ ಬಂದ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರೋದು ಬೇಡ. ಸಿದ್ದರಾಮಯ್ಯ ಮತ್ತು ಡಿಕೆಶಿ ಇವರು ಆ ಸ್ಥಾನದಲ್ಲಿ ಕೂರಲು ಯೋಗ್ಯತೆ ಇಲ್ಲ. ಆಂಬುಲೆನ್ಸ್ ಇಲ್ಲದೆ ನನ್ನ ಮಗ ಒದ್ದಾಡಿ ಒದ್ದಾಡಿ ಸತ್ತಿದ್ದಾನೆ. ಅವನ ಸ್ನೇಹಿತ ಅಲ್ಲಿದ್ದವರ ಕೈ ಕಾಲು ಹಿಡಿದು ಹೇಗೋ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅದೇ ಅಂಬುಲೆನ್ಸ್ ಇದ್ದಿದ್ದರೆ ಮಗ ಖಂಡಿತಾ ಉಳಿಯುತ್ತಿದ್ದ. ಅವರ ಮಕ್ಕಳಿಗೆ ಹೀಗೆ ಆಗಿದ್ದರೆ ಅವರು ಫೋಟೊ ತೆಗೆಸಿಕೊಳ್ಳುತ್ತಿದ್ದರೇ? ಕಪ್ ಹಿಡಿದು ಎಂಜಾಯ್ ಮಾಡುತ್ತಿದ್ದರೇ? ಇದು ನನ್ನೊಬ್ಬನ ಕಣ್ಣೀರಲ್ಲ. ಇದು 11 ಜನ ಕುಟುಂಬ ಸದಸ್ಯರ ಕಣ್ಣೀರು. ಯಾರಿಗೂ ಈ ಸ್ಥಿತಿ ಬರೋದು ಬೇಡ. ಅವರ ತಪ್ಪು ಮುಚ್ಚಿಕೊಳ್ಳಲು ಪೊಲೀಸರ ಅಮಾನತು ಮಾಡಿದ್ದಾರೆ ಎಂಬೆಲ್ಲ ಕರುಳು ಕಿತ್ತುಬರುವಂತೆ ಭಾವನಾತ್ಮಕವಾಗಿ ಗೋಳಾಡುತ್ತಿರುವ ಈ ಆಕ್ರೋಶದ, ಆಕ್ರಂದನದ ನುಡಿಗಳು ಮಗನನ್ನು ಕಳೆದುಕೊಂಡ ತಂದೆಯದ್ದು ಎನ್ನುವುದು ನಿಜಕ್ಕೂ ಹೃದಯ ಒಡೆಯುವಂತೆ ಮಾಡುತ್ತದೆ.
ಮಗನನ್ನು ಕುಟುಂಬದಲ್ಲಿ ಇನ್ನೂ ಆರದ ದುಃಖ..
ತನ್ನ ಕಣ್ಣೇದುರೇ ಆಟವಾಡಿ ಬೆಳೆದಿದ್ದ ಮಗ ಕಾಲೇಜಿಗೆಂದು ಹೋದವ ವಾಪಸ್ ಹೆಣವಾಗಿ ಬಂದದ್ದು, ಯಾವ ತಂದೆ- ತಾಯಿಗೂ ಸಹ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟಕ್ಕೂ ಕಳೆದ ಜೂನ್ 4ರಂದು ಆರ್ಸಿಬಿ ವಿಜಯೋತ್ಸವಕ್ಕೂ ಮುನ್ನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ ದುರಂತ ಅಂತ್ಯ ಕಂಡ ಹಾಸನದ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಆರ್ಸಿಬಿ ಅಭಿಮಾನಿ ಭೂಮಿಕ್ ಕುಟುಂಬದಲ್ಲಿ ದುಃಖ ಇನ್ನೂ ಆರಿಲ್ಲ.
ಇವರೇ ದೊಡ್ಡ ಟೆರರಿಸ್ಟ್ಗಳು, ಸರ್ಕಾರ 11 ಜನರ ಕೊಲೆ ಮಾಡಿದೆ..
ಇಂದು ತಮ್ಮ ಮಗನ ಸಮಾಧಿ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಗೋಳಾಡುತ್ತಿದ್ದ ಲಕ್ಷ್ಮಣ್ ಅವರು ಘಟನೆಗೆ ಕಾರಣವಾಗಿರುವ ರಾಜ್ಯ ಸರ್ಕಾರದ ಬೇಜವಾಬ್ದಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗನಿಗೆ ಕ್ರಿಕೆಟ್ ಹುಚ್ಚಿರಲಿಲ್ಲ, ಕ್ರಿಕೆಟ್ ಆಡುತ್ತಿದ್ದ ಅಷ್ಟೇ. ನನ್ನ ಹೆಂಡತಿ ಪರಿಸ್ಥಿತಿ ಏನು, ನನ್ನ ಅಣ್ಣನ ಪರಿಸ್ಥಿತಿ ಏನು. ಸರ್ಕಾರ 11 ಜನರನ್ನ ಕೊಲೆ ಮಾಡಿದೆ. ಇವರೇ ದೊಡ್ಡ ಟೆರರಿಸ್ಟ್ ಗಳಾಗಿದ್ದಾರೆ. ಇಷ್ಟು ಅನಾಹುತ ಆದ ಮೇಲೂ ನಮ್ಮಂತವರ ಮಕ್ಕಳು ಬೀದಿಯಲ್ಲಿ ಸಾಯುತ್ತಿದ್ದರೆ, ಇವರು ಫೋಟೊ ತೆಗೆಸಿಕೊಳ್ತಾರಲ್ಲ ಅಂದರೆ ಇದು ಎಷ್ಟು ನ್ಯಾಯ? ಎಂದು ಸಿಎಂ ಹಾಗೂ ಡಿಸಿಎಂ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಈ ಥರ ಪರಿಸ್ಥಿತಿ ಬೇರೆ ಯಾವ ತಂದೆ ತಾಯಿಗೂ ಬರಬಾರದು..!
ಇವರು ಎಂಜಾಯ್ ಮಾಡ್ತಾರೆ. ಅವರ ಮಕ್ಕಳು ಮೊಮ್ಮಕ್ಕಳಿಗಾಗಿ ಕಾರ್ಯಕ್ರಮ ಮಾಡುತ್ತಿದ್ದರು. ಆದರೆ, ನಾವು ಹೇಗೆ ಸಮಾಧಾನ ಮಾಡಿಕೊಳ್ಳೋದು ಹೇಳಿ ಎಂದು ಅವರು ಮಗನ ನೆನೆದು ಕಣ್ಣೀರು ಸುರಿಸಿದ್ದಾರೆ. ಈ ಥರ ಪರಿಸ್ಥಿತಿ ಬೇರೆ ಯಾವ ತಂದೆ ತಾಯಿಗೂ ಬರಬಾರದು… ನನ್ನ ಮಗನನ್ನ ಇಲ್ಲೇ ಮಲಗಿಸಿದ್ದೀನಿ… ನನ್ನ ಮಗನ ಜೊತೆ ಮಲಗ್ತೀನಿ… ನನ್ನ ಮಗನ ಜೊತೆ ಮಲಗ್ತೀನಿ… ನನ್ನ ಮಗ ಇನ್ನೂ ಮಲಗಿದ್ದಾನೆ… ಯಾರ್ಯಾರ್ ಬ್ಯಾಡ್ ಕಾಮೆಂಟ್ ಮಾಡ್ತೀರಾ ಒಬ್ಬ ತಂದೆಯ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ ಎಂದು ಮಗನ ಸಮಾಧಿ ತಬ್ಬಿಕೊಂಡು ಕಣ್ಣೀರು ಸುರಿಸುವ ದೃಶ್ಯ ಎಂತವರ ಕಣ್ಣುಗಳನ್ನೂ ಒದ್ದೆಯಾಗುವಂತೆ ಮಾಡುತ್ತಿತ್ತು.
ಏಕೈಕ ಪುತ್ರ, ಲಕ್ಷ್ಮಣ್ – ಅಶ್ವಿನಿ ದಂಪತಿಯ ಮುದ್ದಿನ ಮಗ..
ಇನ್ನೂ ಮೃತ ಭೂಮಿಕ್ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿಯಾಗಿದ್ದ. ಕುಪ್ಪಗೋಡು ಗ್ರಾಮದ ಡಿ.ಟಿ. ಲಕ್ಷ್ಮಣ್ ಹಾಗೂ ಅಶ್ವಿನಿ ದಂಪತಿಯ ಏಕೈಕ ಮಗನಾಗಿದ್ದ. ಬೆಂಗಳೂರಿನಲ್ಲಿ ನೆಲೆಸಿರುವ ಭೂಮಿಕ್ ಕುಟುಂಬವೂ ಮಗನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿತ್ತು. ಅಲ್ಲದೆ ಜೂನ್ 4ರಂದು ಯಥಾವತ್ತಾಗಿ ಕಾಲೇಜಿಗೆ ಹೋಗಿದ್ದ ಭೂಮಿಕ್ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ಸ್ನೇಹಿತರೊಂದಿಗೆ ತೆರಳಿದ್ದ, ಆದರೆ ಅಲ್ಲಿ ಸಂಭವಿಸಿದ್ದ ಭೀಕರ ಕಾಲ್ತುಳಿತ ದುರಂತದಲ್ಲಿ ಸಿಲುಕಿ ದಾರುಣವಾಗಿ ಉಸಿರು ಚೆಲ್ಲಿದ್ದ.
ಪುತ್ರ ಶೋಕಂ ನಿರಂತಂ..
ಹೀಗೆ ಈ ದುರ್ಘಟನೆಯಲ್ಲಿ 11 ಯುವ ಜೀವಗಳು ಪ್ರಾಣ ಕಳೆದುಕೊಂಡಿವೆ. ಹೀಗಾಗಿ ಘಟನೆ ನಡೆದು ಇಂದು ನಾಲ್ಕು ದಿನವಾಗಿದ್ದು, ಭೂಮಿಕ್ ತಂದೆಗೆ ಮಗನ ಸಾವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಶಪಿಸುತ್ತಾ, ಮಗನನ್ನು ಮರೆಯದೆ ದಿನಗಳನ್ನು ಕಳೆಯುವಂತಾಗಿದ್ದು, ಪುತ್ರ ಶೋಕಂ ನಿರಂತರಂ ಎನ್ನುವಂತೆ ತಂದೆ ಲಕ್ಷ್ಮಣ್ ಮಗ ಭೂಮಿಕ್ ನೆನಪಿನಲ್ಲಿಯೇ ಬದುಕು ದೂಡುವಂತಾಗಿದ್ದು ಮಾತ್ರ ನಿಜಕ್ಕೂ ವಿಪರ್ಯಾಸವೇ ಸರಿ..!