Monday, May 12, 2025

Latest Posts

ಸಿದ್ದು, ಡಿಕೆ ಒಂದಾಗಿರಿ, ಇಲ್ಲಾಂದ್ರೆ ಮೋದಿ, ಶಾ ಸರ್ಕಾರ ಬೀಳಿಸ್ತಾರೆ : ಬಿರುಗಾಳಿ ಎಬ್ಬಿಸಿದ ಖರ್ಗೆ ಹೇಳಿಕೆ

- Advertisement -

Political News: ರಾಜ್ಯದಲ್ಲಿನ ನಿಮ್ಮ ಸರ್ಕಾರವನ್ನು ಬೀಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಟೀಂ ಮುಂದಾಗಿದೆ. ನಿಮ್ಮಲ್ಲಿನ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಾಗಿರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ರಾಜ್ಯದಲ್ಲಿನ ನಿಮ್ಮ ಸರ್ಕಾರವನ್ನು ಬೀಳಿಸಲು ಮಾಡಿರುವ ಬಿಜೆಪಿಯ ಈ ಕುತಂತ್ರವನ್ನು ಇಬ್ಬರೂ ಒಟ್ಟಾಗಿ ಎದುರಿಸಿ. ಅದನ್ನು ಬಿಟ್ಟು ನೀವೇ ಕಿತ್ತಾಡಿಕೊಳ್ಳುತ್ತಿದ್ದರೆ ಮೋದಿ ಹಾಗೂ ಅಮಿತ್‌ ಶಾ ನಿಮ್ಮ ಸರ್ಕಾರವನ್ನು ಮುಗಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಇಬ್ಬರ ಕಡೆಗೆ ಕೈ ಸನ್ನೆ ಮಾಡಿ ಖರ್ಗೆ, ಸಮಾಜ ಹಾಗೂ ಧರ್ಮಗಳನ್ನು ಒಡೆಯುವ ಕುತಂತ್ರವನ್ನು ಬಿಜೆಪಿ ಮಾಡುತ್ತಲೇ ಬಂದಿದೆ ಎಂದು ಕಿಡಿ ಕಾರಿದ್ದಾರೆ.

ನಮ್ಮ ಸರ್ಕಾರ ಮೋದಿ, ಶಾ ಟೀಂನ ಕಣ್ಣು ಕುಕ್ಕುತ್ತಿದೆ..

ಅಲ್ಲದೆ ನೀವು ಒಂದಾಗಿ ಇರದಿದ್ದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಪತನಕ್ಕೆ ಮೋದಿ ಹಾಗೂ ಅಮಿತ್‌ ಶಾ ತಂತ್ರ ರೂಪಿಸಬಹುದು. ಅದಕ್ಕಾಗಿಯೇ ನಾವೆಲ್ಲರೂ ಆ ಜೋಡಿಯ ಯಾವುದೇ ಕುತಂತ್ರಗಳಿಗೆ ಹೆದರದೆ ಬಿಜೆಪಿಯವರನ್ನು ಒದ್ದು ಓಡಿಸಬೇಕಿದೆ. ಈಗ ರಾಜ್ಯ ಸರ್ಕಾರವು ಮೋದಿ, ಶಾ ಟೀಂನ ಕಣ್ಣು ಕುಕ್ಕುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಾಜ್ಯದ ಜನರು ನಿಮಗೆ ಅಧಿಕಾರ ನೀಡಿದ್ದಾರೆ, ಅದರೆ ನಿಮ್ಮಲ್ಲಿ ಯಾವುದೇ ಭೇದ ಭಾವ ಇದ್ದರೂ ಸಹ ಒಂದಾಗಿ ಜಾಗೃತರಾಗಿ ಇರಬೇಕು. ಇಲ್ಲದಿದ್ದರೆ ಮೋದಿ ಹಾಗೂ ಶಾ ನಿಮ್ಮ ಮೇಲೆ ದಾಳಿ ಮಾಡ್ತಾರೆ, ನಿಮ್ಮನ್ನು ಹೆದರಿಸುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ನೀವು ಅಂಬೇಡ್ಕರ್‌ ಹೆಸರು ಹೇಳೋಕೆ ಇಷ್ಟ ಪಡುತ್ತಿರಲಿಲ್ಲ..!

ಇನ್ನೂ ಈ ಕುತಂತ್ರಿ ಬಿಜೆಪಿಯಿಂದ ರಾಜ್ಯದ ಜನರನ್ನು ರಕ್ಷಣೆ ಮಾಡುವುದು ರಾಜ್ಯ ಕಾಂಗ್ರೆಸ್‌ ಸರ್ಕಾರದ ಜವಾಬ್ದಾರಿಯಾಗಿದೆ. ಅದರಲ್ಲೂ ಈ ರಾಜ್ಯದ ಕಾಂಗ್ರೆಸ್‌ ನಾಯಕರ ಮೇಲಿದೆ ಎಂದು ಕಿವಿ ಮಾತು ಹೇಳಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿ, ನಿಮಗಂತೂ ಒಳ್ಳೆಯ ಕೆಲಸ ಮಾಡಲು ಬರಲ್ಲ. ಮಾಡುವವರಿಗಾದರೂ ಬಿಡ್ರಪ್ಪ. ಏಪ್ರಿಲ್​ 14ರಂದು ಹರಿಯಾಣದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತ, ಕಾಂಗ್ರೆಸ್​ ಬಾಬಾ ಸಾಹೇಬರಿಗೆ ಅಪಮಾನ ಮಾಡಿದೆ, ಕಾಂಗ್ರೆಸ್​​ ಯಾವಾಗಲೂ ಅವರಿಗೆ ಅಪಮಾನ ಮಾಡುತ್ತಲೇ ಇದೆ ಎಂದು ಹೇಳಿದ್ದಾರೆ. ಆದರೆ ನೀವು ಅವರ ಹೆಸರನ್ನೂ ತೆಗೆದುಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಆದರೆ ನಾವು ಸಂವಿಧಾನ ರಚನೆಗೆ ಅಂಬೇಡ್ಕರ್​ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ಆ ಸಂವಿಧಾನವನ್ನು ತೆಗೆದುಹಾಕುವ ಕೆಲಸವನ್ನು ನೀವು ಮಾಡುತ್ತಿರುವಿರಿ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಸರ್ಕಾರವನ್ನು ಒದ್ದು ಓಡಿಸುತ್ತೇವೆ..

ನಾವು ಯಾವುದಕ್ಕೂ ಹೆದರಲ್ಲ, ಇಲ್ಲಿಯವರೆಗೂ ಹೆದರಿಲ್ಲ, ಇನ್ನು ಮುಂದೆಯೂ ಬೆದರುವ ಮಾತೇ ಇಲ್ಲ. ಇ.ಡಿ, ಐಟಿ, ಸಿಬಿಐನಂತಹ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸೋನಿಯಾ ಗಾಂಧಿ, ರಾಹುಲ್​ ಗಾಂಧಿ ಇದಕ್ಕೆಲ್ಲ ಹೆದರುವುದಿಲ್ಲ. ಅವರ ಕುಟುಂಬದಲ್ಲಿ ಇಬ್ಬರು ನಾಯಕರು ದೇಶಕ್ಕಾಗಿ ಪ್ರಾಣ ಕೊಟ್ಟಿದ್ಧಾರೆ. ಆದರೂ ಇಂದು ಅವರು ಜನರ ಜೊತೆಗಿದ್ದಾರೆ. ನೀವೇನು ಮಾಡಿದ್ದೀರಿ? ಕಾಂಗ್ರೆಸ್​ ಸರ್ಕಾರಗಳನ್ನು ಕೆಡವಿ, ಅಧಿಕಾರ ಪಡೆಯುವ ಪ್ರಯತ್ನ ಮಾಡುತ್ತಿದ್ಧೀರಿ. ಇದಕ್ಕೆಲ್ಲ ಕಾಂಗ್ರೆಸ್​ ಬಗ್ಗುವುದಿಲ್ಲ. ನಾವು ಯಾವುದಕ್ಕೂ ಹೆದರುವುದಿಲ್ಲ, ದೇಶ ಕಟ್ಟುತ್ತೇವೆ. ನಿಮ್ಮ ಬಿಜೆಪಿ ಸರ್ಕಾರವನ್ನು ಒದ್ದು ಓಡಿಸುತ್ತೇವೆ ಎಂದು ಖರ್ಗೆ ಗುಡುಗಿದ್ದಾರೆ. ಇನ್ನೂ ನಾವಿಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈ ಹಿಂದೆಯೂ ಇದೇ ರೀತಿಯಾಗಿ ಎಚ್ಚರಿಕೆಯನ್ನು ನೀಡಿದ್ದ ಖರ್ಗೆ ಈ ಬಾರಿಯೂ ಕಲಬುರಗಿಯಲ್ಲಿಯೇ ಈ ಮಾತನ್ನು ಹೇಳಿರೋದು ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಅಲ್ಲದೆ ಖರ್ಗೆ ಅವರ ಈ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಲು ಕಾರಣವಾಗಿದೆ. ಅವರ ಈ ಮಾತಿನಂತೆಯೇ ಬಿಜೆಪಿಯ ನಾಯಕರು ರಾಜ್ಯದಲ್ಲಿನ ಕಾಂಗ್ರೆಸ್‌ ಉರುಳಿಸಲು ತಂತ್ರಗ್ರಾರಿಕೆಗಳನ್ನು ರೂಪಿಸಿದ್ದಾರಾ..? ಎಂಬೆಲ್ಲ ಪ್ರಶ್ನೆಗಳಿಗೆ ಎಐಸಿಸಿ ಅಧ್ಯಕ್ಷರ ಮಾತು ಪುಷ್ಠಿ ನೀಡುತ್ತಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

- Advertisement -

Latest Posts

Don't Miss