ಜಾತಿಯಲ್ಲಿ ಬ್ರಾಹ್ಮಣನಾದರೂ, ರಾಕ್ಷನಾಗಿದ್ದ ರಾವಣ. ಶ್ಲೋಕಗಳನ್ನು ರಚಿಸುವ, ಹಲವು ವಿದ್ಯಾಪಾರಂಗತನಾಗಿದ್ದ ರಾವಣ, ಪರಮ ಪತಿವೃತೆ ಸೀತೆಯನ್ನು ಪಡೆಯುವ ದುರಾಸೆಯಿಂದ ತನ್ನ ಪ್ರಾಣ ಕಳೆದುಕೊಳ್ಳಬೇಕಾಯಿತು. ಇದೇ ರಾವಣ ಹಲವು ವರ್ಷಗಳವರೆಗೆ ಒಬ್ಬರನ್ನು ತನ್ನ ಕಾಲ ಕೆಳಗೆ ಇಟ್ಟುಕೊಂಡಿದ್ದನಂತೆ. ಹಾಗಾದ್ರೆ ಯಾರವರು..? ಯಾಕೆ ರಾವಣ ಹೀಗೆ ಮಾಡಿದ್ದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ರಾವಣನಿಗೆ ಬರೀ ವೇದ, ವಿದ್ಯೆಗಳಷ್ಟೇ ಅಲ್ಲ, ಜ್ಯೋತಿಷ್ಯದಲ್ಲೂ ಕೂಡ ರಾವಣ ಪರಿಣಿತಿ ಪಡೆದಿದ್ದ. ಅದು ಎಷ್ಟರ ಮಟ್ಟಿಗೆ ಅಂದರೆ, 9 ಗ್ರಹಗಳನ್ನು ಕೂಡಿಟ್ಟು, ತನಗೆ ಮನಸ್ಸಿಗೆ ಬಂದ ಹಾಗೆ ತನ್ನ ಜಾತಕ ತಿದ್ದಿಕೊಳ್ಳುವಷ್ಟು. ಆದರೆ ಅವನೆಷ್ಟೇ ಪ್ರಯತ್ನ ಪಟ್ಟರೂ ಅವನ ಜಾತಕದಲ್ಲಿ ಅವನಿಗೆ ಒಳಿತಾಗುವುದಿಲ್ಲವೆಂದೇ ತೋರಿಸುತ್ತಿತ್ತು. ಇದಕ್ಕೆ ಕಾರಣ ಶನಿಯಾಗಿದ್ದ.
ಶನಿ ಯಾರದ್ದಾದರೂ ಹೆಗಲೇರಿದರೆ, ಅವನ ಕಥೆ ಮುಗೀತು ಬಿಡು ಅಂತಾ ಹೇಳೋದನ್ನ ನೀವು ಕೇಳಿದ್ದೀರಿ. ಯಾಕಂದ್ರೆ ಶನಿ ಹೆಗಲೇರಿದರೆ, ಆ ಮನುಷ್ಯನಿಗೆ ನೆಮ್ಮದಿ ಅನ್ನೋದು ಇರೋದೇ ಇಲ್ಲ. ಹಾಗಾಗಿ ರಾವಣನ ಜಾತಕ ಉತ್ತಮವಾಗಲೇ ಇಲ್ಲ. ಹಾಗಾಗಿ ರಾವಣ ಹಲವು ವರ್ಷಗಳ ಕಾಲ ಶನಿಯನ್ನ ತನ್ನ ಕಾಲ ಕೆಳಗೆ ಇರಿಸಿದ್ದ ಎನ್ನಲಾಗಿದೆ.
ಇನ್ನು ಶನಿಯನ್ನು ಇದರಿಂದ ಮುಕ್ತಿಗೊಳಿಸಲು ನಾರದರು ತಮ್ಮ ಬಣ್ಣ ಬಣ್ಣದ ಮಾತುಗಳಿಂದ ರಾವಣನ ಮನವೊಲಿಸಿದರು. ಆದರೆ ರಾವಣ ತನ್ನ ಕಾಲ ಕೆಳಗಿನಿಂದ ಶನಿಗೆ ಮುಕ್ತಿ ಕೊಟ್ಟ ವಿನಃ, ತನ್ನ ಆಸ್ಥಾನದಿಂದಲ್ಲ. ಶನಿಯನ್ನು ಕೂಡಿಡಲಾಯಿತು. ಶನಿ ಎಲ್ಲಿಯೂ ಓಡಿ ಹೋಗದಂತೆ, ಅವನಿರುವ ಕೋಣೆಯ ಬಾಗಿಲ ಮುಂದೆ ಭಾರವಾದ ಶಿವಲಿಂಗ ಇಡಲಾಯಿತು. ಹನುಮ ಸೀತೆಯನ್ನು ಹುಡುಕಿಕೊಂಡು ಅಶೋಕ ವನಕ್ಕೆ ಬಂದಾಗ, ಶನಿಯ ಕೂಗು ಕೇಳಿ, ಶನಿಯನ್ನ ರಾವಣನಿಂದ ಹನುಮನೇ ಮುಕ್ತಿ ಗೊಳಿಸಿದ.