Andhra Pradesh: ದೇಶದ ಖ್ಯಾತ ದೇವಸ್ಥಾನವಾಗಿರುವ ತಿರುಮಲ ತಿರುಪತಿಯಲ್ಲಿ ಹಿಂದೂಗಳಷ್ಟೇ ಕೆಲಸ ಮಾಡಬೇಕು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಒಂದು ವೇಳೆ ಇಲ್ಲಿ ಕ್ರೈಸ್ತರು, ಅನ್ಯ ಧರ್ಮದ ಜನ ಕೆಲಸ ಮಾಡುತ್ತಿದ್ದರೆ, ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಗೌರವಯುತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಇನ್ನೂ ತಮ್ಮ ಮೊಮ್ಮಗ ದೇವಾಂಶ್ ಜನ್ಮದಿನದ ನಿಮಿತ್ತ ಕುಟುಂಬದ ಸಮೇತ ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳ ಜೊತೆಗೆ ಸಭೆಯನ್ನು ಅವರು ನಡೆಸಿದ್ದಾರೆ.
ಇದಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು. ದೇಶದ ಹಲವೆಡೆ ಹಾಗೂ ವಿದೇಶಗಳಲ್ಲಿಯೂ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಬೇಡಿಕೆಯಿಡುತ್ತಿದ್ದಾರೆ. ಹೀಗಾಗಿ ದೇಶದ ಎಲ್ಲ ರಾಜ್ಯಗಳ ಮುಖ್ಯ ನಗರಗಳಲ್ಲಿ ಅದರಲ್ಲೂ ಹಿಂದುಗಳು ಜಾಸ್ತಿಯಾಗಿರುವ ಕಡೆಗಳಲೆಲ್ಲ ತಿರುಪತಿ ತಿಮ್ಮಪ್ಪನ ದೇವಾಲಯ ನಿರ್ಮಿಸುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಈ ದೇವಾಲಯಗಳ ನಿರ್ಮಾಣಕ್ಕೆ ಸಹಕರಿಸುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡುವುದಾಗಿ ನಾಯ್ಡು ತಿಳಿಸಿದ್ದಾರೆ. ಅಲ್ಲದೆ ತಿರುಪತಿ ದೇವಾಲಯದಲ್ಲಿ ಹಿಂದೂಗಳನ್ನು ಮಾತ್ರ ಕೆಲಸಕ್ಕೆ ನೇಮಿಸಿಕೊಂಡು ಸೆವೆನ್ ಹಿಲ್ಸ್ ಹತ್ತಿರ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನೂ ರಾಜ್ಯದಲ್ಲಿ ವೆಂಕಟೇಶ್ವರ ಸ್ವಾಮಿಗೆ ಸಂಬಂಧಿಸಿದ ಎಲ್ಲ ಅಕ್ರಮ ಆಸ್ತಿಗಳನ್ನು ವಾಪಸ್ ಪಡೆಯಲು ನಾವು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಅಲ್ಲದೆ ಆಂಧ್ರಪ್ರದೇಶದ ವಿವಿಧೆಡೆ ವೆಂಕಟೇಶ್ವರ ದೇವಾಲಯಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಇದೇ ಕಾರ್ಯಕ್ಕಾಗಿ ನಾವು ನೂತನ ಟ್ರಸ್ಟ್ ರಚಿಸಿದ್ದೇವೆ ಎಂದು ನಾಯ್ಡು ಮಾಹಿತಿ ನೀಡಿದ್ದಾರೆ. ತಿರುಮಲದ ಆಧ್ಯಾತ್ಮಿಕ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ ಜಗತ್ತಿನ ಹಲವೆಡೆಯ ಭಕ್ತರಿಗೆ ದೇವಾಲಯದ ಮೂಲಸೌಕರ್ಯವನ್ನು ವಿಸ್ತರಿಸುವಲ್ಲಿ ನಮ್ಮ ಸರ್ಕಾರ ಬದ್ಧತೆಯನ್ನು ಮೆರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಮ್ತಾಜ್ ಹೋಟೆಲ್ಗೆ ಬ್ರೇಕ್..
ಅಲ್ಲದೆ ಈ ಹಿಂದೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಷ್ತಾಕ್ ಗ್ರೂಪ್ ಮತ್ತು ಒಬೆರಾಯ್ ಗ್ರೂಪ್ ನಡುವಿನ ಜಂಟಿ ಯೋಜನೆಯಾಗಿದ್ದ ಮುಮ್ತಾಜ್ ಹೊಟೇಲ್ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ನೀಡಲಾಗಿದ್ದ ದೇವಲೋಕಂ ಯೋಜನೆಗಳಿಗೆ 35 ಎಕರೆ ಜಮೀನು ನೀಡಿರುವುದನ್ನು ನಾವು ವಾಪಸ್ ಪಡೆಯುತ್ತೇವೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಜಗನ್ ಕನಸಿನ ಯೋಜನೆಗೆ ನಾಯ್ಡು ಬ್ರೇಕ್ ಹಾಕಿದ್ದಾರೆ. ಇನ್ನೂ ಈ ಮುಮ್ತಾಜ್ ರೆಸಾರ್ಟ್ ಯೋಜನೆಗೆ ಆರಂಭದಲ್ಲಿ ಈ ಹಿಂದಿನ ವೈಎಸ್ಆರ್ಸಿಪಿ ಸರ್ಕಾರವು ಸ್ಥಳೀಯ ಪ್ರವಾಸೋದ್ಯಮ ನೀತಿ 2020-25ರ ಅಡಿಯಲ್ಲಿ ಅನುಮೋದನೆ ನೀಡಿತ್ತು. ಅಲ್ಲದೆ ಚಂದ್ರಬಾಬು ನಾಯ್ಡು ಅವರು ತೀರ್ಮಾನವನ್ನು ಕೈಗೊಂಡಿರುವ ಈ ಹಿಂದೂ ಸಿಬ್ಬಂದಿಗಳ ನೇಮಕದ ವಿಚಾರಕ್ಕೆ ಈ ಮೊದಲೇ ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡುಅವರು ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕೆಲಸ ಮಾಡುವವರೆಲ್ಲರೂ ಹಿಂದೂಗಳಾಗಿರಬೇಕು ಎಂದು ಹೇಳಿರುವುದನ್ನು ನಾವಿಲ್ಲಿ ಸ್ಮರಿಸಬಹುದು.