Hubli News: ಹುಬ್ಬಳ್ಳಿ: ವೈಕುಂಠ ಏಕಾದಶಿ ಆಚರಣೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಜೋರಾಗಿದೆ. ಹುಬ್ಬಳ್ಳಿಯ ನೃಪತುಂಗ ಬೆಟ್ಟದ ಬಳಿಯಲ್ಲಿರುವ ಕಾಶಿಮಠ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ರೀತಿಯಲ್ಲಿ ಅಲಂಕಾರ ಮಾಡುವ ಮೂಲಕ ವೆಂಕಟೇಶ್ವರನಿಗೆ ಪೂಜೆ ಸಲ್ಲಿಸಲಾಯಿತು.
ವೈಕುಂಠ ಏಕಾದಶಿಯನ್ನು ದೇಶಾದ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಉಪವಾಸ ಮಾಡುವುದರ ಜೊತೆಗೆ ದೇವರ ಆರಾಧನೆಯೊಂದಿಗೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಕಾಶಿಮಠದ ವೆಂಕಟೇಶ್ವರ ಮಂದಿರ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಕಬ್ಬಿನ ಗಿಡಗಳ ಮೂಲಕ ಭವ್ಯ ಸ್ವಾಗತ ಮಂಟಪ ಮಾಡಿದ್ದು, ಹೂವಿನಿಂದ ದೇವಸ್ಥಾನದ ಬಾಗಿಲಿಗೆ ವಿಶೇಷ ಸಾಂಪ್ರದಾಯಿಕ ರೀತಿಯಲ್ಲಿ ಅಲಂಕಾರ ಮಾಡಿದ್ದು, ಎಲ್ಲರ ಕಣ್ಮನ ಸೆಳೆಯಿತು. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನೂರಾರು ಜನ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ವೈಕುಂಠ ಏಕಾದಶಿ ನಿಮಿತ್ತವಾಗಿ ಹಲವಾರು ಪೂಜೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಕ್ತರು ದರ್ಶನ ಪಡೆದು ಪುನೀತರಾದರು.
ಇನ್ನೂ ಭಕ್ತರಿಗೆ ವಿಶೇಷ ಪ್ರಸಾದ್ ವ್ಯವಸ್ಥೆಯನ್ನು ಮಾಡಲಾಗಿದ್ದು, ನೃಪತುಂಗ ಬೆಟ್ಟದ ಪಕ್ಕದಲ್ಲಿರುವ ದೇಗುಲ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಂತೂ ಸತ್ಯ.




