Thursday, May 1, 2025

Latest Posts

ಮೀಸಲು ನೀಡಿ ಬಾಬಾಗೆ ಗೌರವಿಸಿದ್ದೇವೆ : ಇದು ಕ್ರಾಂತಿಕಾರಿ ಹೆಜ್ಜೆ: ರೇವಂತ್‌ ರೆಡ್ಡಿ

- Advertisement -

Political News: ಎಸ್‌ಸಿ ಸಮುದಾಯದಲ್ಲಿನ ಹಲವು ವರ್ಷಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿಯ ಜಾರಿ ವಿಚಾರದಲ್ಲಿ ತೆಲಂಗಾಣ ಕಾಂಗ್ರೆಸ್‌ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದ್ದು, ಈ ಮೂಲಕ ದೇಶದಲ್ಲಿಯೇ ಒಳ ಮೀಸಲಾತಿ ನೀಡಿರುವ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ. ಕರ್ನಾಟಕದಲ್ಲಿ ಒಳ ಮೀಸಲಾತಿಯ ಜಟಾಪಟಿ ಹಾಗೂ ಪರ ವಿರೋಧಗಳು ಮುಂದುವರೆದ ಈ ಹೊತ್ತಿನಲ್ಲಿಯೇ ಅದರಲ್ಲೂ ನೆರೆಯ ತೆಲಂಗಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ. ಆರ್‌ ಅಂಬೇಡ್ಕರ್‌ ಅವರ ಜನ್ಮದಿನದಂದೇ ಈ ಕುರಿತ ಅಧಿಸೂಚನೆ ಹೊರಡಿಸಿರುವುದು ಗಮನಾರ್ಹವಾಗಿದೆ.

ಇನ್ನೂ ಇದೇ ವಿಚಾರಕ್ಕೆ ತಮ್ಮ ಸರ್ಕಾರದ ಈ ಗಟ್ಟಿ ನಿರ್ಧಾರದ ಕುರಿತು ಖುದ್ದು ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ. ಅಲ್ಲದೆ ಭಾರತದಲ್ಲಿ ಎಸ್‌ಸಿ ಒಳಮೀಸಲಾತಿ ಜಾರಿಯ ಕ್ರಾಂತಿಕಾರಿ ನಿರ್ಧಾರವನ್ನು ಪಡೆದ ಮೊದಲ ರಾಜ್ಯ ತೆಲಂಗಾಣವಾಗಿದೆ. ಇತಿಹಾಸ ನಿರ್ಮಿಸಿದ್ದಕ್ಕೆ ನಾವೆಲ್ಲರೂ ಹೆಮ್ಮೆಪಡುತ್ತೇವೆ. ಭಾರತ ರತ್ನ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅತ್ಯಂತ ಶುಭ ದಿನದಂದು, ತೆಲಂಗಾಣ ರಾಜ್ಯ ಸರ್ಕಾರವು ಎಸ್‌ಸಿ ಉಪ-ಜಾತಿಗಳ ವರ್ಗೀಕರಣದ ಬಹುದಿನಗಳ ಬೇಡಿಕೆಯನ್ನು ಪುರಸ್ಕರಿಸುವ ಮೂಲಕ ಸಾಮಾಜಿಕ ನ್ಯಾಯದ ಒಂದು ಮಹಾನ್ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಈ ಮೂಲಕ ಅವರಿಗೆ ಅತ್ಯುತ್ತಮ ಗೌರವವನ್ನು ನಮ್ಮ ಸರ್ಕಾರವು ಸಲ್ಲಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

2026ಕ್ಕೆ ಇನ್ನಷ್ಟು ಏರಿಕೆ ಮಾಡುತ್ತೇವೆ..

ಅಲ್ಲದೆ ಈಗಾಗಲೇ ನಮ್ಮ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿಯು ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಏಪ್ರಿಲ್‌ 14ರ ಸೋಮವಾರದಿಂದಲೇ ಅನ್ವಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶದ ಮೊದಲ ಪ್ರತಿಯನ್ನು ಮುಖ್ಯಮಂತ್ರಿ ರೇವಂತ್‌ ರೆಡ್ಡಿಯವರಿಗೆ ಹಸ್ತಾಂತರಿಸಲಾಗಿದೆ. ಸುಪ್ರೀಂಕೋರ್ಟ್‌ ಆದೇಶದ ಬಳಿಕ ಎಸ್‌ಸಿ ವರ್ಗೀಕರಣವನ್ನು ಜಾರಿಗೆ ತಂದ ಮೊದಲ ರಾಜ್ಯ ತೆಲಂಗಾಣವಾಗಿದೆ. ಅಲ್ಲದೆ ಪ್ರಮುಖವಾಗಿ ಮುಂಬರುವ 2026ರಲ್ಲಿ ಎಸ್‌ಸಿ ಸಮುದಾಯದ ಜನಸಂಖ್ಯೆಯು ಹೆಚ್ಚಳವಾದಲ್ಲಿ ಅದಕ್ಕೆ ಅನುಗುಣವಾಗಿ ಮೀಸಲಾತಿಯಲ್ಲಿ ಇನ್ನಷ್ಟು ಏರಿಕೆ ಮಾಡಲಾಗುವುದು ಎಂದು ತೆಲಂಗಾಣದ ನೀರಾವರಿ ಸಚಿವ ಹಾಗೂ ಮೀಸಲಾತಿ ವರ್ಗೀಕರಣ ಉಪಸಮಿತಿ ಅಧ್ಯಕ್ಷ ಉತ್ತಮ್‌ ಕುಮಾರ್‌ ರೆಡ್ಡಿ ಭರವಸೆ ನೀಡಿದ್ದಾರೆ.

ಏನಿದು ಒಳ ಮೀಸಲು..?

ಅಲ್ಲದೆ ಕಳೆದ 2024ರ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್‌ ಒಳ ಮೀಸಲಾತಿಯು ಕಾನೂನುಬದ್ಧವಾಗಿದೆ ಎಂಬುದಾಗಿ ತನ್ನ ತೀರ್ಪು ನೀಡಿತ್ತು. ಇದರ ಆಧಾರದ ಮೇಲೆ ತೆಲಂಗಾಣ ಸರ್ಕಾರವು 2024ರ ಅಕ್ಟೋಬರ್‌ ತಿಂಗಳಿನಲ್ಲಿ ನ್ಯಾಯಮೂರ್ತಿ ಶಮೀಮ್‌ ಅಖ್ತರ್‌ ನೇತೃತ್ವದ ಸಮಿತಿಯನ್ನು ಹೆಚ್ಚಿನ ವರದಿಗಾಗಿ ನೇಮಕ ಮಾಡಲಾಗಿತ್ತು. ಇದು ಪರಿಶಿಷ್ಟ ಜಾತಿಯ ಅಡಿಯಲ್ಲಿ ಬರುವ 59 ಸಮುದಾಯಗಳನ್ನು 3 ಗುಂಪುಗಳಾಗಿ ವಿಭಜಿಸಿ ಅವುಗಳಿಗೆ ಸರ್ಕಾರಿ ಕೆಲಸಗಳಲ್ಲಿ ಹಾಗೂ ಶಿಕ್ಷಣದಲ್ಲಿ ಶೇಕಡಾ 15 ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿತ್ತು.

ಇನ್ನೂ ತೆಲಂಗಾಣದಲ್ಲಿ ಬಹು ದಿನಗಳ ಬೇಡಿಕೆಯಾಗಿದ್ದ ಈ ವಿಚಾರದ ಕುರಿತು ವರದಿ ಸಿದ್ಧಪಡಿಸಿದ್ದ ಸಮಿತಿಯು ಅದನ್ನು ತೆಲಂಗಾಣದ ನೀರಾವರಿ ಸಚಿವ ಉತ್ತಮ್‌ ಕುಮಾರ್‌ ರೆಡ್ಡಿ ನೇತೃತ್ವದ ಸಂಪುಟ ಉಪಸಮಿತಿಗೆ ನೀಡಿತ್ತು. ಬಳಿಕ ಈ ವರದಿಯನ್ನು ಕಳೆದ ಮಾರ್ಚ್‌ ತಿಂಗಳಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗಳೆರಡೂ ಅಂಗೀಕರಿಸಿದ್ದವು. ಅಲ್ಲದೆ ಏಪ್ರಿಲ್‌ 8ರಂದು ರಾಜ್ಯಪಾಲರೂ ಸಹ ಅಂಕಿತ ಹಾಕಿ ಕಳುಹಿಸಿದ್ದರು. ಇದಾದ ಬಳಿಕ ಒಳ ಮೀಸಲಾತಿಯನ್ನು ಏಪ್ರಿಲ್‌ 14ರಂದೇ ಅಧಿಕೃತವಾಗಿ ಕಾಯ್ದೆಯ ರೂಪದಲ್ಲಿ ಜಾರಿಗೆ ತರಲಾಗಿದೆ.

ಯಾವ ರೀತಿ ವಿಂಗಡಣೆ ಮಾಡಲಾಗಿದೆ..

ತೆಲಂಗಾಣ ಸರ್ಕಾರದ ಈ ಒಳ ಮೀಸಲಾತಿಯು ಯಾವ ರೀತಿಯಾಗಿ ಜಾರಿಯಾಗಿದೆ ಹಾಗೂ ಅವುಗಳಲ್ಲಿ ಹೇಗೆ ವರ್ಗೀಕರಣ ಮಾಡಿದ್ದಾರೆ ಎನ್ನುವುದನ್ನು ನೋಡಿದಾಗ. ರಾಜ್ಯದಲ್ಲಿನ ಪರಿಶಿಷ್ಟ ಜಾತಿಗೆ ಶೇಕಡಾ 15ರಷ್ಟು ಮೀಸಲಾತಿ ಇದೆ. ಇನ್ನೂ ಅದರಲ್ಲಿಯ 5 ಉಪಜಾತಿಗಳನ್ನು 3 ಭಾಗಗಳಾಗಿ ವಿಂಗಡಣೆ ಮಾಡಿದಾಗ ಅದರಲ್ಲಿ ಕ್ರಮವಾಗಿ ಶೇಕಡಾ 1, ಶೇಕಡಾ 9 ಹಾಗೂ ಶೇಕಡಾ 5ರಷ್ಟು ಒಳ ಮೀಸಲಾತಿ ನೀಡಲಾಗುತ್ತದೆ. ಈ ಮೂಲಕ ಅತಿ ಹಿಂದುಳಿದ ಉಪಜಾತಿಗಳಿಗೂ ಕನಿಷ್ಠ ಮೀಸಲಾತಿಯ ಲಾಭ ದೊರೆಯುವುದನ್ನು ಸೂಚಿಸುತ್ತದೆ.

ಬಲಾಢ್ಯರ ಪಾಲಾಗುತ್ತಿದ್ದ ಮೀಸಲಾತಿ ಲಾಭ..

ಅಲ್ಲದೆ ಈ ಮೊದಲಿನ ಮೀಸಲಾತಿ ವಿಚಾರದಲ್ಲಿ ಎಸ್‌ಸಿ ಸಮುದಾಯಗಳಲ್ಲಿಯೇ ಅಪಸ್ವರವಿತ್ತು. ಪ್ರಮುಖವಾಗಿ ಮೀಸಲಾತಿಯ ಲಾಭವನ್ನು ಹೆಚ್ಚು ಬಲಾಢ್ಯ ಪಂಗಡಗಳು ಅನುಭವಿಸುತ್ತಿದ್ದವು. ಇದರಿಂದ ಸಣ್ಣ ಪುಟ್ಟ ಜಾತಿಗಳಿಗೆ ಅನ್ಯಾಯವಾಗುತ್ತಿತ್ತು. ಆದರೆ ಈ ನಿರ್ಧಾರದಿಂದ ಎಸ್‌ಸಿ ಸಮುದಾಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿಯ ಅನುಕೂಲವಾಗಲಿದೆ. ಹೀಗಾಗಿ ಅತ್ಯಂತ ಹಿಂದುಳಿದ ಉಪಜಾತಿಗಳಿಗೂ ಕನಿಷ್ಠ ಮೀಸಲಾತಿಯ ಭರವಸೆಯನ್ನು ಇದರಲ್ಲಿ ನೀಡಲಾಗಿದೆ.

ಇನ್ನೂ ಒಟ್ಟು ಮೂರು ಗುಂಪುಗಳಾಗಿ ವಿಂಗಡಿಸಿರುವ ಈ ಒಳ ಮೀಸಲಾತಿಯು ಮೊದಲನೇ ಗುಂಪಿನಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ 15 ಸಮುದಾಯಗಳಲ್ಲಿನ ಅತಿ ಹೆಚ್ಚು ಹಿಂದುಳಿದಿರುವ ಈ ವರ್ಗಕ್ಕೆ ಶೇಕಡಾ 1ರಷ್ಟು ಮೀಸಲಾತಿ ನೀಡಲಾಗಿದೆ. ಇನ್ನೂ ಎರಡನೇ ಗುಂಪಿನಲ್ಲಿ ಕನಿಷ್ಠವೂ ಅಲ್ಲ, ಗರಿಷ್ಠವೂ ಅಲ್ಲದ ಮೀಸಲು, ಇದು ಮಧ್ಯಮ ಪ್ರಮಾಣದಲ್ಲಿರುವ ಹಿಂದುಳಿದ 19 ಜಾತಿಗಳಿಗೆ ಶೇಕಡಾ 9ರಷ್ಟು ಮೀಸಲಾತಿ ನೀಡಿದೆ. ಇನ್ನೂ ಮೂರನೇ ಗುಂಪಿನಲ್ಲಿ ಗುರುತಿಸಲಾಗಿರುವ ಕಡಿಮೆ ಪ್ರಮಾಣದಲ್ಲಿ ಹಿಂದುಳಿದಿರುವ ಹಾಗೂ ಪೂರ್ಣ ಪ್ರಮಾಣದ ಸೌಲಭ್ಯ ಪಡೆಯುತ್ತಿರುವ 26 ಜಾತಿಗಳಿವೆ ಅವುಗಳಲ್ಲಿ ಶೇಕಡಾ 5ರಷ್ಟು ಮೀಸಲಾತಿಯನ್ನು ಘೋಷಿಸುವ ಮೂಲಕ ರೇವಂತ್‌ ರೆಡ್ಡಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಕರ್ನಾಟಕದಲ್ಲಿ ಇನ್ನೂ ಈ ವಿಚಾರದಲ್ಲಿ ಒಮ್ಮತದ ಅಭಿಪ್ರಾಯ ಮೂಡದ ಕಾರಣ ರಾಜ್ಯ ಸರ್ಕಾರವು ಇದರ ಜಾರಿಗೆ ಮುಂದಾಗುತ್ತಿಲ್ಲ. ಆದರೆ ಈ ವಿಚಾರದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಅಲ್ಲದೆ ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗಿಂತಲೂ ನಂತರದಲ್ಲಿ ಮುಖ್ಯಮಂತ್ರಿ ಗಾದಿಗೆ ಏರಿರುವ ರೇವಂತ್‌ ರೆಡ್ಡಿ ಈ ರೀತಿಯ ನಿರ್ಧಾರ ಪಡೆದಿರುವುದು ಇದೀಗ ರಾಜ್ಯದ ಒಳ ಮೀಸಲಾತಿ ಹೋರಾಟಗಾರರಲ್ಲಿ ಮತ್ತೆ ಈ ಕುರಿತು ನಿರೀಕ್ಷೆಗಳು ಹೆಚ್ಚಿದಂತಾಗಿದೆ.

- Advertisement -

Latest Posts

Don't Miss