International News: ಭಯೋತ್ಪಾದಕ ದಾಳಿಗಳಿಂದ ನಮ್ಮನ್ನು ಪ್ರಚೋದಿಸಿದರೆ ಪಾಕಿಸ್ತಾನದ ಒಳನುಗ್ಗಿ ಹೊಡೆಯುತ್ತೇವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಎಚ್ಚರಿಕೆ ನೀಡಿದ್ದಾರೆ.
ಯುರೋಪ ರಾಷ್ಟ್ರಗಳ ಪ್ರವಾಸದಲ್ಲಿರುವ ಅವರು ಬೆಲ್ಜಿಯಂನಲ್ಲಿ ಮಾತನಾಡಿ, ಪಹಲ್ಗಾಮ್ ಮಾದರಿಯ ಕೃತ್ಯಗಳನ್ನು ನಡೆಸಿದರೆ, ಭಯೋತ್ಪಾದಕರ ಸಂಘಟನೆಗಳ ಮುಖಂಡರು, ನಾಯಕರು ಮುಯ್ಯಿಗೆ ಮುಯ್ಯಿ ಎನ್ನುವಂತಹ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅಡಗಿ ಕುಳಿತರೂ ಹುಡುಕಿ ಹೊಡೆಯುತ್ತೇವೆ..
ಅಲ್ಲದೆ ಪಾಕಿಸ್ತಾನ ಸಾವಿರಾರು ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದೆ. ಅವರನ್ನು ಭಾರತದ ಮೇಲೆ ಛೂ ಬಿಡುತ್ತಿದೆ. ಇದರೊಂದಿಗೆ ಬದುಕಲು ನಾವು ಸಿದ್ಧರಿಲ್ಲ. ಉಗ್ರರ ನಾಯಕರು ಪ್ರತೀಕಾರ ಎದುರಿಸಬೇಕಾಗುತ್ತದೆ. ಅವರೆಲ್ಲ ಪಾಕಿಸ್ತಾನದ ಒಳಗೆ ಅಡಗಿ ಕುಳಿತರೂ ಬಿಡದೆ ಹುಡುಕಿ ಮುಗಿಸುತ್ತೇವೆ ಎಂದು ಜೈಶಂಕರ್ ಕಠಿಣ ಸಂದೇಶ ರವಾನಿಸಿದ್ದಾರೆ.
ಭಯೋತ್ಪಾದನೆಯನ್ನ ಜಾಗತಿಕ ಸಮಸ್ಯೆಯಂದು ಪರಿಗಣಿಸಿ..
ನಮ್ಮ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳು ಪಾಕಿಸ್ತಾನದ ಎಂಟು ಪ್ರಮುಖ ವಾಯು ನೆಲೆಗಳ ಮೇಲೆ ದಾಳಿ ನಡೆಸಿ ದೊಡ್ಡ ಹಾನಿ ಮಾಡಿವೆ ಎಂದು ಭಾರತದ ಪರಾಕ್ರಮ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಪ್ರಮುಖವಾಗಿ ಈ ಭಯೋತ್ಪಾದನೆಯನ್ನು ದ್ವಿಪಕ್ಷೀಯ ಸಮಸ್ಯೆ ಎಂದು ಬಿಂಬಿಸುವುದಕ್ಕಿಂತ ಜಾಗತಿಕ ಸಮಸ್ಯೆಯಂದೇ ಪರಿಗಣಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಪಾಕ್ ಭಯೋತ್ಪಾದನೆಯನ್ನೇ ತನ್ನ ನೀತಿಯನ್ನಾಗಿಸಿಕೊಂಡಿದೆ..
ಅಲ್ಲದೆ ಹಲವು ದೇಶಗಳಿಗೆ ಭಯೋತ್ಪಾದನೆಯು ಇಂದು ಸವಾಲಾಗಿದೆ. ಒಂದು ಗುಂಪು ಇದನ್ನು ನಡೆಸುತ್ತದೆ ಎಂಬುದು ನಿಮಗೂ ಗೊತ್ತು. ಆದರೆ ಒಂದು ದೇಶ ರಾಜಾರೋಷವಾಗಿ ಈ ಭಯೋತ್ಪಾದನೆಯನ್ನೇ ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ ಎಂದು ಕಿಡಿ ಕಾರಿದ್ದಾರೆ.
ಈ ಪ್ರದೇಶದಲ್ಲೂ ಅಂದರೆ ಐರೋಪ್ಯ ರಾಷ್ಟ್ರಗಳಲ್ಲಿಯೂ ಉಗ್ರ ಚಟುವಟಿಕೆಗಳು ನಡೆಯುತ್ತವೆ. ಕಳೆದ 20-30 ವರ್ಷಗಳನ್ನು ನೋಡಿದರೆ ಈ ಕೃತ್ಯಗಳ ಮೂಲ ಪಾಕಿಸ್ತಾನವೇ ಆಗುತ್ತಿದೆ ಎಂದು ಜೈಶಂಕರ್ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಜಾಗತಿಕವಾಗಿ ನಡೆದ ಭಯೋತ್ಪಾದನಾ ಕೃತ್ಯಗಳಿಗೂ ಪಾಕಿಸ್ತಾನಕ್ಕೂ ಇರುವ ಚಾರಿತ್ರಿಕ ನಂಟನ್ನು ಎತ್ತಿ ತೋರಿಸಿದ್ದಾರೆ.
ಕಾಜಾ ಕಲ್ಲಾಸ್ಗೆ ಆಪರೇಷನ್ ಸಿಂಧೂರ್ ಮಾಹಿತಿ..
ಇನ್ನೂ ಈ ನಡುವೆ ಜೈಶಂಕರ್ ಅವರು ಐರೋಪ್ಯ ಯೂನಿಯನ್ ಉಪಾಧ್ಯಕ್ಷೆ ಕಾಜಾ ಕಲ್ಲಾಸ್ ಅವರನ್ನು ಭೇಟಿಯಾಗಿದ್ದಾರೆ. ಅಲ್ಲದೆ ಭಾರತ ಪಾಕ್ ವಿರುದ್ಧ ಕೈಗೊಂಡಿರುವ ಕ್ರಮಗಳು, ಅದರಲ್ಲೂ ಐತಿಹಾಸಿಕ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ. ಐರೋಪ್ಯ ಸಂಸದರನ್ನು, ಒಕ್ಕೂಟದ ಬೆಲ್ಜಿಯಂ ಹಾಗೂ ಲಕ್ಸಮ್ ಬರ್ಗ್ ಪ್ರಮುಖ ನಾಯಕರನ್ನೂ ಸಹ ಇದೇ ವೇಳೆ ಜೈಶಂಕರ್ ಭೇಟಿಯಾಗಿ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಕ್ರಮಗಳನ್ನು ವಿವರಿಸಿದ್ದಾರೆ. ಈ ವೇಳೆ ಆ ಎಲ್ಲ ನಾಯಕರು ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಬೆಂಬಲಿಸಿದ್ದಾರೆ.