ಬೆಂಗಳೂರು ನ.19: ಕೃಷಿ ಕಾಯ್ದೆ ವಾಪಸ್ ಪಡೆದಿರುವುದು ಸ್ಪಂದನಾಶೀಲ ಸರ್ಕಾರಕ್ಕೆ ನಿದರ್ಶನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಯ್ದೆಯ ಪ್ರಯೋಜನಗಳ ಕುರಿತು ರೈತರೊಂದಿಗೆ ಸಭೆಗಳನ್ನು ನಡೆಸಿ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಯಿತು. ಆದರೆ, ಅವರು ಅದಕ್ಕೆ ಒಪ್ಪದಿರುವುದರಿಂದ ಕಾಯ್ದೆಗಳನ್ನು ವಾಪಸ್ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ. ಹೀಗಾಗಿ ಮಣಿಯುವ ಪ್ರಶ್ನೆ ಇಲ್ಲ ಎಂದು ಹೇಳಿದರು. ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಕಾಯ್ದೆಗಳು ಬರುವುದು ಹೊಸದಲ್ಲ. ಯುಪಿಎ ಸರ್ಕಾರ 1991-92 ಜಾಗತೀಕರಣ, ಉದಾರೀಕರಣ ನೀತಿಗಳಿಗೆ ಒಪ್ಪಿಗೆ ನೀಡಿತು. ಅಲ್ಲದೆ, ವಿಶ್ವ ವ್ಯಾಪಾರ ಒಪ್ಪಂದ ಯುಪಿಎ ಸರ್ಕಾರ ಮಾಡಿತ್ತು. ಅದು ಬಂದಾಗಿನಿಂದ ಹೊಸ ಕಾಯ್ದೆಗಳು ಬಂದಿವೆ ಎಂದು ಹೇಳಿದರು.
ಈಗ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಕೃಷಿ ಕಾಯ್ದೆಗಳನ್ನೂ ಸಹ ಹಿಂದೆ ಯುಪಿಎ ಸರ್ಕಾರ ಇದ್ದಾಗಲೇ ಕರಡು ರೂಪಿಸಿತ್ತು. ನರೇಂದ್ರ ಮೋದಿ ಸರ್ಕಾರ ಬಂದ ನಂತರ ಅದರಲ್ಲಿ ಕೆಲವು ಬದಲಾವಣೆ ತಂದು ರಾಜ್ಯಗಳ ಅಭಿಪ್ರಾಯ ಕೇಳಿತ್ತು. ರೈತರು ನೇರವಾಗಿ ತಮ್ಮ ಫಸಲು ಮಾರಾಟ ಮಾಡುವ ಅವಕಾಶ ನೀಡಬೇಕು ಎಂಬುದು ಕಾಯ್ದೆಯ ಉದ್ದೇಶ. ಆದರೆ, ಪಂಜಾಬ್ ಮತ್ತು ಹರಿಯಾಣ ರಾಜ್ಯದ ರೈತರು ಇದಕ್ಕೆ ವಿರೋಧಿಸಿ ಒಂದು ವರ್ಷದ ಹೋರಾಟ ನಡೆಸಿದರು ಎಂದರು.
ಪಂಜಾಬ್, ಉತ್ತರಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಕಾಯ್ದೆ ವಾಪಸ್ ಪಡೆಯಲಾಗಿದೆ ಎಂಬ ಆರೋಪ ಸುಳ್ಳು. ಕಾಯ್ದೆಗಳು ಜಾರಿಯಲ್ಲಿ ಇದ್ದ ಸಂದರ್ಭದಲ್ಲಿಯೂ ಇತ್ತೀಚೆ ಗೆ ನಡೆದ ಚುನಾವಣೆಗಳಲ್ಲಿ ನಾವು ಜಯಗಳಿಸಿದ್ದೇವೆ. ಕಾಯ್ದೆಯ ಬಗ್ಗೆ ಇನ್ನೂ ಚರ್ಚೆಯಾಗಬೇಕು, ರೈತರಿಗೆ ಇದರ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಹೀಗಾಗಿ ಕಾಯ್ದೆ ವಾಪಸ್ ಪಡೆದು ಚರ್ಚೆ ಮಾಡಿದರೆ ವಿಶ್ವಾಸ ಹೆಚ್ಚಾಗುತ್ತದೆ ಎಂಬ ದೃಷ್ಟಿಯಿಂದ ಪ್ರಧಾನಿಯವರು ಈ ನಿರ್ಧಾರ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.