Wednesday, March 12, 2025

Latest Posts

ವಿಶ್ವ ಕಿಡ್ನಿ ದಿನಾಚರಣೆ: ಕಿಡ್ನಿ ಆರೋಗ್ಯದ ಕುರಿತು ಜಾಗೃತಿಗಾಗಿ ಬೃಹತ್ ವಾಕ್‌ಥಾನ್

- Advertisement -

Bengaluru News: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಕಿಡ್ನಿ ಸಂಬಂಧಿಸಿದ ಸಮಸ್ಯೆಗಳ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ಎನ್ ಯು ಆಸ್ಪತ್ರೆಯು ರೋಟರಿ ಸಿಲ್ಕ್ ಸಿಟಿ ರಾಮನಗರ ಹಾಗೂ ಕ್ರೆಸೆಂಟ್ ಚೈಲ್ಡ್ ಕೇರ್ ಮತ್ತು ಪಾಲಿಕ್ಲಿನಿಕ್ ಸಹಯೋಗದಲ್ಲಿ ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಿಂದ ಆರಂಭವಾಗಿ ನಗರದ ಕೆಂಗಲ್ ಹನುಮಂತಯ್ಯ ವೃತ್ತದವರೆಗೆ ವಾಕ್ ಥಾನ್ ಆಯೋಜಿಸಿತ್ತು.

ವಿಶ್ವ ಕಿಡ್ನಿ ದಿನಚಾರಣೆಯ ಹಿನ್ನೆಲೆಯಲ್ಲಿ ಆಯೋಜನೆಗೊಂಡ ಈ ವಾಕ್‌ಥಾನ್ ಗೆ ಮುಖ್ಯ ಅತಿಥಿಗಳಾಗಿ ಆಗಮಿಸದ್ದ ರಾಮನಗರದ ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳಾದ ಚಂದ್ರಯ್ಯ ಆರ್ ಅವರು ಫ್ಲಾಗ್ ಆಫ್ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಆರೋಗ್ಯವೇ ಭಾಗ್ಯ ಎಂಬ ಮಾತು ಎಂದಿಗೂ ಅನ್ವಯಿಸುವಂಥದ್ದು. ಅಧಿಕಾರ, ಸಂಪತ್ತು, ಹಣ ಕಳೆದುಕೊಂಡರೆ ಮತ್ತು ಗಳಿಸಬಹುದು. ಆದರೆ ಆರೋಗ್ಯ ಕಾಪಾಡಿಕೊಳ್ಳುವುದು ಮಾತ್ರ ಅತೀ ಮುಖ್ಯ. ಗಂಭೀರ ಸಮಸ್ಯೆಗಳಿಗೆ ತುತ್ತಾಗಿ ಆಪತ್ತು ತಂದುಕೊಳ್ಳುವುದಕ್ಕಿಂತ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರಂಭದಲ್ಲೇ ತೊಂದರೆಗೆ ಚಿಕಿತ್ಸೆ ಪಡೆಯಬಹುದು. ಎನ್ ಯು ಆಸ್ಪತ್ರೆಯು ಆಯೋಜಿಸಿರುವ ಈ ವಾಕ್ ಥಾನ್ ಅರ್ಥಪೂರ್ಣವಾದದ್ದು. ಈ ಮೂಲಕ ಸಾರ್ವಜನಿಕರು ಕಿಡ್ನಿಯ ಮಹತ್ವ ಅರಿತುಕೊಳ್ಳಬೇಕು ಎಂದರು.

ಈ ವರ್ಷದ ಕಿಡ್ನಿ ದಿನದ ವಿಷಯ ನಿಮ್ಮ ಕಿಡ್ನಿಗಳು ಆರೋಗ್ಯವಾಗಿವೆಯೇ? ಬೇಗ ಪರೀಕ್ಷಿಸಿ, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿʼ ಎಂಬುದರ ಕುರಿತು ಮಾತನಾಡಿದ ಎನ್ ಯು ಆಸ್ಪತ್ರೆಯ ಹಿರಿಯ ಯೂರಾಲಜಿಸ್ಟ್ ಡಾ ವಿನೋದ್ ಕುಮಾರ್ ಪಿ ಮಾತನಾಡಿ, ದೇಶದಲ್ಲಿ ಸುಮಾರು 20 ರಿಂದ 25 ಕೋಟಿ ಜನಗಳು ಒಂದಿಲ್ಲಾ ಒಂದು ರೀತಿಯ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಿಡ್ನಿ ಆರೋಗ್ಯ ಅದೆಷ್ಟು ಮುಖ್ಯವೆಂದರೆ ಹೃದಯ ಹಾಗೂ ಮೆದುಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆಯೋ ಅಷ್ಟೇ. ಆದಕಾರಣ ಕಿಡ್ನಿ ಸಮಸ್ಯೆಗಳನ್ನ ನಿರ್ಲಕ್ಷಿಸುವುದು ಅಪಾಯಕಾರಿ. ನಿಯಮಿತವಾಗಿ ಪರೀಕ್ಷಿಸಿಕೊಳ್ಳುವ ಮೂಲಕ ಅಪಾಯ ಎದುರಾಗುವುದನ್ನ ತಪ್ಪಿಸಬಹುದು ಎಂದು ಹೇಳಿದರು.

ಎನ್ ಯು ಆಸ್ಪತ್ರೆಯ ಮತ್ತೊಬ್ಬ ವೈದ್ಯ ಮಕ್ಕಳ ಮೂತ್ರಕೋಶ ತಜ್ಞರಾದ ಡಾ ನಿತಿನ್ ನಾಯಕ್ ಈ ಸಂದರ್ಭದಲ್ಲಿ ನೀರು ಸೇವನೆ ಕಿಡ್ನಿ ಆರೋಗ್ಯಕ್ಕೆ ಅದೆಷ್ಟು ಸಹಕಾರಿ ಎಂಬುದನ್ನ ಒತ್ತಿ ಹೇಳಿದರು. ʼಕಿಡ್ನಿಗೆ ಸಂಬಂಧಿಸಿದ ಇಂದಿನ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೇ ಜೀವನಶೈಲಿ. ಹೀಗಾಗಿ ಆರೋಗ್ಯಕರ ಡಯಟ್ ಪಾಲಿಸುವುದು ತುಂಬಾನೇ ಮುಖ್ಯ. ಹಾಗೇ ಸಾಧ್ಯವಾದಷ್ಟು ನೀರನ್ನು ಹೆಚ್ಚು ಸೇವಿಸಿ. ಜಂಕ್ ಫುಡ್ ಸಂಪೂರ್ಣ ಕಡಿಮೆ ಮಾಡಿ. ಬೊಜ್ಜು ಬರದಂತೆ ಎಚ್ಚರವಹಿಸಿ. ಈ ಮೂಲಕ ಕಿಡ್ನಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದುʼ, ಎಂದು ಕಿವಿ ಮಾತು ಹೇಳಿದರು.

ವೇದಿಕೆ ಮೇಲಿದ್ದ ಮತ್ತೊಬ್ಬ ಅತಿಥಿ, ನಗರಸಭಾ ಅಧ್ಯಕ್ಷ ಕೆ ಶೇಷಾದ್ರಿ ಶಶಿ ಮಾತನಾಡಿ, ವ್ಯಾಯಾಮದಿಂದ ಎಂತಹ ಕಾಯಿಲೆಯನ್ನು ಬೇಕಾದರು ದೂರ ಇಡಬಹುದು. ಪ್ರತಿನಿತ್ಯ ತಪ್ಪದೇ ವ್ಯಾಯಾಮ ಮಾಡಿ. ನನ್ನ ದೇಹ ತೂಕ ಹೆಚ್ಚಿದ್ದರು ಕೂಡಾ, ನಾನೂ ಆರೋಗ್ಯವಾಗಿದ್ದೇನೆ ಹಾಗೂ ತೂಕ ಇಳಿಸಲು ನಿತ್ಯ ವ್ಯಾಯಾಮ ಮಾಡುತ್ತೇನೆ. ಇಚ್ಛಾಶಕ್ತಿಯಿದ್ದರೆ ಎಂಥಹ ಸಾಧನೆ ಕೂಡಾ ಸಾಧ್ಯ. ಆರೋಗ್ಯದ ವಿಷಯದಲ್ಲಿಯೂ ಈ ಬದ್ಧತೆ ಬೇಕು. ರೋಟರಿ ಜೊತೆ ಸೇರಿಕೊಂಡು ಎನ್ ಯು ಆಸ್ಪತ್ರೆ ಕೈಗೊಂಡಿರುವ ಈ ವಾಕ್ ಥಾನ್ ಶ್ಲಾಘನೀಯವಾದದ್ದು. ಇಂಥಹ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಶ್ರೀಧರ್ ಬಿ ಎನ್, ಕರ್ನಾಟಕ ಐಎಂಎ ಉಪಾಧ್ಯಕ್ಷರಾದ ಡಾ ಮಳವೇಗೌಡ, ರಾಮನಗರ ಐಎಂಎ ಅಧ್ಯಕ್ಷ ಡಾ ಸಂಪಂಗಿ ರಾಮಯ್ಯ, ರಾಮನಗರ ಐಎಂಎ ಕಾರ್ಯದರ್ಶಿ ಡಾ ಮಧುಸೂದನ್, ಕ್ರೆಸೆಂಟ್ ಚೈಲ್ಡ್ ಕೇರ್ ಮತ್ತು ಪಾಲಿಕ್ಲಿನಿಕ್ ನ ಡಾ ಮಹಮ್ಮದ್ ಸೈಯ್ಯದ್ ಅಹಮದ್ ಎನ್ ಹಾಗೂ ಬಿಗ್ ಮಾರ್ಟ್ ರಾಮನಗರದ ಆರ್ ಪಿ ಪ್ರದೀಪ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ವಾಕ್‌ ಥಾನ್‌ ನಲ್ಲಿ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

- Advertisement -

Latest Posts

Don't Miss