Sunday, June 1, 2025

Latest Posts

ನೀವು ಅಂಬೇಡ್ಕರ್‌ ಕನಸನ್ನೇ ನುಚ್ಚು ನೂರು ಮಾಡಿದ್ದೀರಿ..! : ಸಿದ್ದರಾಮಯ್ಯ ವಿರುದ್ಧ ಮೋದಿ ವಾಗ್ದಾಳಿ

- Advertisement -

Political News: ರಾಜ್ಯದಲ್ಲಿ ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಿರುವುದು, ಬೆಲೆಯೇರಿಕೆ ನೀತಿ ಹಾಗೂ ವಕ್ಫ್‌ ತಿದ್ದುಪಡಿ ವಿಚಾರಗಳನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹರಿಯಾಣದ ಹಿಸ್ಸಾರ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಧರ್ಮಾಧಾರಿತ ಮೀಸಲಾತಿಯು ಅಂಬೇಡ್ಕರ್‌ ಅವರ ತತ್ವಾದರ್ಶಗಳಿಗೆ ವಿರುದ್ಧವಾಗಿದೆ. ಅಲ್ಲದೆ ನಮ್ಮ ಸಂವಿಧಾನದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ಮಾತ್ರ ಮೀಸಲಾತಿ ನೀಡಲು ಅವಕಾಶ ಕಲ್ಪಿಸಿದೆ ಎನ್ನುವ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಿರ್ಧಾರಕ್ಕೆ ಮೋದಿ ಸಿಡಿದೆದ್ದಿದ್ದಾರೆ. ಅಲ್ಲದೆ ತಮ್ಮ ರಾಜಕೀಯ ಆಟ ಆಡುವುದಕ್ಕಾಗಿ ಹಾಗೂ ಅದರಿಂದ ಲಾಭ ಪಡೆಯುವುದಕ್ಕಾಗಿ ಈ ಕಾಂಗ್ರೆಸ್‌ ಅಂಬೇಡ್ಕರ್‌ ಅವರ ಕನಸನ್ನೇ ನುಚ್ಚು ನೂರು ಮಾಡಿದೆ. ಇನ್ನೂ ಸರ್ಕಾರಿ ಗುತ್ತಿಗೆಗಳಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ಇದ್ದ ಹಕ್ಕನ್ನು ಕಿತ್ತುಕೊಂಡು ಕಾಂಗ್ರೆಸ್‌ ಸರ್ಕಾರ ಈ ಜನಾಂಗಗಳಿಗೆ ದೊಡ್ಡ ಅನ್ಯಾಯ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎ ಯಿಂದ ಝಡ್‌ ವರೆಗೂ ಬೆಲೆ ಏರಿಕೆ..

ಇನ್ನೂ ರಾಜ್ಯದಲ್ಲಿನ ಮುಸ್ಲಿಂ ಮೀಸಲಾತಿ ಪ್ರಸ್ತಾಪಿಸಿ, ಈ ಕಾಂಗ್ರೆಸ್‌ ಸರ್ಕಾರವು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿದೆ. ಆದರೆ ಅಂಬೇಡ್ಕರ್‌ ಅವರು ಧರ್ಮದ ಆಧಾರದಲ್ಲಿ ಮೀಸಲು ನೀಡಬಾರದು ಎಂದು ಹೇಳಿದ್ದರು. ಅಲ್ಲದೆ ನಮ್ಮ ಸಂವಿಧಾನವೂ ಕೂಡ ಇದನ್ನೇ ಸ್ಪಷ್ಟಪಡಿಸಿದೆ ಎಂದು ಕಾಂಗ್ರೆಸ್‌ ಸರ್ಕಾರಕ್ಕೆ ಮೋದಿ ತಮ್ಮ ಮಾತಿನ ಬಾಣಗಳನ್ನು ಬಿಟ್ಟಿದ್ದಾರೆ. ಅಲ್ಲದೆ ಪ್ರಮುಖವಾಗಿ ರಾಜ್ಯದಲ್ಲಿನ ಬೆಲೆ ಏರಿಕೆ ನೀತಿಯನ್ನೂ ಸಹ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವು ಎ ಯಿಂದ ಹಿಡಿದು ಝಡ್‌ ವರೆಗೂ ಎಲ್ಲದರಲ್ಲಿಯೂ ಬೆಲೆ ಏರಿಕೆ ಮಾಡಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರದಲ್ಲಿ ನಂ 1..!

ಅಲ್ಲದೆ ಕಾಂಗ್ರೆಸ್‌ ಆಡಳಿತದ ಕರ್ನಾಟಕದಲ್ಲಿ ಹಾಲಿನಿಂದ, ವಿದ್ಯುತ್‌ ವರೆಗೂ ಸಹ ದರ ಹೆಚ್ಚಳ ಮಾಡಲಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಆಡಳಿತದ ರಾಜ್ಯಗಳ ನಡುವಿನ ವ್ಯತ್ಯಾಸವೇ ಇದು ಎಂದು ಮೋದಿ ಚಾಟಿ ಬೀಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಜನರ ಮೇಲೆ ತೆರಿಗೆ ಹೇರುವುದರ ಜೊತೆಗೆ ಅವರ ಆರ್ಥಿಕ ಸ್ಥಿತಿಯ ಹೊರೆಯನ್ನು ಹೆಚ್ಚಳ ಮಾಡುತ್ತಿದೆ. ಈ ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ನಂಬರ್‌ 1 ಮಾಡಿದೆ ಎಂದು ಸ್ವತಃ ಪಕ್ಷದ ನಾಯಕರೇ ಒಪ್ಪಿಕೊಂಡಿದ್ದಾರೆಂದು ಮೋದಿ ಟೀಕಿಸಿದ್ದಾರೆ.

ಮುಸ್ಲಿಂರನ್ನೇ ಏಕೆ ಎಐಸಿಸಿ ಅಧ್ಯಕ್ಷ ಮಾಡಬಾರದು..?

ಇನ್ನೂ ಮುಸ್ಲಿಂ ಮೀಸಲಾತಿಯ ವಿಚಾರವನ್ನು ವಾಗ್ಬಾಣ ಬಿಟ್ಟಿರುವ ಪ್ರಧಾನಿ ಮೋದಿ, ಮುಸ್ಲಿಂ ಸಮುದಾಯವನ್ನು ಓಲೈಸುವ ನಿಮಗೆ ಅವರ ಬಗ್ಗೆ ಕಾಳಜಿ ಇದ್ದರೆ ಎಐಸಿಸಿ ಅಧ್ಯಕ್ಷರನ್ನಾಗಿ ಮುಸ್ಲಿಂ ವ್ಯಕ್ತಿಯೆನ್ನೇ ಏಕೆ ನೇಮಕ ಮಾಡಬಾರದು? ಅಲ್ಲದೆ ಲೋಕಸಭೆ ಚುನಾವಣೆಗಳಲ್ಲಿ ಶೇಕಡಾ 50 ರಷ್ಟು ಟಿಕೆಟ್‌ಗಳನ್ನು ಮುಸ್ಲಿಂ ಅಭ್ಯರ್ಥಿಗಳಿಗೆಂದೇ ಏಕೆ ಮೀಸಲಿಡಬಾರದು? ಎಂದು ಮೋದಿ ಕಾಂಗ್ರೆಸ್‌ ನಾಯಕರನ್ನು ಪ್ರಶ್ನೆ ಮಾಡುವುದರ ಮೂಲಕ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಕಾಂಗ್ರೆಸ್‌ ಸಂವಿಧಾನದ ಕತ್ತು ಹಿಸುಕಿದೆ..

ಕಾಂಗ್ರೆಸ್‌ ಆಳ್ವಿಕೆಯಲ್ಲಿ ದಲಿತರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಮಾಡಲಾಗಿತ್ತು. ಅಲ್ಲದೆ ತಮ್ಮ ಸರ್ಕಾರವು ಅಪಾಯದಲ್ಲಿದೆ ಎಂದು ಅರಿವಾದಾಗಲೇ ಕಾಂಗ್ರೆಸ್‌ ಸರ್ಕಾರವು ಸಂವಿಧಾನದ ಕತ್ತು ಹಿಸುಕುವ ಕೆಲಸ ಮಾಡಿದೆ, ಇದಕ್ಕೆ ತುರ್ತು ಪರಿಸ್ಥಿತಿಯೇ ಉದಾಹರಣೆ ಎಂದು ಮೋದಿ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ.

- Advertisement -

Latest Posts

Don't Miss