Bengaluru News: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ನರಸಮ್ಮ ಮಹತ್ವದ ತೀರ್ಪು ನೀಡಿದ್ದಾರೆ. ಈ ಮೂಲಕ ಗಮನ ಸೆಳೆದಿರುವ ಅವರು ಇದೀಗ ಈ ತೀರ್ಪು ಕಾಮುಕರ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡಿದ್ದಾರೆ.
ಘಟನೆಯ ಹಿನ್ನೆಲೆ..?
ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಭಕ್ತಿ ಗಾರ್ಡನ್ ನಿವಾಸಿ 18 ವರ್ಷದ ಎಂ.ಜೀವ ಎಂಬುವ ಆರೋಪಿಯು ತಾನು ವಾಸಿಸುತ್ತಿದ್ದ ಮನೆಯ ಸಮೀಪದಲ್ಲಿನ ಅಪ್ರಾಪ್ತೆಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದ. ಅಲ್ಲದೆ ಈ ವಿಷಯವನ್ನು ಯಾರಿಗೂ ಹೇಳದಂತೆ ಆ ಅಪ್ರಾಪ್ತೆಗೆ ಬೆದರಿಕೆಯೊಡ್ಡಿದ್ದನು. ಬಳಿಕದ ದಿನಗಳಲ್ಲೂ ಆತ ಅವಳ ಮೇಲೆ 3 ರಿಂದ 4 ಬಾರಿ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದನು. ಇದರ ಪರಿಣಾಮವಾಗಿ ಆ ಬಾಲಕಿ ಗರ್ಭಿಣಿಯಾಗಿದ್ದಳು. ಇನ್ನೂ ಈ ವಿಚಾರವನ್ನು ತಿಳಿದ ಬಾಲಕಿಯ ತಂದೆ ಸ್ಥಳೀಯ ಕಾಟನ್ ಪೇಟೆ ಪೊಲೀಸ್ ಠಾಣೆಗೆ ತೆರಳಿ ಜೀವನ ವಿರುದ್ಧ ಕಳೆದ 2024ರ ಮೇ10ರಂದು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಅಂದಿನ ಠಾಣಾಧಿಕಾರಿ ಡಾ. ಬಿ.ಎಸ್.ಸುಧಾಕರ ಅವರು ಸೂಕ್ತ ಸಾಕ್ಷ್ಯಾ ಧಾರಗಳನ್ನು ಕಲೆಹಾಕಿ ಆತನನ್ನು ಬಂದಿಸಿದ್ದರು. ಅಲ್ಲದೆ ಇವರ ವರ್ಗಾವಣೆಯ ಬಳಿಕ ಆ ಸ್ಥಾನಕ್ಕೆ ಬಂದಿದ್ದ ನೂತನ ಠಾಣಾಧಿಕಾರಿ ಎರ್ರಿಸ್ವಾಮಿ ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಯ ವಿರುದ್ಧ ಎಫ್ಟಿಎಸ್ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿರುವ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ನರಸಮ್ಮ ಅವರು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಯು ದೌರ್ಜನ್ಯ ನಡೆಸಿರುವುದು ದೃಢವಾಗಿದೆ. ಅಲ್ಲದೆ ಆತನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯ ಜೊತೆಗೆ 10 ಸಾವಿರ ದಂಡವನ್ನು ವಿಧಿಸಿದ್ದಾರೆ. ಇನ್ನೂ ನೊಂದ ಬಾಲಕಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅವರು ಆದೇಶ ಮಾಡಿದ್ದಾರೆ.
ಒಟ್ನಲ್ಲಿ.. ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಯುವಲ್ಲಿ ರಾಜ್ಯ ಸರ್ಕಾರವು ಎಷ್ಟೇ ಕಾಯ್ದೆಗಳನ್ನು ತಂದರೂ ಸಹ ಮಹಿಳೆಯರು, ಅಪ್ರಾಪ್ತೆ ಬಾಲಕಿಯರು ಹಾಗೂ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯಗಳು ನಿಲ್ಲುತ್ತಿಲ್ಲ ಎನ್ನುವ ದುಖಃವೂ ಎಲ್ಲರಲ್ಲಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ದಿಟ್ಟ ತೀರ್ಪುಗಳು ಬಂದು ನಾಗರಿಕ ಸಮಾಜದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇನ್ನಷ್ಟು ಗೌರವ ಹೆಚ್ಚಾಗಲು ಕಾರಣವಾಗಿದ್ದು ಸುಳ್ಳಲ್ಲ. ಅಲ್ಲದೆ ಈ ರೀತಿಯ ಗಟ್ಟಿಯಾದ ಆದೇಶಗಳು ಅದೆಷ್ಟೋ ಕಾಮುಕರಿಗೆ ಎಚ್ಚರಿಕೆಯ ಸಂದೇಶವಾಗಿರುವುದನ್ನೂ ಸಹ ಅಲ್ಲಗಳೆಯುವಂತಿಲ್ಲ.