Political News: ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಬಡ ಮಹಿಳೆಯರು ಮಾತ್ರವಲ್ಲದೇ , ಆರ್ಥಿಕವಾಗಿ ಉತ್ತಮರಿರುವವರು, ತೀರಿಹೋದವರ ಹೆಸರಲ್ಲೂ ಕೆಲವರು ಹಣ ಪಡೆಯುತ್ತಿದ್ದಾರಂತೆ. ಹೀಗಾಗಿ ಗೃಹಲಕ್ಷ್ಮೀ ಫಲಾನುಭವಿಗಳ ಮರುಪರಿಶೀಲನೆಗೆ ರಾಜ್ಯ ಸರ್ಕಾರ ಸಜ್ಜಾಗಿದೆ. ಈ ಕಾರಣಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ… ಈಗ ಗೃಹಲಕ್ಷ್ಮಿಗೆ ಗ್ಯಾರಂಟಿ ಇಲ್ಲವೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಮಾನ್ಯ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ಚುನಾವಣೆ ವೇಳೆ ಮಹಿಳೆಯರಿಗೆ ನೀಡಿದ್ದ ಭರವಸೆಗಳನ್ನು ಒಂದೊಂದಾಗಿ ಕಿತ್ತುಕೊಳ್ಳುತ್ತಿದೆ ಎಂಬ ಪ್ರಶ್ನೆ ಇಂದು ರಾಜ್ಯದ ಜನರಲ್ಲಿದೆ.
ಗೃಹಜ್ಯೋತಿ ಯೋಜನೆಯಲ್ಲಿ ಪರಿಷ್ಕರಣೆ ಮಾಡಿ ಲಕ್ಷಾಂತರ ಕುಟುಂಬಗಳ ಮೇಲೆ ಹೆಚ್ಚುವರಿ ಹೊರೆ ಹಾಕಿದ ಸರ್ಕಾರ, ಈಗ ಗೃಹಲಕ್ಷ್ಮಿ ಯೋಜನೆಯ ಮೇಲೂ ಸರ್ಕಾರದ ಕರಿ ಛಾಯೆ ಕಾಣುತ್ತಿದೆ. ಮಹಿಳೆಯರ ವಿಶ್ವಾಸದ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ಅದೇ ಮಹಿಳೆಯರ ನಿರೀಕ್ಷೆಗಳಿಗೆ ಧಕ್ಕೆ ತರುತ್ತಿದೆ.
ಡಿ.ಕೆ.ಶಿವಕುಮಾರ್ ಅವರೇ, ಮಹಿಳೆಯರ ಬದುಕಿನೊಂದಿಗೆ ರಾಜಕೀಯ ಮಾಡುವುದು ನಿಲ್ಲಿಸಿ. ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳಿಗೆ ಗ್ಯಾರಂಟಿ ನೀಡಿ. ರಾಜ್ಯದ ಲಕ್ಷಾಂತರ ಗೃಹಲಕ್ಷ್ಮಿಯರಿಗೆ ಸ್ಪಷ್ಟ ಉತ್ತರ ನೀಡಿ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.




