ರಾಜೀನಾಮೆ ಸಲ್ಲಿಸಿದ ನಾಗೇಂದ್ರ? ಡಿಕೆಶಿ ಅಂಗಳದಲ್ಲಿ ಚೆಂಡು!

ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಹಾಗೂ ದೊಡ್ಡ ಬೆಳವಣಿಗೆ ನಡೆದಿದೆ. ಬಹುಕೋಟಿ ಹಗರಣದ ಆರೋಪದ ಸುಳಿಯಲ್ಲಿ ಸಿಲುಕಿರುವ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

ಗುರುವಾರವೇ ಬಿ. ನಾಗೇಂದ್ರ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಲುಪಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ಆದರೆ, ಈ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಬೇಕೇ ಅಥವಾ ಅವರನ್ನು ಸಂಪುಟದಲ್ಲಿ ಮುಂದುವರಿಸಬೇಕೇ ಎಂಬ ಗೊಂದಲದಲ್ಲಿ ಕಾಂಗ್ರೆಸ್ ನಾಯಕತ್ವವಿದ್ದು, ಈವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಸರ್ಕಾರಕ್ಕೆ ಯಾವುದೇ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ನಾಗೇಂದ್ರ ಅವರೇ ಸ್ವಯಂಪ್ರೇರಿತರಾಗಿ ರಾಜೀನಾಮೆ ಪತ್ರವನ್ನು ಮುಖಂಡರ ಮುಂದಿಟ್ಟಿದ್ದಾರೆ ಅಂತ ಹೇಳಲಾಗ್ತಿದೆ.

ಸದ್ಯ ‘ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ’ಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಸಚಿವ ನಾಗೇಂದ್ರ ಎದುರಿಸುತ್ತಿದ್ದಾರೆ. ಈ ಹಗರಣವನ್ನು ಖಂಡಿಸಿ ಹಾಗೂ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟುಹಿಡಿದು, ಬಿಜೆಪಿ ಸೆಪ್ಟೆಂಬರ್ 1ರಿಂದ ಹತ್ತು ದಿನಗಳ ಕಾಲ ಬೃಹತ್ ‘ಬಳ್ಳಾರಿ ಚಲೋ’ ಪಾದಯಾತ್ರೆ ನಡೆಸಲು ಈಗಾಗಲೇ ಸಜ್ಜಾಗಿದೆ.

ಬಿಜೆಪಿಯ ಪಾದಯಾತ್ರೆ ಆರಂಭವಾಗುವ ಮುನ್ನವೇ ಸಚಿವ ನಾಗೇಂದ್ರ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ಹೌದು ‘ವಿರೋಧ ಪಕ್ಷಗಳ ಹೋರಾಟದ ತೀವ್ರತೆಯನ್ನು ತಗ್ಗಿಸಲು ಈ ಹೆಜ್ಜೆ ಇಡಲಾಗಿದ್ದರೂ, ಸಿಎಂ ಹಾಗೂ ಕಾಂಗ್ರೆಸ್ ಹೈಕಮಾಂಡ್ ಈ ರಾಜೀನಾಮೆಯ ಮೇಲೂ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಸದ್ಯದ ಕುತೂಹಲಕ್ಕೆ ಕಾರಣವಾಗಿದೆ.

ರಾಜೀನಾಮೆ ಅಂಗೀಕಾರದ ಸಂಪೂರ್ಣ ಹೊಣೆ ಈಗ ಮುಖ್ಯಮಂತ್ರಿಗಳ ಅಂಗಳದಲ್ಲಿದೆ. ಬಳ್ಳಾರಿ ಪಾದಯಾತ್ರೆಗೆ ಮುನ್ನ ಹೈಕಮಾಂಡ್ ಮತ್ತು ಸಿಎಂ ಯಾವ ಅಂತಿಮ ರಣತಂತ್ರ ರೂಪಿಸಲಿದ್ದಾರೆ ಮತ್ತು ಈ ರಾಜಕೀಯ ಬಿಕ್ಕಟ್ಟು ಹೇಗೆ ಅಂತ್ಯಗೊಳ್ಳಲಿದೆ ಎಂಬುದನ್ನ ಕಾದುನೋಡಬೇಕು.

About The Author