ಬೆಂಗಳೂರು: ರೆಬಲ್ ಸ್ಟಾರ್, ಕರ್ನಾಟಕದ ಕರ್ಣ, ಮಂಡ್ಯದ ಗಂಡು, ಎಂಬ ಬಿರುದುಗಳನ್ನು ಹೊಂದಿರುವ ನಟ ಅಂಬರೀಶ್ ಅಣ್ಣನವರ ಮೂರನೇ ವರ್ಷದ ಪುಣ್ಯ ಸ್ಮರಣೆ ಇಂದು ನಡೆಯಲಿದೆ. ಅಂಬರೀಶ್ ಅಣ್ಣನವರು ನವೆಂಬರ್- 24- 2018 ರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದು ಆ ದಿನ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳಿಗೆ ಅವರ ಸಾವಿನ ಸುದ್ದಿಯನ್ನು ಕೇಳಿ ಬರಸಿಡಿಲು ಬಡಿದಂತೆ ಆಗಿತ್ತು. ಇದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅಂಬರೀಶ್ ಅವರು ಸಿನಿಮಾರಂಗ ಮಾತ್ರವಲ್ಲದೆ, ರಾಜಕೀಯ ರಂಗದಲ್ಲೂ ಶಾಸಕರಾಗಿ,ಸಚಿವರಾಗಿ ಹಾಗೂ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು, ಹಾಗೆಯೇ ಎಲ್ಲಾ ಪಕ್ಷದ ಮುಖಂಡರ ಜೊತೆ ಉತ್ತಮ ಒಡನಾಟವನ್ನು ಹೊಂದಿದ್ದರು. ಇಂದಿಗೆ ಅವರು ನಮ್ಮನ್ನಗಲಿ ಮೂರು ವರ್ಷಗಳಾಗಿದೆ. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅಭಿಮಾನಿಗಳ ಹೃದಯದಲ್ಲಿ ಅವರ ನಟನೆ, ಅವರ ನೇರ ನುಡಿ, ನಡೆ ಹಾಗೂ ಅವರು ಚಿತ್ರಗಳೊಂದಿಗೆ ಜನಮಾನಸದಲ್ಲಿ ಹಾಗೆಯೇ ಉಳಿದಿದ್ದಾರೆ. ಅವರ ಹೆಸರಿನಲ್ಲಿ ಅಭಿಮಾನಿಗಳು ಸಂಘ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದು ಅದರ ಮೂಲಕ ಜನರ ಸೇವೆ ಮಾಡುತ್ತಿದ್ದಾರೆ. ನಟ ದರ್ಶನ್ ರವರು ಅಂಬರೀಶ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಂದು ಕಂಠೀರವ ಸ್ಟೇಡಿಯಂಗೆ ಅವರಿಗೆ ನಮನ ಸಲ್ಲಿಸಲು ಅವರ ಪತ್ನಿ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್, ನಟ ದರ್ಶನ್, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಹಾಗೂ ಸಿನಿಮಾರಂಗದ ನಟರು, ಕಲಾವಿದರು ಮತ್ತು ರಾಜಕಾರಣಿಗಳು, ಅಭಿಮಾನಿಗಳು ಬಂದು ಅವರ ಸಮಾಧಿಗೆ ಪೂಜೆ ಮಾಡಿ ಪುಷ್ಪನಮನ ಸಲ್ಲಿಸಿದ್ದಾರೆ.