Friday, June 20, 2025

Latest Posts

ಜಾತಿಗಣತಿ ವರದಿ ಒಂದು ರದ್ದಿ ಕಾಗದ, ಅದಕ್ಕೆ ಯಾವುದೇ ಬೆಲೆ ಇಲ್ಲ: ಕೆ.ಎಸ್.ಈಶ್ವರಪ್ಪ

- Advertisement -

ಮೈಸೂರು: ‘ಜಾತಿ ಜನಗಣತಿ ವರದಿ ವಿಚಾರವಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಜೊತೆ ಮಾತನಾಡಿದ್ದೇನೆ. ಸಂಬಂಧಪಟ್ಟ ಸದಸ್ಯ ಕಾರ್ಯದರ್ಶಿಯೇ ಆ ವರದಿಗೆ ಸಹಿ ಮಾಡಿಲ್ಲ. ಅದೊಂದು ರದ್ದಿ ಕಾಗದ. ಅದಕ್ಕೆ ಯಾವುದೇ ಬೆಲೆ ಇಲ್ಲ‌’ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಬುಧವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಆಯೋಗಕ್ಕೆ ಸಮಯ ನಿಗದಿಪಡಿಸಲು ನಮಗೆ ಅಧಿಕಾರ ಇಲ್ಲ. ಅದು ಸ್ವಾಯತ್ತೆ ಸಂಸ್ಥೆ. ಜಾತಿಗಣತಿ ವರದಿಗೆ ಒಂದು ರೂಪ ಕೊಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ವರದಿ ಸರಿ ಇದ್ದರೆ ಹೊರಗೆ ತರಲಿ, ಇಲ್ಲವೇ ಮರುಸಮೀಕ್ಷೆ ಮಾಡಿ ಹೊಸದಾಗಿ ವರದಿ ರಚಿಸಲಿ. ವರದಿ ಸಲ್ಲಿಸಿದ ತಕ್ಷಣ ಅದನ್ನು ಜಾರಿ ಮಾಡುವ ಹೊಣೆ ಸರ್ಕಾರದ್ದು. ಸಿದ್ದರಾಮಯ್ಯ ರೀತಿ ಯಾರೂ ಮೋಸ ಮಾಡಬಾರದು ಅಷ್ಟೆ’ ಎಂದರು.

‘ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಜಾತಿಗಣತಿ ವರದಿ ಬಿಡುಗಡೆ ಮಾಡಲಿಲ್ಲ. ಅವರಿಗೆ ಅಧಿಕಾರವೂ ಬೇಕು, ಹಿಂದುಳಿದ ವರ್ಗ ಹಾಗೂ ದಲಿತರ ಹೆಸರೂ ಬೇಕು. ಹೀಗಾಗಿ, ಈ ಸಮುದಾಯದವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆದರು, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದರು’ ಎಂದು ತಿಳಿಸಿದರು.

‘ವಿರೋಧ ಪಕ್ಷದ ನಾಯಕ ಅಥವಾ ಮುಂದೆ ಮುಖ್ಯಮಂತ್ರಿ ಸ್ಥಾನ ಕೊಡಲ್ಲವೆಂದರೆ ಸಿದ್ದರಾಮಯ್ಯ ಒಂದು ದಿನವೂ ಕಾಂಗ್ರೆಸ್‌ನಲ್ಲಿ ಇರಲ್ಲ. ಅಧಿಕಾರದ ಲಾಲಸೆಗಿರುವ ವ್ಯಕ್ತಿ ಹಾಗೂ ಸ್ವಾರ್ಥಿ. ದೊಡ್ಡ ಸುಳ್ಳುಗಾರ. ಅವರು ತಮ್ಮ ಇಡೀ ಜೀವನದಲ್ಲಿ ಜನರನ್ನು ದಾರಿ ತಪ್ಪಿಸಿದರು. ಎಚ್‌.ಡಿ.ದೇವೇಗೌಡರಿಗೆ ಮೋಸ ಮಾಡಿ ಹೊರಬಂದರು. ಜನ ಜಾಗೃತರಾಗಿದ್ದು, ಇಂಥ ವ್ಯಕ್ತಿಗಳ ರಾಜಕೀಯ ಬಹಳ ದಿನ ಉಳಿಯುವುದಿಲ್ಲ’ ಎಂದು ಟೀಕಿಸಿದರು.

ಜಿ.ಟಿ.ದೇವೇಗೌಡ ಜೊತೆ ಮತ್ತೆ ಸಿದ್ದರಾಮಯ್ಯ ಸ್ನೇಹ ಸಾಧಿಸುತ್ತಿರುವುದು ಬಿಜೆಪಿ ಮೇಲೆ ಪರಿಣಾಮ ಬೀರಲಿದೆಯೇ ಎಂಬುದಕ್ಕೆ, ‘ಸಿದ್ದರಾಮಯ್ಯ ಅವರಿಗೆ ಈಗ ಗತಿ ಇಲ್ಲ. ಬಾದಾಮಿಯಲ್ಲಿ ಮತ್ತೆ ಸ್ಪರ್ಧಿಸಿದರೆ ಜನ ಸೋಲಿಸುತ್ತಾರೆ. ಹೀಗಾಗಿ, ಹೇಗಾದರೂ ಮಾಡಿ ತಮ್ಮನ್ನು ರಕ್ಷಿಸಿ ಎಂದು ಜಿ.ಟಿ.ದೇವೇಗೌಡರಲ್ಲಿ ಕೇಳಿಕೊಳ್ಳುತ್ತಿದ್ದಾರೆ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಸ್ನೇಹ ಬೆಳೆಸಿದ್ದಾರೆ. ಜಿ.ಟಿ.ದೇವೇಗೌಡರು ಅವಕಾಶವಾದಿ ರಾಜಕಾರಣಿ ಆಗಬಾರದು’ ಎಂದರು. ಪ್ರಧಾನಿ ಮೋದಿ ಹಾಗೂ ಎಚ್‌.ಡಿ.ದೇವೇಗೌಡರ ಭೇಟಿ ಕುರಿತು, ‘ಇದೊಂದು ಸಂತೋಷದ ವಿಚಾರ. ಒಂದು ಪಕ್ಷದ ರಾಜಕಾರಣಿ ಮತ್ತೊಂದು ಪಕ್ಷದ ರಾಜಕಾರಣಿಗೆ ಗೌರವ ಕೊಡಬೇಕು ಎಂಬುದನ್ನು ಈ ಭೇಟಿ ತೋರಿಸಿದೆ. ಇದನ್ನು ಸಿದ್ದರಾಮಯ್ಯ ಕೂಡ ಗಮನಿಸಿದ್ದಾರೆ ಎಂಬುದಾಗಿ ಭಾವಿಸುತ್ತೇನೆ. ಇದನ್ನು ಅವರು ಗಮನಿಸಿದ್ದಲ್ಲಿ ಮೋದಿ ಅವರನ್ನು ಏಕವಚನದಲ್ಲಿ ಕರೆಯುವುದು, ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಉಗ್ರಗಾಮಿ ಎಂದು ಕರೆಯುವುದು, ವಾಪಸ್‌ ಬೈಯಿಸಿಕೊಳ್ಳುವುದು ತಪ್ಪುತ್ತದೆ’ ಎಂದು ಪ್ರತಿಕ್ರಿಯಿಸಿದರು.

- Advertisement -

Latest Posts

Don't Miss