ಬಜರಂಗದಳ ಕಾರ್ಯಕರ್ತ ಹರ್ಷ (Harsha) ಕಗ್ಗೊಲೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ದುಃಖ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ಯಡಿಯೂರಪ್ಪ ಅವರು ಹರ್ಷ ನಿವಾಸಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ತಾವು ಮತ್ತು ಯಡಿಯೂರಪ್ಪ (Yeddyurappa) ಅವರು ಸರಕಾರದ ಪರವಾಗಿ 25 ಲಕ್ಷ ಪರಿಹಾರ ನೀಡುತ್ತೇವೆ. ವಿಶ್ವನಾಥ ಶೆಟ್ಟಿ (Vishwanath Shetty) ಕೊಲೆಯಾದಾಗ ಅವರ ಕುಟುಂಬಕ್ಕೆ ಬಿಜೆಪಿ ವತಿಯಿಂದ 18 ಲಕ್ಷ ರೂ. ತಲುಪಿಸಿತ್ತು. ಟೀಕೆ ಟಿಪ್ಪಣಿಗಳು ಸ್ವಾಭಾವಿಕ. ಆ ಸಂದರ್ಭದಲ್ಲಿ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ವಿಶ್ವನಾಥ ಶೆಟ್ಟಿ ಕುಟುಂಬಕ್ಕೂ ಸಹ ಹಿಂದೂ ಸಮಾಜ ಏನೇನು ಸಹಾಯ ಮಾಡಬಹುದೋ ಅದನ್ನು ಮಾಡ್ತೇವೆ. ಕೆಲವು ಮುಸಲ್ಮಾನ್ ಗೂಂಡಾಗಳು ಗಾಜನೂರು ಬಳಿ ವಿಶ್ವನಾಥಶೆಟ್ಟಿ ಅವರ ಹತ್ಯೆ ನಡೆಸಿದ್ದರು ಎಂದರು. ಕೊಲೆ ಮಾಡಿದ ಮುಸಲ್ಮಾನ್ ಗೂಂಡಾಗಳ ಕೃತ್ಯವನ್ನು ಕಾಂಗ್ರೆಸ್ ಇದುವರೆಗೂ ಖಂಡನೆ ವ್ಯಕ್ತಪಡಿಸಿಲ್ಲ. ಯಾಕೆ ಹಿಂದೂಗಳ ಹತ್ಯೆಯಾದಾಗ ಅವರ ನೆನಪು ಆಗಲಿಲ್ವಾ. ಯು.ಟಿ.ಖಾದರ್ ನೇತೃತ್ವದಲ್ಲಿ ಸಭೆ ನಡೆಯಿತು. ಎಲ್ಲಾ ಮುಸಲ್ಮಾನ್ ಶಾಸಕರು ಸಭೆ ನಡೆಸಿ, ಇಂತಹ ಘಟನೆಗೆ ಪಿಎಫ್ಐ, ಎಸ್.ಡಿ.ಪಿ.ಐ ಕಾರಣವಾಗಿದೆ. ಕ್ರಮ ಕೈಗೊಳ್ಳಿ ಅಂದಿದ್ದರು. ಆ ನಾಯಕರುಗಳೇ ಸಂಘಟನೆ ನಿಷೇಧ ಮಾಡಿ ಅಂದಿದ್ದರು. ಆದರೆ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಮಾತ್ರ ಆರ್.ಎಸ್.ಎಸ್ ಕಾರಣ ಎನ್ನುತ್ತಿದ್ದಾರೆ ಎಂದು ಟೀಕಿಸಿದರು. ವೇಳೆ ಆಸ್ತಿ-ಪಾಸ್ತಿ ಹಾನಿ ಮಾಡಿದವರಲ್ಲಿ ಹೊರಗಡೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಸ್ತಿ-ಪಾಸ್ತಿ ನಷ್ಟ ಆಗಿರುವವರಿಗೆ ಸರಕಾರದಿಂದ ಪರಿಹಾರ ಕೊಡ್ತೇವೆ’ ಎಂದು ಸಚಿವ ಈಶ್ವರಪ್ಪ ಭರವಸೆ ನೀಡಿದರು.