Spiritual: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. ಪ್ರಪಂಚದೆಲ್ಲೆಡೆ ಹಿಂದೂಗಳು ಭಕ್ತಿಯಿಂದ ಶ್ರೀಕೃಷ್ಣನನ್ನು ಪೂಜಿಸುವ ದಿನ. ಈ ದಿನದಂದು ನಾವು ನಿಮಗೆ ಗೊತ್ತಿರದ ಶ್ರೀಕೃಷ್ಣನ ಜೀವನದ 5 ಅದ್ಭುತ ಘಟನೆಗಳ ಬಗ್ಗೆ ಹೇಳಲಿದ್ದೇವೆ.
ಮೊದಲ ಘಟನೆ: ಶ್ರೀಕೃಷ್ಣನನ್ನು ಬೆಣ್ಣೆ ಕಳ್ಳನೆಂದು ಪ್ರೀತಿಯಿಂದ ಕರೆಯಲಾಗುತ್ತದೆ. ಆದರೆ ಕೃಷ್ಣ ಈ ರೀತಿಯಾಗಿ ಕದ್ದ ಬೆಣ್ಣೆಯನ್ನು ಹಂಚಿ ತಿನ್ನುತ್ತಿದ್ದ. ಗೆಳೆಯರೊಂದಿಗೆ ಸೇರಿ, ಬೆಣ್ಣೆ ಕದ್ದು, ಕೋತಿಗಳೊಂದಿಗೆ ಬೆಣ್ಣೆಯನ್ನು ಹಂಚಿ ತಿನ್ನುತ್ತಿದ್ದ. ಏಕೆಂದರೆ, ಶ್ರೀಕೃಷ್ಣನಿಗೆ ಕಳೆದ ಅವತಾಾರದಲ್ಲಿ ತಾನು ರಾಮನಾಗಿದ್ದು, ಸೀತೆಯನ್ನು ಹುಡುಕುವಾಗ, ಅವನ ಸಹಾಯಕ್ಕೆ ಬಂದಿದ್ದು ಇದೇ ವಾನರರೆಂದು ತಿಳಿದಿತ್ತು. ಈ ಕಾರಣಕ್ಕೆ ಕೋತಿಗಳಿಗೆ ಪ್ರತೀ ಬಾರಿ ಬೆಣ್ಣೆ ಹಂಚಿ ತಿನ್ನುತ್ತಿದ್ದ.
ಎರಡನೇಯ ಘಟನೆ: ಶ್ರೀಕೃಷ್ಣ ಗುರುಕುಲದಲ್ಲಿ ಶಿಕ್ಷಣ ಪಡೆಯುವಾಗ, ಅಲ್ಲಿ ಅವರಿಗೆ ಸಾಂದೀಪನಿ ಮುನಿಗಳು ಗುರುಗಳಾಗಿದ್ದರು. ಇದೇ ಆಶ್ರಮದಲ್ಲಿ ಶ್ರೀಕೃಷ್ಣನಿಗೆ ಕುಚೇಲ ಸಿಕ್ಕಿದ್ದು. ಈ ಆಶ್ರಮದಲ್ಲಿ ಶ್ರೀಕೃಷ್ಣ ಶಿಕ್ಷಣ ಪಡೆದ ಬಳಿಕ, ಮರಳಿ ಮನೆಗೆ ಹೋಗುವ ಮುನ್ನ ಗುರುಗಳಿಗೆ ಗುರು ದಕ್ಷಿಣೆ ಕೊಡಲು ಬಂದಿದ್ದ. ಆದರೆ ಗುರುಗಳು, ನೀನು ನನಗೆ ದಕ್ಷಿಣೆ ಕೊಡುವುದಿದ್ದರೆ, ನನ್ನ ಪುತ್ರನನ್ನು ಮರಳಿ ನನ್ನ ಬಳಿ ತಂದುಕೊಡು ಎಂದು ಹೇಳಿ, ಪುತ್ರನ ಕಥೆ ಹೇಳುತ್ತಾರೆ. ತಕ್ಷಣ ಕೃಷ್ಣ ಸಮುದ್ರದ ಬಳಿ ಹೋಗಿ, ಶಂಖಾಸುರನೆಂಬ ರಾಕ್ಷಸನ ಸಂಹಾರ ಮಾಡಿ, ಗುರುಗಳ ಮಗ ಮತ್ತು ಇನ್ನೂ ಹಲವು ಜನರ ಜೀವ ಕಾಪಾಡಿದ್ದ.
ಮೂರನೇಯ ಘಟನೆ: ನೀವು ಬಾಲಿವುಡ್ನ ತ್ರೀ ಇಡೀಯಟ್ಸ್ ಸಿನಿಮಾ ನೋಡಿದ್ರೆ, ನಿಮಗೆ ಆ ಸಿನಿಮಾದ ನಾಯಕನ ಹೆಸರು ನೆನಪಿರಬಹುದು. ರಾಂಛೋಡ್ ದಾಸ್ ಚಾಂಛಡ್. ರಾಂಛೋಡ್ ದಾಸ್ ಎನ್ನುವ ಹೆಸರನ್ನು ಉತ್ತರಭಾರತೀಯರು ಕೇಳಿರುತ್ತಾರೆ. ಆದರೆ ದಕ್ಷಿಣ ಭಾರತೀಯರಿಗೆ ಇದು ವಿಚಿತ್ರ ಹೆಸರು ಎನ್ನಿಸಬಹುದು. ಆದರೆ ರಾಂಛೋಡ್ ದಾಸ್ ಎಂದರೆ, ಶ್ರೀಕೃಷ್ಣನ ಹೆಸರು. ಈ ಹೆಸರು ಯಾಕೆ ಬಂತೆಂದರೆ, ಶ್ರೀಕೃಷ್ಣ ರಣಭೂಮಿಯನ್ನು ಬಿಟ್ಟು ಓಡಿದ್ದನಂತೆ. ಅದಕ್ಕೆ ರಾಂಛೋಡ್ ದಾಸ್ ಎಂಬ ಹೆಸರು ಶ್ರೀಕೃಷ್ಣನಿಗೆ ಬಂದಿತ್ತು. ಎಲ್ಲರೂ ಯುದ್ಧ ಮಾಡಿದರೆ, ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಯುದ್ಧವನ್ನು ನಿಲ್ಲಿಸಬೇಕು ಎಂದು ಶ್ರೀಕೃಷ್ಣ ಯುದ್ಧಭೂಮಿಯಿಂದ ಹೊರನಡೆದಿದ್ದ.
ನಾಲ್ಕನೇಯ ಘಟನೆ: ಶ್ರೀಕೃಷ್ಣನಿಗೆ ಒಮ್ಮೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಅರಮನೆಯಲ್ಲಿರುವ ಶ್ರೀಕೃಷ್ಣನ 8 ಜನ ಪತ್ನಿಯರು ಶ್ರೀಕೃಷ್ಣನನ್ನು ಆರೈಕೆ ಮಾಡುತ್ತಿದ್ದರು. ಆದರೆ ವೈದ್ಯರು ಹೇಳಿದ ಕೆಲಸ ಮಾಡಲು ಹಿಂಜರಿದಿದ್ದರು. ಅದೇನೆಂದರೆ, ಶ್ರೀಕೃಷ್ಣನ ಪ್ರೀತಿಸುವವರು ತಮ್ಮ ಕಾಲಿನ ಧೂಳನ್ನು ತಂದು, ಶ್ರೀಕೃಷ್ಣನ ಹಣೆಗೆ ಹಚ್ಚಬೇಕು. ಆಗ ಮಾತ್ರ ಶ್ರೀಕೃಷ್ಣ ಅನಾರೋಗ್ಯದಿಂದ ಮುಕ್ತಿ ಹೊಂದುತ್ತಾನೆ ಎನ್ನುತ್ತಾರೆ. ಆದರೆ ಶ್ರೀಕೃಷ್ಣನ ಪತ್ನಿಯರು ಮಾತ್ರ ಈ ಕೆಲಸಕ್ಕೆ ಒಪ್ಪಲಿಲ್ಲ. ಶ್ರೀಕೃಷ್ಣ ಜಗದೋದ್ಧಾರಕ. ಆತನ ಹಣೆಗೆ ನಮ್ಮ ಪಾದದ ಧೂಳು ಹಚ್ಚುವುದಾದರೂ ಹೇಗೆ ಎಂದು ಅವರು ಯೋಚಿಸುತ್ತಿದ್ದರು. ಆದರೆ ಗೋಪಿಕೆಯರ ಬಳಿ ಹೋಗಿ, ವೈದ್ಯರು ಈ ರೀತಿ ಹೇಳಿದಾಗ, ಗೋಪಿಕೆಯರೆಲ್ಲ ಸೇರಿ, ಶ್ರೀಕೃಷ್ಣ ಬೇಗ ಆರೋಗ್ಯವಾಗಲಿ ಎಂದು, ಅವರ ಕಾಲಿನ ಧೂಳನ್ನು ಸೇರಿಸಿ, ಶ್ರೀಕೃಷ್ಣನಿಗೆ ಕೊಟ್ಟು ಕಳುಹಿಸಿದ್ದರಂತೆ. ಅದನ್ನು ಹಚ್ಚಿದ ಬಳಿಕ ಶ್ರೀಕೃಷ್ಣ ಅನಾರೋಗ್ಯದಿಂದ ಮುಕ್ತಿ ಪಡೆಯುತ್ತಾನೆ ಎನ್ನಲಾಗಿದೆ.
ಐದನೇಯ ಘಟನೆ: ಇನ್ನು ಕೊನೆಯದಾಗಿ ನಾವು ಮಕ್ಕಳಿಗೆ ಶ್ರೀಕೃಷ್ಣ ವೇಷ ಹಾಕುವಾಗ, ಕಿರೀಟ, ಅದಕ್ಕೊಂದು ನವಿಲುಗರಿ, ಆಭರಣ, ತಿಲಕ, ಪಂಚೆ, ಶಲ್ಯ ಎಲ್ಲವನ್ನೂ ಹಾಕಿ ಶೃಂಗಾರ ಮಾಡುತ್ತೇವೆ. ಚಿತ್ರದಲ್ಲೂ ಸಹ ನಾವು ಶ್ರೀಕೃಷ್ಣನನ್ನು ಇದೇ ರೀತಿ ನೋಡಿರುತ್ತೇವೆ. ಆದರೆ ಶ್ರೀಕೃಷ್ಣ ನೋಡಲು ಹೇಗಿದ್ದನೆಂದು ಮೊದಲು ಮಾತುಗಳಲ್ಲಿ ಬರೆದವರು ಉತ್ತರೆ. ಅರ್ಜುನನ ಮಗ ಅಭಿಮನ್ಯುವಿನ ಪತ್ನಿ ಉತ್ತರೆ ಶ್ರೀಕೃಷ್ಣ ಯಾವ ರೀತಿ ಕಾಣುತ್ತಿದ್ದನೆಂದು ಮೊದಲ ಬಾರಿ ವಿವರಿಸಿದ್ದಳು. ಮತ್ತು ಆಕೆಯ ವಿವರಣೆಯಂತೆ, ನಾವು ನೀವೆಲ್ಲ ನೋಡುವ ಶ್ರೀಕೃಷ್ಣನ ಚಿತ್ರವನ್ನು ಬಿಡಿಸಿದ್ದು ವಜ್ರನಾಭಿ. ವಜ್ರನಾಭಿ ಯಾರು ಎಂಬ ಪ್ರಶ್ನೆಗೆ ಉತ್ತರ, ಶ್ರೀಕೃಷ್ಣನ ಮರಿ ಮೊಮ್ಮಗ ವಜ್ರನಾಭಿ.