Dharwad News: ಧಾರವಾಡ: ಸ್ಪರ್ಧಾತ್ಮಕ ದಿನಗಳಲ್ಲಿ ಮ್ಯಾಟ್ ಕುಸ್ತಿಯೇ ಹೆಚ್ಚಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಪರಂಪರಾಗತವಾಗಿ ಬಂದ ಮಣ್ಣಿನ ಕುಸ್ತಿ ಉಳಿಸಿ, ಬೆಳೆಸಬೇಕೆಂಬ ಉದ್ದೇಶದಿಂದ ಈ ಬಾರಿ ಅಳ್ನಾವರ ಪಟ್ಟಣದ ಗ್ರಾಮ ದೇವಿ ಜಾತ್ರಾ ಪ್ರಯುಕ್ತ ಯೋಧ ರಾಜು ಮಾರುತಿ ಪೆಜೋಳ್ಳಿ ಪುರುಷರು ಹಾಗೂ ಮಹಿಳೆಯರ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಮುಕ್ತ ನಿಕಾಲಿ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಈ ಕುಸ್ತಿ ಅಖಾಡದಲ್ಲಿ ನೂರಾರು ಕುಸ್ತಿಪಟುಗಳು ಪಟ್ಟು ಹಾಗೂ ಮರು ಪಟ್ಟು ಹಾಕಿದರು.
ಈ ಬಯಲು ಅಖಾಡಕ್ಕೆ ಹೊರದೇಶದ ಇರಾನ್, ಹರಿಯಾಣ, ಪಂಜಾಬ್, ಕೊಲ್ಹಾಪುರ, ಮಹಾರಾಷ್ಟ್ರ ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ಪೈಲ್ವಾನರು ಆಗಮಿಸಿದ್ದರು.
ವಿಶೇಷ ಏನೆಂದರೆ ಇರಾನ್’ನ ಮಿರ್ಜಾ, ಭಾರತದ ಕೇಸರಿ ಜಸ್ಸಾ ಪಟ್ಟಿ, ಡಬಲ್ ಕೇಸರಿ ಬೆಳವಟಕಿಯ ರೋಹನ್ ಹಾಗೂ ಮಹಿಳಾ ವಿಭಾಗದಲ್ಲಿ ಖೇಲೋ ಇಂಡಿಯಾ ಸಿಲ್ವರ್ ಮೆಡಲ್ ಲೀನಾ ಸಿದ್ದಿ, ನ್ಯಾಷನಲ್ ಮೆಡಲಿಸ್ಟ್ ಮಹಾರಾಷ್ಟ್ರದ ಕೀರ್ತಿ ಗುಡಲೇಕರ್, ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತೆ ಗೋಪವ್ವಾ ಬೋಡ್ಕಿ, ಕರ್ನಾಟಕ ಕೇಸರಿ ಗಾಯತ್ರಿ ಸುತಾರ, ಇರಾನ್’ನ ಮುಬಿನಾ ಸೇರಿದಂತೆ ಮುಂತಾದವರು ಪಂದ್ಯಾವಳಿಯಲ್ಲಿ ಭಾಗವಹಿಸಿ ಮೆರಗು ನೀಡಿದರು.
ಇವರುಗಳು ಬಹುಮಾನ ಗೆಲ್ಲುವುದಕ್ಕಾಗಿ ಜಗಜಟ್ಟಿಗಳು ಮೈಕೊಡವಿ ಹೋರಾಡಿದರು. ಇದನ್ನು ಕಂಡು ಕುಸ್ತಿ ಅಭಿಮಾನಿಗಳು ಸಂಭ್ರಮಿಸಿದರು. ಗೆದ್ದವರಿಗೆ 1500 ರಿಂದ 12 ಲಕ್ಷ ರೂ ವರೆಗೆ ಬಹುಮಾನ ನಿಗದಿ ಪಡಿಸಲಾಗಿತ್ತು.
ಇನ್ನು ಇಂದಿನ ಮಕ್ಕಳು ಮೊಬೈಲ್ಗೆ ದಾಸರಾಗುತ್ತಿದ್ದು, ಸಣ್ಣ ವಯಸ್ಸಿನಲ್ಲೇ ದುಷ್ಚಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ತಂದೆ-ತಾಯಿ ಎಚ್ಚೆತ್ತುಕೊಂಡು ಮಕ್ಕಳನ್ನು ಪೈಲ್ವಾನರಾಗಲು ಹುರಿದುಂಬಿಸಬೇಕು, ದೇಹ ದಂಡಿಸಿ ಗಟ್ಟಿಮುಟ್ಟಾಗಿ ಕುಸ್ತಿ ಪಟುವಾಗಲು ಮುಂದಾಗಬೇಕು ಅಂತಾರೆ ಕುಸ್ತಿ ಅಭಿಮಾನಿಗಳು.
ಈ ವೇಳೆ 250 ಜೋಡಿಗಳ ಮುಕ್ತ ನಿಕಾಲಿ ಪಂದ್ಯ ಆಡಿಸಲಾಯಿತು. ಕಟ್ಟುಮಸ್ತಾದ ಪೈಲ್ವಾನರು ಉಪಾಯದಿಂದ ಎದುರಾಳಿಗಳ ಜೊತೆ ಕಾದಾಡಿ ನೇರಿದಿದ್ದ ಜನರನ್ನ ಕುಣಿದು ಕುಪ್ಪಳಿಸುವಂತೆ ಮಾಡಿದರು. ಬಹಳ ಅಚ್ಚುಕಟ್ಟಾಗಿ ಪಂದ್ಯವನ್ನು ಆಯೋಜಕರಾದ ರಾಜು ಮಾರುತಿ ಪೆಜೋಳ್ಳಿ ಅವರು ಏರ್ಪಡಿಸಿ, ಕುಸ್ತಿಪಟುಗಳು ಶ್ರಮದ ಬಗ್ಗೆ ಮಾತಾಡಿದರು.
ಇದು ಗ್ರಾಮೀಣ ಕ್ರೀಡೆ ನಾವೇಲ್ಲರೂ ಸೇರಿ ಕಾಪಾಡಿ,ಉಳಿಸಿ ಬೆಳಸಬೇಕು ಮತ್ತು ನಶಿಸಿ ಹೋಗುತ್ತಿರುವ ಗರಡಿಮನೆಗಳ ಅಭಿವೃದ್ಧಿ ಗಾಗಿ ಸರ್ಕಾರ ಮುಂದಾಗಬೇಕು ಗರಡಿ ಮನೆಗಳು ಹೆಚ್ಚಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಒಟ್ಟಾರೆಯಾಗಿ ದೈಹಿಕ ಕಸರತ್ತು ತಾಕತ್ತು ತೋರಿಸುವ ರೈತರ ಹಾಗೂ ಯುವಕರ ಕ್ರೀಡೆಗಳಲ್ಲೊಂದಾದ ಕುಸ್ತಿ ಗರಡಿಮನಿಗಳು ಅಳವಿಂಚಿನಲ್ಲಿ ಇವೆ.ಗ್ರಾಮೀಣ ಭಾಗದಲ್ಲಿ ಇಂತಹ ಪಂದ್ಯಾಟಗಳನ್ನು ಮಾಡುವ ಮೂಲಕ ಕುಸ್ತಿ ಆಟವನ್ನ ಮತ್ತಷ್ಟು ಜೀವಂತವಾಗಿರಿಸಿದೆ.
ಭಾರತಕ್ಕೆ ಭೇಟಿ ನೀಡಿ ಕ್ಷಮೆ ಕೇಳಲಿದ್ದಾರೆ ಮಾಲ್ಡೀವ್ಸ್ ವಿದೇಶಾಂಗ ಸಚಿವರು




