Political News: ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಮುರ್ಷಿದಾಬಾದ್ನಲ್ಲಿ ನಡೆದ ಹಿಂಸಾಚಾರಕ್ಕೆ ಬಿಎಸ್ಎಫ್ ಹಾಗೂ ಬಿಜೆಪಿಯೇ ಕಾರಣವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರವಾಗಿ ಆರೋಪಿಸಿದ್ದಾರೆ. ಗಲಭೆಯ ಕುರಿತು ಮುಸ್ಲಿಂ ನಾಯಕರೊಂದಿಗಿನ ಸಭೆಯಲ್ಲಿ ಮಾತನಾಡಿರುವ ಅವರು, ಮುರ್ಷಿದಾಬಾದ್ನಲ್ಲಿ ನಡೆದ ಹಿಂಸಾಚಾರ ಪೂರ್ವನಿಯೋಜಿತವಾಗಿದೆ. ಇದರಲ್ಲಿ ಬಿಎಸ್ಎಫ್ ಭಾಗಿಯಾಗಿದೆ. ಅದರಲ್ಲೂ ಕೇಂದ್ರಿಯ ತನಿಖಾ ಸಂಸ್ಥೆಗಳೂ ಇದರಲ್ಲಿ ಕೂಡಿವೆ. ಆದರೆ ಈ ಹಿಂಸಾಚಾರದಲ್ಲಿ ಬಾಂಗ್ಲಾ ಭಾಗಿಯಾದೆ ಎಂದು ಹೇಳುವ ಕೇಂದ್ರ ಸರ್ಕಾರದ ಬಳಿಯೇ ಗಡಿಯ ರಕ್ಷಣೆಯ ಜವಾಬ್ದಾರಿಯಿದೆ. ಅದನ್ನು ರಾಜ್ಯ ಸರ್ಕಾರ ನಿಭಾಯಿಸುವುದಿಲ್ಲ ಎನ್ನುವ ಮೂಲಕ ದೀದಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ದೇಶಕ್ಕೆ ಹಾನಿ ಮಾಡ್ತಿದ್ದಾರೆ..!
ಇನ್ನೂ ಮುರ್ಷಿದಾಬಾದ್ನಲ್ಲಿ ನಡೆದಿರುವ ಗಲಭೆಯ ಹೊಣೆಯನ್ನು ಕೇಂದ್ರ ಸರ್ಕಾರವೇ ಹೊರಬೇಕಾಗುತ್ತದೆ. ವಕ್ಫ್ ತಿದ್ದುಪಡಿ ಕಾಯ್ದೆಯು ದೇಶವನ್ನು ಒಡೆಯುತ್ತದೆ. ಹೀಗಾಗಿ ಇದನ್ನು ಜಾರಿಗೆ ತರದಂತೆ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ನಿಯಂತ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ. ಅಲ್ಲದೆ ಅಮಿತ್ ಶಾ ಅವರು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ದೇಶಕ್ಕೆ ಹೆಚ್ಚು ಹಾನಿ ಮಾಡಿದ್ದಾರೆ ಎಂದು ಮಮತಾ ದೂರಿದ್ದಾರೆ. ಇನ್ನೂ ಅಮಿತ್ ಶಾ ಅವರ ಮೇಲೆ ನಿಗಾ ಇಡುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಾನು ವಿನಂತಿಸುತ್ತೇನೆ. ಅವರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ದೇಶಕ್ಕೆ ಹೆಚ್ಚಿನ ಹಾನಿ ಮಾಡುತ್ತಿದ್ದಾರೆ. ಅಮಿತ್ ಶಾ ಇಷ್ಟೊಂದು ಆತುರದಲ್ಲಿ ಇರೋದ್ಯಾಕೆ..? ಅವರು ಎಂದಿಗೂ ಪ್ರಧಾನಿಯಾಗುವುದಿಲ್ಲ. ಗೃಹ ಸಚಿವರು ಕೇಂದ್ರದ ಸಂಸ್ಥೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಪ್ರಧಾನಿ ನೋಡಬೇಕು ಅಲ್ಲದೆ ಅವರನ್ನು ನಿಯಂತ್ರಿಸಬೇಕು ಎಂದು ಬ್ಯಾನರ್ಜಿ ಕಿಡಿ ಕಾರಿದ್ದಾರೆ.
ದೇಶ ಒಡೆಯಬೇಡಿ, ಒಗ್ಗೂಡಿಸಿ..
ಅಲ್ಲದೆ ಬಿಜೆಪಿ ಪೋಷಿತ ಗೂಂಡಾಗಳು ಪಶ್ಚಿಮ ಬಂಗಾಳಕ್ಕೆ ಬಂದು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ. ಅವರು ಹಿಂದೂಗಳು ಮತ್ತು ಮುಸ್ಲಿಮರನ್ನು ಧ್ರುವೀಕರಿಸಲು ಹಾಗೂ ವಿಭಜಿಸಲು ಯತ್ನಿಸುತ್ತಿದ್ದಾರೆ. ದೇಶವನ್ನು ಹೋಳು ಮಾಡಬೇಡಿ, ಬದಲಿಗೆ ಅದನ್ನು ಒಗ್ಗೂಡಿಸಿ. ಹೊಸದಾಗಿ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ದೌರ್ಜನ್ಯ ಮತ್ತು ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿದೆ. ಕೇಂದ್ರವು ಅದನ್ನು ಅಂಗೀಕರಿಸುವ ತುರ್ತುಸ್ಥಿತಿ ಏನಿತ್ತು..? ಅದನ್ನು ಸದ್ಯದ ರೂಪದಲ್ಲಿ ಜಾರಿಗೆ ತರದಂತೆ ಪ್ರಧಾನಿಯವರನ್ನು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ. ಪ್ರತಿಪಕ್ಷಗಳು ಆರೋಪಿಸಿದಂತೆ ವಕ್ಫ್ ಸಂಬಂಧಿತ ಹಿಂಸಾಚಾರದ ಹಿಂದೆ ಟಿಎಂಸಿ ಕೈವಾಡವಿದ್ದರೆ, ನಮ್ಮ ಪಕ್ಷದ ನಾಯಕರ ಮನೆಗಳ ಮೇಲೆ ಏಕೆ ದಾಳಿ ಮಾಡಲಾಯಿತು?. ರಾಮನವಮಿಯ ಸಂದರ್ಭದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಬಿಜೆಪಿ ನಡೆಸಿದ್ದ ಪ್ರಯತ್ನಗಳು ವಿಫಲವಾಗಿವೆ. ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ದೀದಿ ಪ್ರತಿಪಾದಿಸಿದ್ದಾರೆ.
ಯೋಗಿ ಬಿಗ್ಗೆಸ್ಟ್ ಭೋಗಿ…
ಯೋಗಿ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿದ್ದಾರೆ. ಅವರು ಅತಿದೊಡ್ಡ ಭೋಗಿ ಎಂದು ದೀದಿ ಜರಿದಿದ್ದಾರೆ. ಅಲ್ಲದೆ ಮಹಾಕುಂಭದಲ್ಲಿ ಅನೇಕ ಜೀವಗಳು ಬಲಿಯಾಗಿವೆ. ಉತ್ತರ ಪ್ರದೇಶದಲ್ಲಿ ನಡೆದ ಎನ್ಕೌಂಟರ್ಗಳಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಯೋಗಿ ಜನರಿಗೆ ರ್ಯಾಲಿಗಳನ್ನು ನಡೆಸಲು ಬಿಡುವುದಿಲ್ಲ. ಬಂಗಾಳದಲ್ಲಿ ಸಾಕಷ್ಟು ಸ್ವಾತಂತ್ರ್ಯವಿದೆ ಎನ್ನುವ ಮೂಲಕ ಮುರ್ಷಿದಾಬಾದ್ ಗಲಭೆಯ ಕುರಿತು ಟೀಕಿಸಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಮುರ್ಷಿದಾಬಾದ್ನಲ್ಲಿ ನಡೆದ ಹಿಂಸಾಚಾರದ ಕುರಿತು ಮಮತಾ ಬ್ಯಾನರ್ಜಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದ, ಯೋಗಿ ಆದಿತ್ಯನಾಥ್, ಬಂಗಾಳ ಹೊತ್ತಿ ಉರಿಯುತ್ತಿದೆ, ಆದರೆ ಅಲ್ಲಿನ ಮುಖ್ಯಮಂತ್ರಿ ಮೌನವಾಗಿದ್ದಾರೆ. ದೊಂಬಿಕೋರರಿಗೆ ದಂಡವೊಂದೇ ಚಿಕಿತ್ಸೆ. ಗಲಭೆಕೋರರನ್ನು ಶಾಂತಿ ರಾಯಭಾರಿಗಳು ಎಂದು ಕರೆಯುತ್ತಿದ್ದಾರೆ. ಲಾತೋಂ ಕೆ ಭೂತ್ ಬಾತೋಂ ಸೆ ಕಹಾಂ ಮನ್ನೆ ವಾಲೇ ಹೈ ಅಂದರೆ ಹೊಡೆತದ ಭಾಷೆಯನ್ನು ಮಾತ್ರ ಅರ್ಥಮಾಡಿಕೊಳ್ಳುವವರಿಗೆ ಮಾತಲ್ಲಿ ಹೇಳುವುದು ಅರ್ಥವಾಗುವುದಿಲ್ಲ ಎಂದು ಅವರು ಹೇಳಿದ್ದರು. ಜಾತ್ಯತೀತತೆಯ ಹೆಸರಿನಲ್ಲಿ, ಅವರು ಗಲಭೆಕೋರರಿಗೆ ಸ್ವಾತಂತ್ರ್ಯ ನೀಡಿದ್ದಾರೆ. ಆದರು ಸರ್ಕಾರ ಮೌನವಾಗಿದೆ. ಇಂತಹ ಅರಾಜಕತೆಯನ್ನು ನಿಯಂತ್ರಿಸಬೇಕು ಎಂದು ಯೋಗಿ ಮಮತಾ ಬ್ಯಾನರ್ಜಿ ಸರ್ಕಾರದ ನಿಲುವನ್ನು ಟೀಕಿಸಿದ್ದರು.