ಬೆಳಗಾವಿ: ಹುಟ್ಟಹಬ್ಬ ಪ್ರಯುಕ್ತ ಪೊಲೀಸ್ ಅಧಿಕಾರಿಗಳು ಶಾಸಕರೊಬ್ಬರ ಮೇಲೆ ಹೂಮಳೆ ಸುರಿಸಿದ ಬಗ್ಗೆ ವಿಡಿಯೋವೊಂದು ವೈರಲ್ ಆಗಿದ್ದು ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಬೆಳಗಾವಿಯ ಜಿಲ್ಲೆಯ ಕಿತ್ತೂರು ತಾಲೂಕಿನ ಕಿತ್ತೂರು ಮತಕ್ಷೇತ್ರದ ಶಾಸಕ ಮಹಾಂತೇಶ್ ದೊಡ್ಡಗೌಡರ ಅವರ ಹುಟ್ಟ ಹಬ್ಬದ ನಿಮಿತ್ತ ಪೋಲಿಸ ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಕೇಕ್ ಕತ್ತರಿಸಿದ್ರು. ಅಲ್ಲದೆ ಶಾಸಕ ಮಹಾಂತೇಶ್ ದಂಪತಿ ಮೇಲೆ ಹೂವಿನ ಸುರಿಮಳೆ ಸುರಿಸಿದ್ರು.
ಹೌದು,ಬೈಲಹೊಂಗಲ ಡಿಎಸ್ಪಿ, ಸಿಪಿಐ, ನೇಸರಗಿ ಪಿ.ಎಸ್.ಐ ಹಾಗೂ ಎ.ಎಸ್.ಐ ಶಾಸಕರ ಹುಟ್ಟುಹಬ್ಬವನ್ನಈ ರೀತಿ ಆಚರಿಸಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೆ ಪೊಲೀಸ್ ಅಧಿಕಾರಿಗಳೇ ಜನಪ್ರತಿನಿಧಿಗಳ ಗುಲಾಮರಂತೆ ವರ್ತಿಸಿದ್ದಾರೆ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರ್ತಿದೆ. .
ಇನ್ನು ಪೊಲೀಸರ ಈ ಪುಷ್ಪವೃಷ್ಠಿಯ ವೈರಲ್ ವಿಡಿಯೋ ಕುರಿತಾಗಿ ಪ್ರತಿಕ್ರಿಯಿಸಿರೋ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಈ ಕುರಿತು ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುತ್ತೆ ಅಂತ ತಿಳಿಸಿದ್ದಾರೆ.