Saturday, July 27, 2024

Latest Posts

ಕರ್ನಾಟಕದಲ್ಲಿ ಬಿಜೆಪಿ ಸ್ತ್ರೀಪೀಡಕರ ಜೊತೆ ಕೈಜೋಡಿಸಿದೆ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ

- Advertisement -

Political News: ಸಿಎಂ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಹಿಳೆಯರು ಎಚ್ಚರಿಕೆಯಿಂದ ಇರಿ ಎಂದು ಟ್ವೀಟ್ ಮಾಡಿದ್ದಾರೆ.

ನನ್ನ ಪ್ರೀತಿಯ ತಾಯಂದಿರೇ ಮತ್ತು ಅಕ್ಕ-ತಂಗಿಯರೇ, ಹದಿನೆಂಟನೇ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರವಾಗಲಿರುವುದು ರಾಜಕೀಯ ಪಕ್ಷಗಳ ಸೋಲು-ಗೆಲುವುಗಳು ಮಾತ್ರ ಅಲ್ಲ, ಈ ಚುನಾವಣೆ ಮಹಿಳೆಯರ ಪರವಾದ ಸರ್ಕಾರದ ಕಾರ್ಯಕ್ರಮಗಳ ಸೋಲು-ಗೆಲುವನ್ನು ಕೂಡಾ ನಿರ್ಧರಿಸಲಿದೆ. ‘‘ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ’’ ಎಂದು ಖಡಾಖಂಡಿತವಾಗಿ ಸಾರಿದ ಮನುಶಾಸ್ತ್ರವನ್ನು ನಂಬಿರುವ ಭಾರತೀಯ ಜನತಾ ಪಕ್ಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಸ್ಥಾನಮಾನ ನೀಡಬೇಕೆಂದು ಸಾರಿದ ಸಂವಿಧಾನಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷಗಳ ನಡುವೆ ಇಂದಿನ ಮಹಿಳೆಯರು ಆಯ್ಕೆ ಮಾಡಬೇಕಾಗಿದೆ.

ಭಾರತೀಯ ಜನತಾ ಪಕ್ಷ ಮತ್ತು ಅದರ ಮಾತೃಸಂಸ್ಥೆಯಾದ ಆರ್ ಎಸ್ ಎಸ್ ನ ಸಿದ್ಧಾಂತ ಮತ್ತು ನಡವಳಿಕೆ ಸ್ಪಷ್ಟವಾಗಿ ಮಹಿಳಾ ವಿರೋಧಿಯಾದುದು. ಗುಜರಾತ್ ನಿಂದ ಮಣಿಪುರದ ವರೆಗೆ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ಕರ್ನಾಟಕದಲ್ಲಿ ಸ್ತ್ರೀಪೀಡಕರ ಜೊತೆಗೆ ಬಿಜೆಪಿ ಕೈಜೋಡಿಸಿರುವುದು ಇತ್ತೀಚಿನ ಉದಾಹರಣೆ. ಕಾಯಾ ವಾಚಾ ಮನಸಾ ಬಿಜೆಪಿ ಮಹಿಳಾ ವಿರೋಧಿ ಪಕ್ಷ.

ನಮ್ಮ ಸರ್ಕಾರ ‘‘ಗೃಹಲಕ್ಷ್ಮಿ’’ ಮತ್ತು ‘‘ಶಕ್ತಿ’’ ಯೋಜನೆಗಳನ್ನು ಶುರುಮಾಡಿದ ದಿನದಿಂದಲೂ ಬಿಜೆಪಿ ನಾಯಕರು ಇದರ ವಿರುದ್ದ ಅಪಪ್ರಚಾರದ ಆಂದೋಲವನ್ನು ಪ್ರಾರಂಭಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗುತ್ತಿದೆ ಎಂದು ಕೆಲವರು ಆರೋಪಿಸಿದರೆ ಇನ್ನು ಕೆಲವರು ಇನ್ನೂ ಮುಂದಕ್ಕೆ ಹೋಗಿ ಈ ರೀತಿಯ ನೆರವು ನೀಡಿದರೆ ಹೆಣ್ಣುಮಕ್ಕಳು ಮನೆಬಿಟ್ಟು ಹಾದಿ ತಪ್ಪುತ್ತಾರೆ ಎಂದು ತೀರಾ ಕ್ಷುಲ್ಲಕತನದ ಆರೋಪ ಮಾಡಿದ್ದಾರೆ.

ಬಿಜೆಪಿ ನಾಯಕರ ವಿರೋಧಕ್ಕೆ ಮುಖ್ಯ ಕಾರಣ ಮಹಿಳೆಯರ ಸಬಲೀಕರಣವಾಗಬಾರದೆಂಬ ದುಷ್ಟ ಉದ್ದೇಶ. ಮಹಿಳಾ ಸಬಲೀಕರಣವನ್ನು ಕಾಂಗ್ರೆಸ್ ಪಕ್ಷ ಎಂದೂ ರಾಜಕೀಯ ಕಾರ್ಯಕ್ರಮವಾಗಿ ನೋಡಿಲ್ಲ, ಅದು ನಮ್ಮ ಪಾಲಿಗೆ ಸಾಮಾಜಿಕ ಜವಾಬ್ದಾರಿ. ನಮ್ಮ ಪಕ್ಷ ಮತ್ತು ಸರ್ಕಾರ ಮಹಿಳಾ ಪರವಾಗಿ ನಿಂತಿರುವುದಕ್ಕೆ 2013-18ರ ಅವಧಿಯ ನಮ್ಮ ಹಳೆಯ ಸರ್ಕಾರ ಮತ್ತು ಕಳೆದ ಹತ್ತು ತಿಂಗಳ ಅವಧಿಯ ನಮ್ಮ ಹೊಸ ಸರ್ಕಾರದ ಸಾಧನೆಗಳು ಸಾಕ್ಷಿ.

ಐದು ವರ್ಷಗಳ ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೆವು. ಸ್ನಾತಕೋತ್ತರ ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಸ್ತ್ರೀ ಶಕ್ತಿ ಸಂಘಗಳ ಆವರ್ತ ನಿಧಿ 5000 ರೂ.ಗಳಿಂದ 25 ಸಾವಿರಕ್ಕೆ ಏರಿಕೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡುವ ಮಾತೃಪೂರ್ಣ, ತಾಯಿ ಮತ್ತು ಮಗುವಿಗಾಗಿಯೇ 20 ವಿಶೇಷ ಆಸ್ಪತ್ರೆಗಳ ಪ್ರಾರಂಭ, ಮಹಿಳಾ ಉದ್ಯಮಿಗಳಿಗೆ ಆರು ಪ್ರತ್ಯೇಕ ಕೈಗಾರಿಕಾ ಪಾರ್ಕ್… ಹೀಗೆ ಮಹಿಳೆಯರ ಹಿತವನ್ನೇ ಗುರಿಯಾಗಿಟ್ಟುಕೊಂಡು ಜಾರಿಗೊಳಿಸಿರುವ ಯೋಜನೆಗಳ ಫಲವನ್ನು ನೀವು ಪಡೆದಿದ್ದೀರಿ.

ನಮ್ಮ ಈಗಿನ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳು ಸೇರಿದಂತೆ ಒಟ್ಟು ಯೋಜನೆಗಳಲ್ಲಿ ಮಹಿಳೆಯರ ಅಭಿವೃದ್ದಿಗೆ ಆದ್ಯತೆ ನೀಡಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ 1.21 ಕೋಟಿ ಮನೆ ಯಜಮಾನಿಗೆ ತಿಂಗಳಿಗೆ ರೂ.2000 ಜಮೆ ಆಗುತ್ತಿದೆ. ಶಕ್ತಿ ಯೋಜನೆಯಡಿ ಇಲ್ಲಿಯ ವರೆಗೆ 201 ಕೋಟಿಗೂ ಅಧಿಕ ಬಾರಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಗ್ರಾಮೀಣ ಮಹಿಳೆಯರ ಮಕ್ಕಳ ಪಾಲನೆ ಮತ್ತು ಪೋಷಣೆಗೆ ಅನುಕೂಲವಾಗಲಿ ಎಂಬ ಉದ್ದೇಶದೊಂದಿಗೆ ರಾಜ್ಯದಲ್ಲಿ 4,000 ಕೂಸಿನ ಮನೆಗಳ ಸ್ಥಾಪಿಸಿದ್ದೇವೆ, ಶುಚಿ ಯೋಜನೆಯಡಿ 19,27,355 ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ನೀಡಿದ್ದೇವೆ. ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರೂ.86,423 ಕೋಟಿ ಅನುದಾನ ಒದಗಿಸಲಾಗಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಯಜಮಾನಿಗೆ ಪ್ರತಿವರ್ಷ ಒಂದು ಲಕ್ಷ ರೂಪಾಯಿ ನೆರವು ನೀಡುವ ಮಹಾಲಕ್ಷ್ಮಿ’’ ಯೋಜನೆಯನ್ನು ಪ್ರಣಾಳಿಕೆಯಲ್ಲಿ ಘೋಷಿಸಿದ್ದೇವೆ. ಇದರ ಜೊತೆಯಲ್ಲಿ ದೇಶದ ಎಲ್ಲ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ, ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಊಟದ ಕಾರ್ಯಕರ್ತೆಯರ ವೇತನ ದ್ವಿಗುಣ, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸಾವಿತ್ರಿ ಬಾಯಿ ಪುಲೆ ಅವರ ಹೆಸರಲ್ಲಿ ಕನಿಷ್ಠ ಒಂದು ಮಹಿಳಾ ಹಾಸ್ಟೆಲ್ ಸ್ಥಾಪನೆಯೂ ಸೇರಿದಂತೆ ಪ್ರಣಾಳಿಕೆಯಲ್ಲಿ ನೀಡಿರುವ ಮಹಿಳಾ ಪರ ಯೋಜನೆಗಳನ್ನೆಲ್ಲವನ್ನೂ ಖಂಡಿತ ಜಾರಿಗೆ ತರಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ಸಿನವರು ಚುನಾವಣಾ ಸಮಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತೆ ನಾಪತ್ತೆಯಾಗುತ್ತಾರೆ: ಬಿ.ವೈ.ವಿಜಯೇಂದ್ರ

ಧಾರವಾಡದಲ್ಲಿ ಪಾದಯಾತ್ರೆ ನಡೆಸಿ, ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ

ಶಿಕ್ಷಕಿ ಶಾಲೆಗೆ ಲೇಟಾಗಿ ಬಂದರೆಂದು ಹಲ್ಲೆ ಮಾಡಿ ಬಟ್ಟೆ ಹರಿದ ಪ್ರಾಂಶುಪಾಲರು

- Advertisement -

Latest Posts

Don't Miss