ಅಪರಿಚಿತ ವಾಹನಕ್ಕೆ ಸಿಲುಕಿ ಚಿರತೆ ಸಾವು

ತುಮಕೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ವರದಿಯಾಗಿದೆ.

ಗುಬ್ಬಿ ತಾಲೂಕಿನ ಪತ್ರೆ ಮತ್ತಿಘಟ್ಟದ ಬಳಿ ಚಿರತೆಗೆ ಅಪರಿಚಿತ ವಾಹನ ಡಿಕ್ಕಿಯಾಗಿದೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಇನ್ನು ಸಾವನ್ನಪ್ಪಿದ್ದ ಚಿರತೆ ಸುಮಾರು 8 ವರ್ಷ ಪ್ರಾಯದ್ದೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಿಘಟ್ಟದ ಬಳಿಯ ಮೇಲ್ಸೇತುವೆ ಬಳಿ ಬಿದ್ದಿದ್ದ ಚಿರತೆಯ ಕಳೇಬರವನ್ನ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ತೆಗೆದುಕೊಂಡು ಅಂತ್ಯಕ್ರಿಯೆ ನಡೆಸಿದ್ದಾರೆ. ಇನ್ನು ಸುದ್ದಿ ತಿಳಿದ ಸ್ಥಳೀಯರು ಚಿರತೆಯನ್ನು ನೋಡಲು ಮುಗಿಬಿದ್ದರು.

 ಇನ್ನು ಕಾಡಿನಲ್ಲಿ ಆಹಾರದ ಕೊರತೆಯುಂಟಾದಾಗ  ಸಹಜವಾಗಿಯೇ ಹೀಗೆ ಕಾಡು ಪ್ರಾಣಿಗಳು ನಾಡಿನತ್ತ ಮುಖಮಾಡುತ್ತವೆ.  ಇದೇ ರೀತಿ ನಾಡಿನತ್ತ ಹೆಜ್ಜೆಯಿಟ್ಟಿದ್ದ ಚಿರತೆ ದುರಾದೃಷ್ಟವಶಾತ್ ಆಪಘಾತಕ್ಕೀಡಾಗಿ ಮೃತಪಟ್ಟಿದೆ.

ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ-ತುಮಕೂರು

About The Author