ಬೆಂಗಳೂರು : ರಾಜ್ಯದಲ್ಲಿ ಜ.1ರಿಂದ ಈವರೆಗೆ 19 ವರ್ಷದೊಳಗಿನ 8126 ಮಕ್ಕಳಿಗೆ ಕರೊನಾ ಸೋಂಕು ದೃಢಪಟ್ಟಿದೆ. ಕೋವಿಡ್ ಮೊದಲ ಮತ್ತು 2ನೇ ಅಲೆಯ ಅವಧಿಗಿಂತ 3ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಳವಾಗಿದೆ. ಕೊರೊನಾ ಸೋಂಕು ಈವರೆಗೆ ಲಸಿಕೆ ಪಡೆಯದ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕೆಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ತಿಳಿಸಿದ್ದು, ಸಾಧ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ರಾಜ್ಯದಲ್ಲಿ 3ನೇ ಅಲೆಯ ಸೋಂಕು ಉಲ್ಬಣಗೊಳ್ಳುತ್ತಿದ್ದಂತೆ 1 ರಿಂದ 9ನೇ ತರಗತಿಯ ಮಕ್ಕಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ. ಆದರೂ ಮಕ್ಕಳಲ್ಲಿಯೂ ಸೋಂಕು ಏರಿಕೆ ಆಗುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಜ.1ರಂದು ಕೇವಲ 120 ಮಕ್ಕಳಿಗೆ ದೃಢಪಟ್ಟಿದ್ದ ಸೋಂಕು, ಜ.10ರಂದು 1,600 ಮಕ್ಕಳಲ್ಲಿ ಕಂಡುಬಂದಿದೆ.
ಪ್ರತಿನಿತ್ಯ ರಾಜ್ಯದಲ್ಲಿ ವರದಿಯಾಗುವ ಒಟ್ಟಾರೆ ಕೋವಿಡ್ ಪ್ರಕರಣಗಳ ಪೈಕಿ ರಾಜಧಾನಿಯಲ್ಲಿಯೇ ಶೇ.85 ಪ್ರಕರಣ ವರದಿ ಆಗುತ್ತಿವೆ. ಈ ಪೈಕಿ 19 ವರ್ಷದೊಳಗಿನ ಮಕ್ಕಳಿಗೆ ದೃಢವಾಗುವ ಪ್ರಕರಣಗಳ ಪೈಕಿ ಶೇ.90 ಬೆಂಗಳೂರು ನಗರ ಜಿಲ್ಲೆಯ ಮಕ್ಕಳಾಗಿದ್ದಾರೆ. ಇಡೀ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸೋಂಕಿತ ಮಕ್ಕಳ ಚಿಕಿತ್ಸೆಗೆ ಐಸಿಯು (ICU), ಆಕ್ಸಿಜನ್ (Oxygen) ಹಾಗೂ ಜನರಲ್ ಬೆಡ್ ಸೇರಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿದೆ. 3ನೇ ಅಲೆ ಕಾಣಿಸಿಕೊಂಡು ನಿತ್ಯ 500 ರಿಂದ 1,200 ಮಕ್ಕಳಿಗೆ ಸೋಂಕು ಪತ್ತೆ ಆಗುತ್ತಿದ್ದರೂ ಕೋವಿಡ್ ಆರೈಕೆ ಕೇಂದ್ರ ಆರಂಭಿಸದೆ ಬಿಬಿಎಂಪಿ ನಿರ್ಲಕ್ಷ್ಯವಹಿಸಿದೆ.