Wednesday, August 20, 2025

Latest Posts

Tamil nadu politics: ಸುಳ್ಳು ಹೇಳಿದ್ರಾ ಅಮಿತ್ ಶಾ..? : ಉತ್ಸಾಹವಿದ್ದ ದೋಸ್ತಿಯಲ್ಲಿ ಬಿರುಕು..!

- Advertisement -

Political News: ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಬಗ್ಗು ಬಡೆಯುವ ಮೂಲಕ ಅಲ್ಲಿಯೂ ಎನ್‌ಡಿಎ ಸರ್ಕಾರವನ್ನು ರಚಿಸುವ ಇರಾದೆಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಶಾಕ್‌ ನೀಡಿದ್ದಾರೆ. ಇನ್ನೂ ಕಳೆದ ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿಗೆ ಭೇಟಿ ನೀಡಿದ್ದ ಅಮಿತ್‌ ಶಾ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದಾಗಿ ಘೋಷಿಸಿದ್ದರು. ಇದಕ್ಕೆ ಪಕ್ಷದಲ್ಲಿದ್ದ ಎಡಪ್ಪಾಡಿ ಪಳನಿಸ್ವಾಮಿ ನಗುತ್ತಲೇ ತಲೆಯಾಡಿಸಿದ್ದರು. ಆದರೆ ಇದಾದ ಕೆಲವೇ ದಿನಗಳಲ್ಲಿ ಇದೀಗ ಉಲ್ಟಾ ಹೊಡೆದಿರುವ ಅವರು ಮೈತ್ರಿ ಚುನಾವಣೆಗೆ ಮಾತ್ರ ಎಂದು ಅಚ್ಚರಿಯ ಹೇಳಿಕೆ ನೀಡುವ ಮೂಲಕ ಅಮಿತ್‌ ಶಾ ಕನಸಿಗೆ ತಣ್ಣೀರೆರಚಿದ್ದಾರೆ.

ಈ ಕುರಿತು ತಮಿಳುನಾಡಿನಲ್ಲಿ ಮಾತನಾಡಿರುವ ಪಳನಿಸ್ವಾಮಿ, 2026ರ ವಿಧಾನಸಭಾ ಚುನಾವಣೆಯ ನಂತರ ತಮಿಳುನಾಡಿನಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. 2026ಕ್ಕೆ ಸಮ್ಮಿಶ್ರ ಸರ್ಕಾರ ಎಂದು ಅಮಿತ್ ಶಾ ಹೇಳಿಲ್ಲ. ನೀವು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದೀರಿ ಮತ್ತು ತಂತ್ರಗಳನ್ನು ಹೆಣೆಯಲು ಪ್ರಯತ್ನಿಸುತ್ತಿದ್ದೀರಿ. ದಯವಿಟ್ಟು ಅದನ್ನು ನಿಲ್ಲಿಸಿ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ. ಎರಡೂ ಪಕ್ಷಗಳು ಒಟ್ಟಾಗಿ ಹೋರಾಡುತ್ತವೆ ಮತ್ತು ಚುನಾವಣೆಯ ನಂತರ ಸರ್ಕಾರ ರಚಿಸುತ್ತವೆ ಎಂದು ಶಾ ಹೇಳಿದ್ದಾರೆ. ಆದರೆ ಅವರು ಸಮ್ಮಿಶ್ರ ಸರ್ಕಾರವೆಂದು ಹೇಳಿಲ್ಲ ಎಂದು ಶಾಕಿಂಗ್ ಮಾತುಗಳನ್ನಾಡಿದ್ದಾರೆ. ಡಿಎಂಕೆ ಸೋಲಿಸುವುದಕ್ಕಷ್ಟೇ ನಮ್ಮ ಮೈತ್ರಿ. ಸರ್ಕಾರದಲ್ಲಿ ಬಿಜೆಪಿ ಪಾಲು ಇರುವುದಾಗಿ ಅವರು ಎಂದಿಗೂ ಹೇಳಿಲ್ಲ. ತಮಿಳುನಾಡಿನಲ್ಲಿ ಬಿಜೆಪಿಯೊಂದಿಗೆ ತಮ್ಮ ಪಕ್ಷದ ಮೈತ್ರಿ ಚುನಾವಣೆಗೆ ಮಾತ್ರ ಸೀಮಿತ. ಗೆಲುವು ಸಾಧಿಸಿದರೆ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ ಎನ್ನುವ ಮೂಲಕ ಬಿಜೆಪಿಯನ್ನು ನಡು ನೀರಲ್ಲಿ ಕೈಬಿಡುವ ಯೋಚನೆಯಲ್ಲಿರುವಂತೆ ಪಳನಿಸ್ವಾಮಿ ಅವರ ಹೇಳಿಕೆ ತಮಿಳುನಾಡಿನ ಬಿಜೆಪಿ ನಾಯಕರು ಹಾಗೂ ಕೇಸರಿ ಹೈಕಮಾಂಡ್‌ಗೂ ಹೊಸ ಟೆನ್ಷನ್‌ ತಂದಿಟ್ಟಿದೆ.

ಇನ್ನೂ ಪ್ರಮುಖವಾಗಿ ಡಿಎಂಕೆಯನ್ನು ಹೇಗಾದರೂ ಮಾಡಿ ಕಟ್ಟಿ ಹಾಕಬೇಕು. ಜೊತೆಗೆ ದಕ್ಷಿಣ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ತಮಿಳುನಾಡಿನಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಿಕೊಳ್ಳಬೇಕು ಎಂಬ ಮಹಾತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದ ಬಿಜೆಪಿಗೆ ಈ ಹೇಳಿಕೆಯು ದೊಡ್ಡ ಹೊಡೆತ ನೀಡಲಿದೆ. ಅಲ್ಲದೆ ಜೊತೆಯಾಗಿ ಹೋರಾಟ ಮಾಡುವುದಾಗಿ ಒಪ್ಪಿಕೊಂಡಿದ್ದ ಪಳನಿಸ್ವಾಮಿ ದಿಢೀರ್‌ ತಮ್ಮ ಹೇಳಿಕೆಯಲ್ಲಿ ಯೂಟರ್ನ್‌ ಹೊಡೆದಿರುವುದು ಬಿಜೆಪಿಯ ಪಾಲಿಗೆ ಮರ್ಮಾಘಾತವೆಂದೇ ಹೇಳಲಾಗುತ್ತಿದೆ. ಯಾಕೆಂದರೆ ಮೋದಿ ಸರ್ಕಾರದ ಪ್ರತಿಯೊಂದು ನೀತಿ ಹಾಗೂ ಯೋಜನೆಗಳನ್ನು ನಿರಂತರವಾಗಿ ಟೀಕಿಸುತ್ತ ಅವುಗಳನ್ನು ವಿರೋಧಿಸುತ್ತಲೇ ಬರುತ್ತಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಮಣಿಸಲು ಈ ಚುನಾವಣೆಯು ಮೋದಿ ಹಾಗೂ ಅಮಿತ್‌ ಶಾ ಜೋಡಿಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಮೈತ್ರಿಯ ಲೆಕ್ಕಾಚಾರವನ್ನು ಬಿಜೆಪಿ ಹೈಕಮಾಂಡ್‌ ಹಾಕಿತ್ತು. ಆದರೆ ಇದೀಗ ಆರಂಭದಲ್ಲೇ ಇದಕ್ಕೆ ವಿಘ್ನ ಎದುರಾದಂತೆ ಪಳನಿಸ್ವಾಮಿ ಹೇಳಿಕೆ ನೀಡಿರುವುದು, ಉತ್ಸಾಹದಲ್ಲೇ ಡಿಎಂಕೆ ಮಕಾಡೆ ಮಲಗಿಸುವ ಉಮೇದಿನಲ್ಲಿದ್ದ ಬಿಜೆಪಿಗೆ ನಿರಾಸೆಯಾದಂತೆ ಕಂಡು ಬರುತ್ತಿದೆ. ಈ ಹೇಳಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ತಮಿಳುನಾಡು ಬಿಜೆಪಿ ಘಟಕವು ಈ ವಿಚಾರವನ್ನು ಅಮಿತ್‌ ಶಾ ಹೆಗಲಿಗೆ ಏರಿಸಿದೆ. ಅಂದಹಾಗೆ ಪಳನಿಸ್ವಾಮಿ ಮಾತನ್ನು ಬಿಜೆಪಿ ಹೈಕಮಾಂಡ್‌ ಯಾವ ರೀತಿ ಸ್ವೀಕರಿಸಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ.

ಅಮಿತ್‌ ಶಾ ಏನು ಹೇಳಿದ್ದರು..?

ಕಳೆದ ವಾರವಷ್ಟೇ ತಮಿಳುನಾಡಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿಯನ್ನು ಘೋಷಿಸಿದ್ದರು. ಅಲ್ಲದೆ ಈ ಮೈತ್ರಿಯು ಇನ್ನು ಮುಂದೆ ಶಾಶ್ವತವಾಗಿ ಉಳಿಯಲಿದೆ ಎಂತಲೂ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಅಲ್ಲದೆ ತಮಿಳುನಾಡಿನ ಸರ್ಕಾರದಲ್ಲಿ ಅಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ. ಇಲ್ಲಿನ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ ಇದರ ವಿರುದ್ಧ ನಮ್ಮ ಗಟ್ಟಿಯಾದ ಧ್ವನಿ ಮೊಳಗಲಿದೆ. ಇನ್ನೂ ರಾಜ್ಯದಲ್ಲಿ 2026ರ ತಮಿಳುನಾಡು ಮುಖ್ಯಮಂತ್ರಿಯಾಗಿ ಎನ್‌ಡಿಎ ಮೈತ್ರಿಕೂಟದ ಎಡಪ್ಪಾಡಿ ಪಳನಿಸ್ವಾಮಿಯವರೇ ಆಗಿರಲಿದ್ದಾರೆ. ನಾವು ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಅವರ ನೇತೃತ್ವದಲ್ಲಿಯೇ ಎದುರಿಸಬೇಕು, ತಮಿಳುನಾಡಿಗೆ ಪಳನಿಸ್ವಾಮಿ ನಾಯಕರಾದರೆ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. 1998ರಿಂದ ಎಐಎಡಿಎಂಕೆ ಮತ್ತು ಬಿಜೆಪಿ ಎನ್‌ಡಿಎ ಮೈತ್ರಿ ಕೂಟದ ಭಾಗವಾಗಿದ್ದು, ಎಐಎಡಿಎಂಕೆ ನಾಯಕಿ ಜಯಲಲಿತಾ ಮತ್ತು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಒಟ್ಟಿಗೆ ಕೆಲಸ ಮಾಡಿದ್ದಾರೆ ಎಂಬುದನ್ನು ಅಮಿತ್‌ ಶಾ ಉಲ್ಲೇಖಿಸಿದ್ದರು. ತಮಿಳುನಾಡಿನಲ್ಲಿ ಎನ್‌ಡಿಎ ಪೂರ್ಣ ಬಹುಮತ ಪಡೆದು ಸರ್ಕಾರ ರಚಿಸುತ್ತದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದರು.

ಇನ್ನೂ ತಮಿಳುನಾಡಿನ ಒಳಿತಿಗಾಗಿ, ಇಲ್ಲಿನ ಜನರ ಕಲ್ಯಾಣಕ್ಕಾಗಿ ಎಐಎಡಿಎಂಕೆ ನಮ್ಮ ಎದುರು ಯಾವುದೇ ಕಂಡೀಷನ್‌ ಇಟ್ಟಿಲ್ಲ. ಬೇಷರತ್ತಾಗಿ ನಮ್ಮ ಮೈತ್ರಿಗೆ ಒಪ್ಪಿಕೊಂಡಿದೆ. ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆಯ ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು, ದಲಿತರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನೋಡಿಕೊಂಡೇ ಜನರು ಮತ ಚಲಾಯಿಸುತ್ತಾರೆ ಎಂಬ ವಿಶ್ವಾಸವಿದೆ. ಇಲ್ಲಿನ ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರವು 39,000 ಕೋಟಿ ರೂಪಾಯಿಗಳ ಮದ್ಯ ಹಗರಣ, ಮರಳು ಗಣಿಗಾರಿಕೆ ಹಗರಣ, ಇಂಧನ ಹಗರಣ, ಎಲ್‌ಸಿಒಟಿ ಹಗರಣ, ಸಾರಿಗೆ ಹಗರಣ, ಹಣ ವರ್ಗಾವಣೆ ಹಗರಣ ಸೇರಿದಂತೆ ಅನೇಕ ಹಗರಣಗಳಲ್ಲಿ ತೊಡಗಿಕೊಂಡಿದೆ. ಈ ಎಲ್ಲವುಗಳ ಕುರಿತು ತಮಿಳುನಾಡಿನ ಜನರು ಉದಯನಿಧಿ ಮತ್ತು ಸ್ಟಾಲಿನ್ ಅವರಿಂದ ಉತ್ತರಗಳನ್ನು ಬಯಸುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸುವ ಮೂಲಕ ಅಮಿತ್‌ ಶಾ ಡಿಎಂಕೆ ವಿರೋಧಿ ಪಳನಿಸ್ವಾಮಿ ಟೀಂ ಮೆಚ್ಚಿಸುವ ಕೆಲಸ ಮಾಡಿದ್ದರು. ಆದರೆ ಅದಾದ ನಾಲ್ಕರಿಂದ ಐದೇ ದಿನಗಳಲ್ಲಿ ಪಳನಿಸ್ವಾಮಿ ಈ ರೀತಿಯ ಶಾಕಿಂಗ್‌ ಹೇಳಿಕೆ ನೀಡಿರುವುದು ತಮಿಳುನಾಡು ರಾಜಕೀಯದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.

- Advertisement -

Latest Posts

Don't Miss