Political News: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರಾಗಿರುವ ಸಾಯಿ ಪ್ರಸಾದ್ ಅವರನ್ನು ಸಾಕ್ಷಿದಾರರಾನ್ನಾಗಿ, ಪೊಲೀಸರು ವಿಚಾರಣೆಗೆ ಕರೆಸಿದ್ದಾರೆ. ಈ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಟ್ವೀಟ್ ಮಾಡಿ ಹರಿಹಾಯ್ದಿತ್ತು. ಇದಕ್ಕೆ ಮಾಜಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯಿಸಿದ್ದು, ಸಾಕ್ಷಿಯ ವಿಚಾರಣೆಗೂ, ಆರೋಪಿಯ ವಿಚಾರಣೆಗೂ ವ್ಯತ್ಯಾಸ ತಿಳಿದಿಲ್ಲವೇ? ಎಂದು ಕಾಂಗ್ರೆಸ್ನವರಿಗೆ ಪ್ರಶ್ನಿಸಿದ್ದಾರೆ.
“ಭ್ರಷ್ಟ ಜನತಾ ಪಾರ್ಟಿ“ ಎಂದು ಹೆಸರಾಗಿದ್ದ ಬಿಜೆಪಿ ಈಗ “ಬಾಂಬ್ ಜನತಾ ಪಾರ್ಟಿ” ಎಂಬ ಹೆಸರು ಪಡೆಯಲು ಮುಂದಾಗಿದೆಯೇ!? ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿದ್ದ NIA ಈಗ ಆರೋಪಿಗಳನ್ನು ಹುಡುಕುತ್ತಾ ಬಿಜೆಪಿ ಬಾಗಿಲಲ್ಲಿ ಬಂದು ನಿಂತಿದೆ. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ, ತೀರ್ಥಹಳ್ಳಿ ತಾಲ್ಲೂಕಿನ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನು ಬಂಧಿಸಿದೆ. ನಾವು ಬ್ರಾಂಡ್ ಬೆಂಗಳೂರು ಮಾಡಲು ಹೊರಟಿದ್ದರೆ ಬಿಜೆಪಿ “ಬಾಂಬ್ ಬೆಂಗಳೂರು” ಮಾಡಲು ಹೊರಟಿದೆಯೇ? ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ತಮ್ಮ ಕಾರ್ಯಕರ್ತರ ಮೂಲಕ ಷಡ್ಯಂತ್ರ ರೂಪಿಸಿದೆಯೇ? NIA ತನಿಖಾ ಸಂಸ್ಥೆ ಜಗನ್ನಾಥ ಭವನವನ್ನೂ ಒಮ್ಮೆ ಶೋಧಿಸಿದರೆ ಸೂಕ್ತವಲ್ಲವೇ ಬಿಜೆಪಿ? ಎಂದು ಪ್ರಶ್ನಿಸಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿತ್ತು.
ಇದಕ್ಕೆ ಖಡಕ್ ಪ್ರತಿಕ್ರಿಯೆ ಕೊಟ್ಟಿರುವ ಪ್ರೀತಂಗೌಡ, ಕಾಂಗ್ರೆಸ್ಸಿಗರಿಗೆ ಪೂರ್ತಿ ವಿವರ ಓದುವ ವ್ಯವಧಾನ ಇಲ್ಲ ಅಂತಲ್ಲ, ಬೇಕೆಂದೇ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಸಾಕ್ಷಿಯ ವಿಚಾರಣೆಗೂ, ಆರೋಪಿಯ ವಿಚಾರಣೆಗೂ ವ್ಯತ್ಯಾಸ ತಿಳಿದಿಲ್ಲವೇ? ಕಾನೂನು ಕಟ್ಟಳೆ, ನ್ಯಾಯ-ನೀತಿ ಅಂತ ಪಾಠ ಮಾಡುವ ನಿಮ್ಮ ಪಕ್ಷದ ಮುಖ್ಯಮಂತ್ರಿಗಳಿಗೂ ತಿಳಿದಿಲ್ಲವೇ? ಕಾಂಗ್ರೆಸ್ಸಿನ ಸುಳ್ಳು ಸುದ್ಧಿ ಕಾರ್ಖಾನೆಯಲ್ಲಿ ತಯಾರಾಗುವ ಸುಳ್ಳುಗಳಿಗೆ ಆಯುಷ್ಯ ಕಡಿಮೆ. ಅಂದು, ಪಾಕಿಸ್ತಾನದ ಪರ ಘೋಷಣೆ ಕೂಗಿದವನ ತಪ್ಪನ್ನು ವೈಟ್ ವಾಷ್ ಮಾಡಲು ನಿಮ್ಮ ಇಡೀ ಸಂಪುಟವೇ ನಿಂತಿತ್ತು, ಆದರೆ ಸತ್ಯ ಹೊರಬಂತಲ್ಲವೇ?! ಪಾ’ಕೈ’ ಪ್ರೇಮಿಗಳು ಎಷ್ಟೇ ಸುಳ್ಳು ಹರಡಲು ಹೊರಟರೂ ಸತ್ಯ ಗಟ್ಟಿಯಾಗಿ ನಿಲ್ಲಲಿದೆ ಎಂದಿದ್ದಾರೆ.