Wednesday, July 9, 2025

Latest Posts

ನಿಮ್ಮ ಹಿಟ್‌ಲಿಸ್ಟ್‌ನಲ್ಲಿರುವ ಉಳಿಕೆ ಕಾಂಗ್ರೆಸ್ ನಾಯಕರನ್ನು ದೇವರೇ ರಕ್ಷಣೆ ಮಾಡಬೇಕು: ಡಿಕೆಶಿಗೆ ನಿಖಿಲ್ ವ್ಯಂಗ್ಯ

- Advertisement -

Political News: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮ ಬಗ್ಗೆ ಯಾರಾದರೂ ಮಾತನಾಡಿದರೆ, ಅಂಥವರ ವಿರುದ್ಧ ಏನಾದರೂ ಟ್ರ್ಯಾಪ್ ಮಾಡಿ, ಸಿಲುಕಿಸಿಬಿಡುತ್ತೀರಿ. ನಿಮ್ಮ ಹಿಟ್ ಲೀಸ್ಟ್ ನಲ್ಲಿ ಇನ್ನು ಯಾರ್ಯಾರಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟಿಸಿರುವ ಅವರು, ಭವಿಷ್ಯ, ಅವಕಾಶ ಮತ್ತು ನಂಬಿಕೆ ಬಗ್ಗೆ ಮಾತನಾಡುವ ಮಾನ್ಯ @DKShivakumar ಅವರೇ, 2023ರ ವಿಧಾನಸಭೆ ಚುನಾವಣೆಯ ಇತಿಹಾಸದ ಪುಟಗಳನ್ನೊಮ್ಮೆ ತಿರುಗಿಸಿ ನೋಡಿ. ನಂಬಿಕೆ ಮತ್ತು ವಿಶ್ವಾಸರ್ಹತೆ ಬಗ್ಗೆ ನೀವು ಮಾತನಾಡಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದ ಹಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ನಿಮನ್ನು ನಂಬಿ ಬಂದ ಮಾಜಿ ಉಪ ಮುಖ್ಯಮಂತ್ರಿ ಶ್ರೀ ಲಕ್ಷ್ಮಣ ಸವದಿ ಅವರನ್ನು ಮಂತ್ರಿ ಮಾಡಲಿಲ್ಲ. ಪಾಪ.. ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದ ಏಕೈಕ ಶಾಸಕ ಶ್ರೀ ಶಿವಲಿಂಗೇಗೌಡರನ್ನು ಸಹ ಮಂತ್ರಿ ಮಾಡಲಿಲ್ಲ, ಗುಬ್ಬಿ ಶಾಸಕರನ್ನು ಮಂತ್ರಿ ಮಾಡುವುದು ಇರಲಿ, ಅವರ ಶ್ರೀಮತಿ ಅವರನ್ನು ಡೇರಿ ಅಧ್ಯಕ್ಷರಾಗಿ ಮಾಡಲಿಲ್ಲ. ಇನ್ನು ರಾಮನಗರ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರಂತೂ ಮಂತ್ರಿ ಆಗಲು ರೆಡಿ ಮಾಡಿಸಿದ್ದ ಸೂಟುಕೋಟುಗಳು ಮೂಲೆಗೆ ಬಿದ್ದು ಧೂಳು ತಿನ್ನುತ್ತಿವೆ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

ಇನ್ನು ನಿಮ್ಮ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳಿಗೆ ಮುಡಾ ಟ್ರ್ಯಾಪ್! ಸಚಿವರು, ದಲಿತ ಸಮಾಜದ ಹಿರಿಯರಾದ ಪರಮೇಶ್ವರ್ ಅವರಿಗೆ ಚಿನ್ನದ ಟ್ರ್ಯಾಪ್, ಹಿರಿಯ ಸಚಿವರಾದ ರಾಜಣ್ಣ ಅವರಿಗೆ ಹನಿಟ್ರ್ಯಾಪ್!! ಇದೆಂಥಾ ವಿಶ್ವಾಸಾರ್ಹತೆ? ಇನ್ನು ನಿಮ್ಮ ಹಿಟ್ ಲಿಸ್ಟ್ ನಲ್ಲಿ ಇರುವ ಉಳಿಕೆ ಕಾಂಗ್ರೆಸ್ ನಾಯಕರನ್ನು ದೇವರೇ ರಕ್ಷಣೆ ಮಾಡಬೇಕು ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

ರಾಜಕೀಯವಾಗಿ ಗುದ್ದಾಡೋಣ. ಹೋರಾಟ ಮಾಡೋಣ. ಆರೋಗ್ಯಕರವಾಗಿ ಆಲೋಚನೆ ಮಾಡಿ. ಮುತ್ಸದ್ಧಿಯಾಗಿ ಬೆಳೆಯುವ ಕನಿಷ್ಠ ಪ್ರಯತ್ನವನ್ನಾದರೂ ಮಾಡಿ. ಈ ರಾಷ್ಟ್ರ ಕಂಡ ಅಪರೂಪದ ನಾಯಕರಾದ ಶ್ರೀ ದೇವೇಗೌಡ ಅವರ ಬಗ್ಗೆ ಮಾತನಾಡುವ ಮುನ್ನ ನಿಮ್ಮ ನಾಲಿಗೆಯ ಸ್ವಾಸ್ಥ್ಯವನ್ನು ಪರೀಕ್ಷೆ ಮಾಡಿಕೊಳ್ಳಿ. ಮಾತಿನಲ್ಲಿ ಎಚ್ಚರ ಇರದಿದ್ದರೆ ಅದು ನಿಮಗೇ ಮುಳುವು ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

- Advertisement -

Latest Posts

Don't Miss