ಬೆಂಗಳೂರು: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಪೂರ್ಣಗೊಂಡು ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಬಿಜೆಪಿ ಮೇಲುಗೈ ಸಾಧಿಸಿದೆ. ಈ ಮೂಲಕ ಬಿಜೆಪಿ ಕರ್ನಾಟಕದಲ್ಲಿ ಕೇಸರಿ ಪತಾಕೆ ಹಾರಿಸುವಲ್ಲಿ ಯಶಸ್ವಿಯಾಗಿದೆ.
ವಿಶ್ವಾಸಮತ ಯಾಚನೆ ಮೂಲಕ ದೋಸ್ತಿ ಸರ್ಕಾರ ಅಂತ್ಯ ಕಂಡಿದೆ. ವಿಧಾಸಭೆಯಲ್ಲಿ ಹಾಜರಿದ್ದ 205 ಮಂದಿ ಸದಸ್ಯರ ಪೈಕಿ ಒಟ್ಟು 105 ಮಂದಿ ಬಿಜೆಪಿ ಪರ ಮತ ಚಲಾಯಿಸಿದ್ರೆ, ದೋಸ್ತಿ ಪರ ಕೇವಲ 99 ಮತ ಚಲಾವಣೆಯಾಗಿದೆ. ಈ ಮೂಲಕ ಕಳೆದ ತಿಂಗಳಿನಿಂದ ಕತ್ತಿಯ ಅಲಗಿನ ಮೇಲಿದ್ದ ದೋಸ್ತಿ ಸರ್ಕಾರ ಪತನವಾಗಿದೆ.
ರಾಜ್ಯದಲ್ಲಿ 14 ತಿಂಗಳು ಯಶಸ್ವಿ ಆಡಳಿತ ನಡೆಸಿದ್ದ ಸಿಎಂ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡಿದ್ದಾರೆ. ಕೊನೆಗೂ ಸರ್ಕಾರದ ವಿರುದ್ಧ ಕತ್ತಿ ಮಸಿಯುತ್ತಿದ್ದ ಅತೃಪ್ತರ ಇಚ್ಛೆಯಂತೆ ಸರ್ಕಾರ ಉರುಳಿದೆ. ಇನ್ನು ದೋಸ್ತಿ ಸದಸ್ಯರು ವಿಶ್ವಾಸಮತದಲ್ಲಿ ಹಿನ್ನಡೆಯುಂಟಾದ ಹಿನ್ನೆಲೆಯಲ್ಲಿ ಸದನದ ಹಿಂಬಾಗಿಲಿನಿಂದ ನಿರ್ಗಮಿಸಿದ್ರು. ಇನ್ನು ನಿರೀಕ್ಷೆಯಂತೆಯೇ ಮೇಲುಗೈ ಸಾಧಿಸಿರುವ ಬಿಜೆಪಿ ಗೆಲುವಿನ ಅಲೆಯಲ್ಲಿ ಬೀಗುತ್ತಿದೆ.