ರಾಯಚೂರು:
ಲಿಂಗಸೂಗುರು ತಾಲೂಕಿನ ಹೊಸಗುಡ್ಡ ತಾಂಡಾದಲ್ಲಿ ಲಮಾಣಿ ಸಮುದಾಯದ ರೇಣುಕಾ ಎಂಬ ಮಹಿಳೆಯನ್ನು ಆಕೆಯ ಗಂಡ ಸುನೀಲ್ ಮತ್ತು ಅವರ ಸ್ನೇಹಿತರು 6 ಜನರು ಕೊಲೆ ಮಾಡಿ ಮೃತದೇಹ ಬಾವಿಗೆ ಎಸೆದಿದ್ದಾರೆ ಎಂಬ ಅನುಮಾನದ ಮೇಲೆ ಹಟ್ಟಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಪೊಲೀಸ್ ಠಾಣೆ ಲಾಕಪ್ನಲ್ಲಿ ವಿಚಾರಣೆ ನಡೆಸಿದ್ದರು. ರೇಣುಕಾಳ ಕೊಲೆ ಮಾಡಿದ ಆರೋಪಿಗಳು ಹಟ್ಟಿ ಪೊಲೀಸ್ ಠಾಣೆಯಲ್ಲಿ ಇದ್ದಾರೆ ಎಂಬ ಸುದ್ದಿ ತಿಳಿದು ಕೊಲೆಗೀಡಾದ ರೇಣುಕಾಳ ತವರೂರು ಗೋನವಾಟ್ಲ ತಾಂಡಾದವರು ಆಕ್ರೋಶದಿಂದ ನಾವು ರೇಣುಕಾ ಸಾವಿಗೆ ಸಂಬಂಧಿಸಿದಂತೆ ದೂರು ನೀಡಿಲ್ಲ. ಆರೋಪಿಗಳನ್ನು ಏಕೆ ಬಂಧಿಸಿದ್ದೀರಿ? ಹೊರಗೆ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಅಕ್ರಮವಾಗಿ ಠಾಣೆಗೆ ನುಗ್ಗಿ ಲಾಕಪ್ನಲ್ಲಿದ್ದ ಆರೋಪಿಗಳ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ ಬಿಡಿಸಲು ಬಂದ ಪೊಲೀಸರು ಹಾಗೂ ಮಹಿಳಾ ಪೇದೆ, ಸಿಬ್ಬಂದಿ ಮೇಲೂ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.ಘಟನೆ ವೇಳೆ ಹಟ್ಟಿ ಪೊಲೀಸ್ ಠಾಣೆ ಸಿಪಿಐ ಪ್ರಕಾಶ ಮಾಳಿ ಅನ್ಯ ಕಾರ್ಯ ನಿಮಿತ್ತ ಬೇರೆಡೆ ತೆರಳಿದ್ದರು. ಜೊತೆಗೆ ಠಾಣೆಯ ಹಲವು ಪೊಲೀಸ್ ಸಿಬ್ಬಂದಿ ಕಾರ್ಯಕ್ರಮಗಳ ಬಂದೋಬಸ್್ತ ವ್ಯವಸ್ಥೆಗೆ ತೆರಳಿದ್ದು, ಬೆರಳೆಣಿಕೆಯಷ್ಟುಸಿಬ್ಬಂದಿ ಮಾತ್ರ ಕಚೇರಿಯಲ್ಲಿರುವುದು ತಿಳಿದು ಬಂದಿದೆ. ಠಾಣೆಗೆ ಅಕ್ರಮವಾಗಿ ನುಗ್ಗಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಲ್ಲದೇ ಪೊಲೀಸ್ರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 51 ಜನರ ಮೇಲೆ ಹಟ್ಟಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.