News: ಭುಜದ ನೋವಿನಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಕೈಗೊಂಡಿರುವ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
49 ವರ್ಷದ ಟೆಕ್ಕಿಯೊಬ್ಬರು ಕಳೆದ 10 ವರ್ಷಗಳಿಂದ ಎಡ ಭುಜದ ನೋವಿನಿಂದ ಬಳಲುತ್ತಿದ್ದರು. ಆದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆಯ ಕೈಗೊಂಡಿದ್ದರು. ಆದ್ರೆ ತದನಂತರ ಅವರಿಗೆ ಸಹಜವಾಗಿ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಕ್ರಮೇಣ ಭುಜದ ನೋವು ಹೆಚ್ಚಾಗುತ್ತಾ ಹೋಯಿತು. ಅವರಿಗೆ ತಮ್ಮ ತೋಳನ್ನು ಎತ್ತಿ ಚಾಲನೆ ಮಾಡುವುದೇ ಕಷ್ಟಕರವಾಗಿತ್ತು. ದಿನೇ ದಿನೇ ನೋವು ತೀವ್ರಗೊಳ್ಳಲಾರಂಬಿಸಿತು. ತದನಂತರ ನಗರದ ವಾಸವಿ ಆಸ್ಪತ್ರೆಯ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ ಶ್ರೀವತ್ಸ ಸುಬ್ರಹ್ಮಣ್ಯ ಅವರನ್ನು ಭೇಟಿ ಮಾಡಿದರು.
ವೈದ್ಯರು ರೋಗಿಯನ್ನು ಪರೀಕ್ಷಿಸಿದ್ದು, ಭುಜದಲ್ಲಿ ಅತೀವವಾದ ನೋವಿನಿಂದ ಬಳಲುತ್ತಿರುವುದು ಗೊತ್ತಾಗಿದೆ. ರೋಗಿಯ ಕೀಲುಗಳಲ್ಲಿನ ಕಾರ್ಟಿಲೆಜ್ ಸವೆದುಹೋಗಿ ಮೂಳೆಗಳು ಪರಸ್ಪರ ಉಜ್ಜುವುದರಿಂದ ರೋಗಿಗೆ ಹೆಚ್ಚು ನೋವು ಕಾಣೀಸಿಕೊಳ್ಳುತ್ತಿರುವುದು ವೈದ್ಯರ ಗಮನಕ್ಕೆ ಬಂದಿದೆ. ಆಗ ಭುಜದ ಬದಲಿ (ಕೀಲು ಮೇಲ್ಮೈಯನ್ನು ಕೃತಕ ಘಟಕಗಳಿಂದ ಬದಲಾಯಿಸುವುದು) ಶಸ್ತ್ರಚಿಕಿತ್ಸೆಯನ್ನು ಮಾಡಲು ಮುಂದಾಗಿದ್ದು, ನಿಖರ ಫಲಿತಾಂಶಕ್ಕಾಗಿ ಸಾಫ್ಟ್ವೇರ್ ತಂತ್ರಜ್ಞಾನವನ್ನು ಬಳಸಿ ವರ್ಚುವಲ್ ಇಂಪ್ಲಾಂಟ್ ಮೂಲಕ ಶಸ್ತ್ರಚಿಕಿತ್ಸೆ ಕೈಗೊಳ್ಳಲು ನಿರ್ಧರಿಸಿದರು.
ಅಗತ್ಯ ಸ್ಕ್ಯಾನ್ಗಳನ್ನ ಕೈಗೊಂಡ ತದನಂತರ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಎರಡು ದಿನಗಳ ಬಳಿಕ ರೋಗಿಯು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಮೂರು ತಿಂಗಳ ಬಳಿಕ ರೋಗಿಯು ನೋವಿನಿಂದ ಮುಕ್ತಿಹೊಂದಿದ್ದು, ಚೇತರಿಕೆಯನ್ನು ಕಂಡಿದ್ದಾರೆ. ಇದೀಗ ಅವರು ಎಲ್ಲರಂತೆ ಸಾಮಾನ್ಯವಾಗಿ ದೈನಂದಿನ ಜೀವನವನ್ನು ಸಾಗಿಸುತ್ತಿದ್ದು, ಯಾವುದೇ ತೊಂದರೆ ಇಲ್ಲದೆ ಬದುಕು ಸಾಗಿಸುತ್ತಿದ್ದಾರೆ ಎಂದು ತಜ್ಞರಾದ ಡಾ. ಶ್ರೀವತ್ಸ ಸುಬ್ರಹ್ಮಣ್ಯ ತಿಳಿಸಿದರು.